ಸುಳ್ಯದಲ್ಲಿ ತೆಂಗು ರೈತ ಉತ್ಪಾದಕರ ಕಂಪೆನಿ ಶಾಖೆಯ ಉದ್ಘಾಟನೆ
ಪ್ರಥಮ “ತೆಂಗು ರತ್ನ” ಪ್ರಶಸ್ತಿ ಪ್ರದಾನ

ಸುಳ್ಯ: ದಕ್ಷಿಣ ಕನ್ನಡ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪೆನಿಯ ನಿ. ಇದರ ಸುಳ್ಯ ಶಾಖೆ ಮಂಗಳವಾರ ಉದ್ಘಾಟನೆಗೊಂಡಿತು. ಸುಳ್ಯದ ರಥಬೀದಿಯಲ್ಲಿರುವ ಸ್ಟುಡಿಯೋ ಗೋಪಾಲಕೃಷ್ಣ ಕೆ.ಎಸ್ ರವರ ಮಾಲಕತ್ವದ ಶ್ರೀ ದೇವಿ ಕಾಂಪ್ಲೆಕ್ಸ್ ನಲ್ಲಿ ಸಂಸ್ಥೆಯ ಶಾಖೆಯನ್ನು ಸುಳ್ಯದ ಉದ್ಯಮಿ ಪ್ರಗತಿಪರ ತೆಂಗು ಕೃಷಿಕರಾದ ಅಶೋಕ ಪ್ರಭು ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ದ.ಕ ಜಿಲ್ಲಾ ತೆಂಗು ರೈತ ಉತ್ಪಾದಕರ ಕಂಪನಿಯ ಅಧ್ಯಕ್ಷ ಎಂ.ಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾಂಪ್ಲೆಕ್ಸ್ ಮಾಲಕ ಸ್ಟುಡಿಯೊ ಗೋಪಾಲಕೃಷ್ಣ ರವರು ರಿಬ್ಬನ್ ಕತ್ತರಿಸಿದರು. ಮುಖ್ಯ ಅತಿಥಿಗಳಾಗಿ ಸುಳ್ಯ ತಾಲೂಕು ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು, ಪ್ರಗತಿಪರ ಕೃಷಿಕ ಅಶೋಕ ಪಂಜ, ಶ್ರೀದೇವಿ ಸ್ಟುಡಿಯೋ ಮಾಲಕ ಸತೀಶ್ ಉಪಸ್ಥಿತರಿದ್ದು ಸಂಸ್ಥೆಗೆ ಶುಭ ಹಾರೈಸಿದರು. ಈ ಸಂದರ್ಭ ಪ್ರಗತಿಪರ ಕೃಷಿಕ ಆಲೆಟ್ಟಿ ಗ್ರಾಮದ ಪರಿವಾರ ಲಕ್ಷ್ಮಣ ಗೌಡ ರವರನ್ನು ಶಾಲು ಹೊದಿಸಿ, ಹಾರಾರ್ಪಣೆ ಮಾಡಿ ಪೇಟ ತೊಡಿಸಿ ಫಲಪುಷ್ಪ ಮತ್ತು ಸ್ಮರಣಿಕೆ ನೀಡಿ ಪ್ರಥಮವಾಗಿ “ತೆಂಗು ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ತೆಂಗಿನ ಮರದಿಂದ ಬಿದ್ದು ಆಘಾತಕೊಳಪಟ್ಟು ಅನಾರೋಗ್ಯಕ್ಕೆ ತುತ್ತಾದ ಶಿವರಾಮ ಎ.ಬಿ.ತೊಡಿಕಾನ ಅವರಿಗೆ ಒಂದು ವರ್ಷದ ಚಿಕಿತ್ಸೆಯ ಬಾಬ್ತು ರೂ.35 ಸಾವಿರ ವಿಮಾ ಮೊತ್ತ ಪರಿಹಾರವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಂಪನಿಯ ಸುಳ್ಯ ತಾಲೂಕಿನ ನಿರ್ದೇಶಕ ಕುಸುಮ್ ರಾಜ್ ಪ್ರಾಸ್ತಾವಿಕ ಮಾತನಾಡಿದರು. ಪುತ್ತೂರು ತಾಲೂಕು ನಿರ್ದೇಶಕ ವರ್ಧಮಾನ್ ಜೈನ್, ಸುಳ್ಯ ಮೇಲ್ವಿಚಾರಕ ಹವಿನ್ ಕುಮಾರ್, ಕಾರ್ಯ ನಿರ್ವಹಣಾಧಿಕಾರಿ ಜ್ಞಾನ, ಸಿಬ್ಬಂದಿಗಳಾದ ಪ್ರಶಾಂತ್, ಸ್ವಸ್ತಿಕ್, ಅಶ್ವಥ್, ನವ್ಯಶ್ರೀ, ಕಾವ್ಯ, ರಕ್ಷಾ, ತೀರ್ಥಾನಂದ ರವರು ಸಹಕರಿಸಿದರು.
ನೊಡೆಲ್ ಅಧಿಕಾರಿ ಸುಬ್ಬು ಸೆಂಟ್ಯಾರ್ ಸ್ವಾಗತಿಸಿ, ವಂದಿಸಿದರು.







