ಮಂಗಳೂರು: ಬಹುಮಾನದ ಆಸೆಗಾಗಿ ಕಮಿಷನ್ ನೀಡಿ ಮೋಸ ಹೋದ ಬಳಿಕ ಪೊಲೀಸರಿಗೆ ದೂರು
![ಮಂಗಳೂರು: ಬಹುಮಾನದ ಆಸೆಗಾಗಿ ಕಮಿಷನ್ ನೀಡಿ ಮೋಸ ಹೋದ ಬಳಿಕ ಪೊಲೀಸರಿಗೆ ದೂರು ಮಂಗಳೂರು: ಬಹುಮಾನದ ಆಸೆಗಾಗಿ ಕಮಿಷನ್ ನೀಡಿ ಮೋಸ ಹೋದ ಬಳಿಕ ಪೊಲೀಸರಿಗೆ ದೂರು](https://www.varthabharati.in/sites/default/files/images/articles/2021/12/14/317641-1639493819.jpg)
ಮಂಗಳೂರು, ಡಿ.14: ನಿಮಗೆ ಬಹುಮಾನವೊಂದು ಬಂದಿದೆ. ಅದರ ಹಣ ಬೇಕಿದ್ದರೆ ನನಗೆ ಶೇ.1 ಕಮಿಷನ್ ನೀಡಿ ಎಂಬ ಅಪರಿಚಿತ ವ್ಯಕ್ತಿಯೊಬ್ಬರ ಕರೆಯನ್ನು ನಂಬಿದ ವ್ಯಕ್ತಿಯೊಬ್ಬರು ಕಮಿಷನ್ ನೀಡಿದ ಬಳಿಕ ಮೋಸ ಹೋಗಿರುವುದಾಗಿ ಅರಿವಾಗುತ್ತಲೇ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಬ್ಯಾಂಕ್ ಆಫ್ ಬರೋಡಾ ಕೊಣಾಜೆ ಶಾಖೆಯಲ್ಲಿ ಖಾತೆಯನ್ನು ಹೊಂದಿರುವ ವ್ಯಕ್ತಿಗೆ ಜು.2ರಂದು ಬೆಳಗ್ಗೆ 10ಕ್ಕೆ 9432961373 ಮೊಬೈಲ್ ಸಂಖ್ಯೆಯಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿಯೋರ್ವ ‘ನಿಮಗೆ 12.50 ಲ.ರೂ. ಲಕ್ಕಿ ಬಹುಮಾನ ಬಂದಿದೆ. ಅದನ್ನು ಪಡೆಯಬೇಕಾದರೆ ಶೇ.1 ಹಣ ನೀಡಬೇಕು’ ಎಂದು ತಿಳಿಸಿದ. ಅದನ್ನು ನಂಬಿದ ದೂರುದಾರ ವ್ಯಕ್ತಿ ತನ್ನ ಖಾತೆಯಿಂದ 12,500 ರೂ. ವನ್ನು ಗೂಗಲ್ಪೇ ಸಂಖ್ಯೆ 8017976436ಕ್ಕೆ ಕಳುಹಿಸಿದ್ದಾರೆ. ಜು.16ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿಯು ಶೇ.3 ಹಣ ನೀಡಿದರೆ ಬಹುಮಾನ ನೀಡುವುದಾಗಿ ಹೇಳಿದ. ಅದರಂತೆ ದೂರುದಾರ ವ್ಯಕ್ತಿ ಮತ್ತೊಮ್ಮೆ ಗೂಗಲ್ ಪೇ ಸಂಖ್ಯೆ 9477219953ಕ್ಕೆ 37,500 ರೂ. ಕಳುಹಿಸಿದ್ದಾರೆ. ಆ ಬಳಿಕ ಮತ್ತಷ್ಟು ಅಪರಿಚಿತ ವ್ಯಕ್ತಿಗಳು ಬೇರೆ ಬೇರೆ ಸಂಖ್ಯೆಯಿಂದ ಕರೆ ಮಾಡಿ ದೂರುದಾರ ವ್ಯಕ್ತಿಯ ಖಾತೆಯಿಂದ ಹಂತ ಹಂತವಾಗಿ 2,19,800 ರೂ.ಗಳನ್ನು ತಮ್ಮಖಾತೆಗಳಿಗೆ ವರ್ಗಾಯಿಸಿಕೊಂಡಿದ್ದಾರೆ. ಕೊನೆಗೂ ತಾನು ಮೋಸ ಹೋಗಿರುವುದನ್ನು ಅರಿತ ವ್ಯಕ್ತಿಯು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.