ಬಿಜೆಪಿ ಸರಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ; ಸಿದ್ದರಾಮಯ್ಯ ವಾಗ್ದಾಳಿ

ಬೆಳಗಾವಿ (ಸುವರ್ಣವಿಧಾನಸೌಧ), ಡಿ. 14: ರಾಜ್ಯದಲ್ಲಿ 2019ರಲ್ಲಿ ಬಂದ ಭಾರೀ ಪ್ರವಾಹದಿಂದಾಗಿ ಬಿದ್ದ ಮನೆಗಳು 2.47 ಲಕ್ಷ, ಆ ಪೈಕಿ 1.14 ಲಕ್ಷ ಮನೆಗಳಿಗೆ ಇನ್ನೂ ಪರಿಹಾರ ನೀಡಿಲ್ಲ. ಸೂರು ಕಳೆದುಕೊಂಡ ಬಡ ಜನ ದಿಕ್ಕು ತೋಚದೆ ಕೂತಿದ್ದಾರೆ. ಬಿಜೆಪಿ ಸರಕಾರಕ್ಕೆ ಕಣ್ಣು, ಕಿವಿ ಯಾವುದೂ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಅಕಾಲಿಕ ಮಳೆ, ಅತಿವೃಷ್ಟಿಯಿಂದ ಆಗಿರುವ ಹಾನಿಯ ಬಗ್ಗೆ ವಿಷಯ ಪ್ರಸ್ತಾಪಿಸಿದ ಅವರು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳೇ ರೈತ ವಿರೋಧಿಯಾಗಿದೆ. ಶೇ.33ಕ್ಕಿಂತ ಕಡಿಮೆ ಬೆಳೆ ಹಾನಿಗೆ ಪರಿಹಾರ ನೀಡಲ್ಲ. ಬೆಳೆದು ನಿಂತ ಬೆಳೆಗಳು ಹಾನಿಯಾದಾಗ ಮಾತ್ರ ಪರಿಹಾರ ನೀಡಲಾಗುತ್ತೆ. ಕಟಾವು ಆಗಿರುವ ಬೆಳೆ ಮಳೆಯಿಂದ ಹಾನಿಯಾದರೆ ಅದಕ್ಕೆ ಪರಿಹಾರ ಸಿಗಲ್ಲ.
ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳು ಕೊನೆಯ ಬಾರಿ ಪರಿಷ್ಕರಣೆಗೊಂಡಿದ್ದು 2015ರಲ್ಲಿ. ಹಳೆಯ ನಿಯಮಗಳಿಗೆ ಬದಲಾವಣೆ ತಂದು ನಷ್ಟದಲ್ಲಿರುವ ಎಲ್ಲ ರೈತರಿಗೆ ಪರಿಹಾರ ನೀಡುವಂತೆ ಪರಿಷ್ಕರಿಸಬೇಕು ಎಂದು ಆಗ್ರಹಿಸಿದರು.
ನಾನು ಸಿಎಂ ಆಗಿದ್ದ ಅವಧಿಯಲ್ಲಿ ಕೊಬ್ಬರಿಯ ಪ್ರೋತ್ಸಾಹ ಧನವನ್ನು 700 ರೂ.ನಿಂದ 1000 ರೂ.ಗಳಿಗೆ ಮಾಡಿದ್ದೆ. ನಾವು 2017-18 ರಲ್ಲಿ 2.96 ಲಕ್ಷ ಕ್ವಿಂಟಾಲ್ ಕೊಬ್ಬರಿ ಖರೀದಿ ಮಾಡಿದ್ದೆವು. ಬಿಜೆಪಿ ಸರಕಾರ ಖರೀದಿ ಮಾಡಿದ್ದು 50,400 ಕ್ವಿಂಟಾಲ್ ಮಾತ್ರ ಎಂದು ವಾಗ್ದಾಳಿ ನಡೆಸಿದರು.
ನಮ್ಮ ಸರಕಾರ ತೊಗರಿ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಮೇಲೆ ಮೊದಲು 450 ರೂ.ನಂತರ 550 ರೂ.ಅನ್ನು ಹೆಚ್ಚುವರಿಯಾಗಿ ನೀಡಿತ್ತು. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಇದನ್ನು 300 ರೂ.ಗಳಿಗೆ ಇಳಿಸಿದೆ. ಇದೇನಾ ತಮ್ಮದು ರೈತ ಪರ ಸರಕಾರ ಎಂದು ಕರೆದುಕೊಳ್ಳುವವರ ಧೋರಣೆ? ಎಂದು ಅವರು ವಾಗ್ದಾಳಿ ನಡೆಸಿದರು.
ಎನ್ಡಿಆರ್ ಎಫ್ ನಿಯಮದ ಪ್ರಕಾರ ಕುಷ್ಕಿ ಜಮೀನಿಗೆ 6,800 ರೂ. ಮತ್ತು ತರಿ ಜಮೀನಿಗೆ 13,500 ರೂ. ಮತ್ತು ತೋಟಗಾರಿಕಾ ಬೆಳೆಗಳಿಗೆ 18 ಸಾವಿರ ರೂ.ಪರಿಹಾರ ನೀಡಬೇಕು ಮತ್ತು ಗರಿಷ್ಠ ಎರಡು ಹೆಕ್ಟೇರ್ ಬೆಳೆಹಾನಿಗೆ ಮಾತ್ರ ಪರಿಹಾರ ನೀಡಬೇಕೆಂದಿದೆ ಎಂದರು.
ಎನ್ಡಿಆರ್ಎಫ್ ನಿಯಮಗಳಡಿ ಈಗ ನೀಡುತ್ತಿರುವ ಪರಿಹಾರದ ಹಣ ರೈತರು ಬಿತ್ತನೆ ಬೀಜ ಖರೀದಿ ಮಾಡಲು ವೆಚ್ಚ ಮಾಡುವ ಹಣಕ್ಕಿಂತ ಕಡಿಮೆಯಿದ್ದು, ಇದನ್ನು ಕನಿಷ್ಠ ಮೂರು ಪಟ್ಟು ಹೆಚ್ಚಿಸಬೇಕು ಎಂದು ರಾಜ್ಯ ಹಾಗೂ ಕೇಂದ್ರ ಸರಕಾರಗಳನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರಸಕ್ತ ವರ್ಷ 39ಸಾವಿರ ಮನೆಗಳು ಮಳೆಯಿಂದಾಗಿ ಹಾನಿಗೀಡಾಗಿದೆ. ಈ ವರೆಗೆ ಒಂದೇ ಒಂದು ಮನೆಗೆ ಪರಿಹಾರದ ಹಣ ನೀಡಿಲ್ಲ. 12 ಲಕ್ಷ ಎಕರೆ ಪ್ರದೇಶಕ್ಕೆ 782 ಕೋಟಿ ರೂ.ಬೆಳೆ ಪರಿಹಾರದ ಹಣ ಮಾತ್ರ ನೀಡಲಾಗಿದೆ ಎಂದು ಅವರು ತಿಳಿಸಿದರು.
ಬೆಳೆ ನಷ್ಟ ನಮೂದು ಮಾಡುವುದನ್ನು ಈ ತಿಂಗಳ 8ನೆ ತಾರೀಖಿಗೆ ಕೊನೆಗೊಳಿಸಲಾಗಿದೆ. ಹಲವು ರೈತರ ಬೆಳೆನಷ್ಟದ ಮಾಹಿತಿ ಇನ್ನೂ ನಮೂದಾಗದೆ ಬಾಕಿ ಉಳಿದಿರುವುದರಿಂದ ಬೆಳೆ ನಷ್ಟ ನಮೂದು ಪ್ರಕ್ರಿಯೆಯನ್ನು ಬಿಜೆಪಿ ಸರಕಾರ ಮುಂದುವರೆಸಬೇಕು ಎಂದು ಅವರು ತಿಳಿಸಿದರು.
ಹಿಂದಿನ ಯು.ಪಿ.ಎ ಸರಕಾರದ ಅವಧಿಯ ಬಜೆಟ್ ಗಾತ್ರ 16.65 ಲಕ್ಷ ಕೋಟಿ ರೂ.ಇತ್ತು, ಕೇಂದ್ರದ ಈಗಿನ ಬಜೆಟ್ ಗಾತ್ರ 34.83 ಲಕ್ಷ ಕೋಟಿ ರೂ.ಆಗಿದೆ. ಬಜೆಟ್ ಗಾತ್ರ ಹೆಚ್ಚಾದಂತೆ ಎನ್ಡಿಆರ್ಎಫ್ನ ಗಾತ್ರ, ರಾಜ್ಯಗಳಿಗೆ ನೀಡುವ ಪರಿಹಾರದ ಹಣ ಹೆಚ್ಚಾಗಬೇಕಲ್ಲವೇ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ವಿಪತ್ತು ಪರಿಹಾರ ನಿಧಿ ನಿಯಮಗಳ ಅನ್ವಯ 2019 ರಲ್ಲಿ ರಾಜ್ಯ ಬಿಜೆಪಿ ಸರಕಾರ ಪರಿಹಾರ ನೀಡಿದ್ದು 1,652 ಕೋಟಿ ರೂ. ನೀಡಬೇಕಾದುದ್ದು 3,891 ಕೋಟಿ ರೂ., 2020ರಲ್ಲಿ 1,318 ಕೋಟಿ ರೂ.ಪರಿಹಾರ ನೀಡಲಾಗಿದೆ. ಎರಡು ವರ್ಷದಲ್ಲಿ ಒಟ್ಟು 2,971 ಕೋಟಿ ರೂ.ಮಾತ್ರ ಪರಿಹಾರ ನೀಡಲಾಗಿದೆ’
-ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ







