ರಾಘವ ನಾಯ್ಕ್ ಗೆ ಡಾಕ್ಟರೇಟ್

ಉಡುಪಿ, ಡಿ.15: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ ಇಲ್ಲಿನ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ರಾಘವ ನಾಯ್ಕ್, ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗಕ್ಕೆ ಸಲ್ಲಿಸಿದ ‘ದಿ ರೋಲ್ ಆಫ್ ಹಾಲಕ್ಕಿ ವಿಮೆನ್ ಆಫ್ ಉತ್ತರ ಕನ್ನಡ ಡಿಸ್ಟ್ರಿಕ್ಟ್ ಇನ್ ಇಕೊನೋಮಿಕ್ ಪ್ರೊಡಕ್ಟಿವಿಟಿ ಆ್ಯಂಡ್ ಇಕೊಲೋಜಿಕಲ್ ಸಸ್ಟೆನ್ ಬಿಲಿಟಿ- ಎ ಸೋಶಿಯೋಲಾಜಿಕಲ್ ಸ್ಟಡಿ’ ಎಂಬ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ಪಡೆದಿದ್ದಾರೆ.
ರಾಘವ ನಾಯ್ಕ್, ಕರ್ನಾಟಕದ ಪ್ರಮುಖ ಸಮಾಜಶಾಸ್ತ್ರ ಪ್ರಾಧ್ಯಾಪಿಕೆ ಕರ್ನಾಟಕ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಪ್ರೊ. ಜಯಶ್ರೀ ಎಸ್. ಇವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿದ್ದರು. ರಾಘವ ನಾಯ್ಕ ಮೂಲತಃ ಬ್ರಹ್ಮಾವರ ಸಮೀಪದ ಕೆಂಜೂರಿನವರಾಗಿದ್ದು ಎಸ್ಎಂಎಸ್ ಕಾಲೇಜು ಬ್ರಹ್ಮಾವರದಲ್ಲಿ ಬಿ.ಎ. ಪದವಿ ಹಾಗೂ ಮಂಗಳೂರು ವಿವಿಯಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದರು.
ಕಾರ್ಕಳದ ಭುವನೇಂದ್ರ ಕಾಲೇಜು, ಮೂಡಬಿದ್ರೆ ಮಹಾವೀರ ಕಾಲೇಜಿನಲ್ಲಿ ಸೇವೆ ಸಲ್ಲಿಸಿದ ಅವರು, ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಪು ಹಾಗೂ ಕಾರವಾರಗಳಲ್ಲಿ ಸೇವೆ ಸಲ್ಲಿಸಿ, ಪ್ರಸ್ತುತ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಎಂ.ಎ. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನಾಯ್ಕ್ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ನಿಯತಕಾಲಿಕಗಳಲ್ಲಿ ಇವರ ಸಂಶೋಧನಾ ಲೇಖನಗಳು ಪ್ರಕಟವಾಗಿವೆ.







