ಡಾ.ಉದಯ ಶೆಟ್ಟಿಗೆ ರಾಜ್ಯಮಟ್ಟದ ಸೇವಾ ಪ್ರಶಸ್ತಿ

ಉಡುಪಿ, ಡಿ.15: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಾಣಿಜ್ಯ ಶಾಸ್ತ್ರ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ. ಉದಯ ಶೆಟ್ಟಿ ಕೆ. ಇವರಿಗೆ ಭಾರತ್ ಸ್ಕೌಟ್ಸ್ ಗೈಡ್ಸ್ ಕರ್ನಾಟಕ 5 ವರ್ಷಗಳ ಸೇವಾ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ.ಉದಯ ಶೆಟ್ಟಿ ಕಳೆದ ಹಲವು ವರ್ಷಗಳಿಂದ ಸ್ಕೌಟ್ಸ್ ಗೈಡ್ಸ್ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು, ಸ್ಕೌಟ್ಸ್ ರೋವರ್ ವಿಭಾಗದಲ್ಲಿ ಹಿಮಾಲಯ ಉಡ್ ಬ್ಯಾಡ್ಜ್ ತರಬೇತಿಯನ್ನು ಮಧ್ಯ ಪ್ರದೇಶದ ಸ್ಕೌಟ್ಸ್ ಕೇಂದ್ರ ಸಂಸ್ಥೆಯಲ್ಲಿ ಪಡೆದಿದ್ದರು.ರಾಜ್ಯಮಟ್ಟದ ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಹಲವು ತರಬೇತಿ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಜಿಲ್ಲಾ ಮಟ್ಟದ ಹಲವು ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದಾರೆ.
ಉಡುಪಿ ಪರ್ಯಾಯ, ಕಾರ್ಕಳ ಬಾಹುಬಲಿ ಮಸ್ತಕಾಭಿಷೇಕದಂತಹ ಹಲವು ಸೇವಾ ಶಿಬಿರಗಳಲ್ಲಿ ಭಾಗವಹಿಸಿ ಸ್ಕೌಟ್ಸ್ ಗೈಡ್ಸ್ ಸಂಘಟನೆಯ ಯಶಸ್ಸಿಗೆ ಇವರು ನೀಡಿರುವ ಕೊಡುಗೆಯನ್ನು ಗುರುತಿಸಿ ರಾಜ್ಯಮಟ್ಟದ ಈ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.





