ಬೆಣ್ಣೆಕುದ್ರು ಜಾತ್ರಾ ಮಹೋತ್ಸವ ಪ್ರಾರಂಭ

ಬಾರಕೂರು, ಡಿ.16: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಮೊಗವೀರ ಕುಲಬಾಂಧವರ ನಂಬಿ ಆರಾಧಿಸಿಕೊಂಡು ಬರುತ್ತಿ ರುವ ಇಲ್ಲಿಗೆ ಸಮೀಪದ ಬೆಣ್ಣೆಕುದ್ರು ಶ್ರೀಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನ ಜಾತ್ರಾ ಮಹೋತ್ಸವ ಪ್ರಾರಂಭಗೊಂಡಿದ್ದು, ಡಿ.19ರವರೆಗೆ ನಡೆಯಲಿದೆ.
ಸುಮಾರು ಒಂದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನ, ಒಂಭತ್ತು ತಲೆಮಾರಿನ ಶ್ರೇಷ್ಠವಾದ ಗುರು ಪರಂಪರೆಯ ನೆಲೆವೀಡಾಗಿತ್ತು. ಸಾಮೂಹಿಕ ಪ್ರಾರ್ಥನೆ ಸಲ್ಲಿಕೆಗೆ ಈ ಕ್ಷೇತ್ರ ಪ್ರಸಿದ್ಧವಾಗಿದೆ.
ಈ ದೇವಸ್ಥಾನದಲ್ಲಿ ಇಂದು ಬೆಳಗಿನಿಂದ ಮಹಾಮಂಗಳಾರತಿ, ಪರಿವಾರ ದೇವರುಗಳ ನೃತ್ಯಸೇವೆ, ತುಲಾಭಾರಾದಿ ಹರಕೆಗಳು ನಡೆದವು. ಡಿ.17ರಂದು ಪರಿವಾರ ದೇವರುಗಳ ನೃತ್ಯಸೇವೆ, ತುಲಾಭಾರಾದಿ ಹರಕೆಗಳು, ಮಧ್ಯಾಹ್ನ ಮುಳ್ಳುಹಾವಿಗೆ ದರ್ಶನ, ಬೆನಗಲ್ಲು ಪೂಜೆ, ಯೋಗಿ ಪುರುಷರ ದರ್ಶನ, ಬೊಬ್ಬರ್ಯ ದೇವರ ದರ್ಶನ, ಅಜ್ಜಮ್ಮ ದೇವರಿಗೆ ಹೂವು ಅರ್ಪಣೆ, ಡಿ.18ರಂದು ಬೆಳಗ್ಗೆ 11 ಗಂಟೆಗೆ ನಾಗದೇವರ ದರ್ಶನ, 12 ಗಂಟೆಗೆ ಮಹಾಪೂಜೆ, ಹಸಲ ದೈವ, ಕೋಳಿಯಾರ ದೈವದ ಪೂಜೆ, ರಾತ್ರಿ9ಕ್ಕೆ ಮಲೆಸಾವಿರ ಮತ್ತು ಪರಿವಾರ ದೈವಗಳ ಕೋಲ ಪ್ರಾರಂಭ, ಡಿ.19ರಂದು ಬೆಳಿಗ್ಗೆ 6 ಗಂಟೆಗೆ ಮಲೆಸಾವಿರ ದೈವ ದರ್ಶನ, 8 ಗಂಟೆಗೆ ಹಾಲಾವಳಿ, ಪರಿವಾರ ದೈವಗಳ ಕೋಲ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.






