ದೇಶದಲ್ಲಿ ರಸಗೊಬ್ಬರ ಕೊರತೆ ಇಲ್ಲವೇ?
► ಕೊರತೆ ಇಲ್ಲ ಎನ್ನುತ್ತಿದೆ ಕೇಂದ್ರ ಸರಕಾರ ► ಆದರೆ ಅಂಕಿ-ಅಂಶಗಳು ಹೇಳುವ ಕತೆಯೇ ಬೇರೆ!

► ವಾಸ್ತವಾಂಶ ಪರಿಶೀಲನೆ
2021-22ರ ರಬಿ (ಚಳಿಗಾಲ) ಋತುವಿನಲ್ಲಿ ದೇಶದಲ್ಲಿ ರಸಗೊಬ್ಬರದ ಕೊರತೆ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಡಿಸೆಂಬರ್ 3ರಂದು ರಾಜ್ಯಸಭೆಗೆ ತಿಳಿಸಿದ್ದಾರೆ.
ದೇಶದ ರೈತರು ರಸಗೊಬ್ಬರದ ಕೊರತೆಯನ್ನು ಎದುರಿಸುತ್ತಿದ್ದಾರೆಯೇ ಎಂಬುದಾಗಿ ರಾಜ್ಯಸಭಾ ಸದಸ್ಯ ಸಿ.ಎಮ್. ರಮೇಶ್ ಕೇಳಿದಾಗ, ಇಲ್ಲ, ಸರ್. ಪ್ರಸಕ್ತ ರಬಿ ಋತುವಿನಲ್ಲಿ ರಸಗೊಬ್ಬರದ ಕೊರತೆಯಿಲ್ಲ ಎಂಬುದಾಗಿ ತೋಮರ್ ಉತ್ತರಿಸಿದ್ದಾರೆ.
ಕಳೆದ ವರ್ಷ, ರಸಗೊಬ್ಬರದ ಕೊರತೆ ಬಗ್ಗೆ ಯಾವಾಗ ಕೇಳಿದರೂ ಇದು ಕೇಂದ್ರ ಸರಕಾರದ ಉತ್ತರವಾಗಿತ್ತು. ನವೆಂಬರ್ 23ರಂದು, ರಸಗೊಬ್ಬರಗಳ ಕೊರತೆ ಇಲ್ಲ ಎಂಬುದಾಗಿ ಕೇಂದ್ರ ರಾಸಾಯನಿಕಗಳು ಮತ್ತು ರಸಗೊಬ್ಬರ ಸಚಿವ ಮನ್ಸುಖ್ ಮಾಂಡವೀಯ ಹೇಳಿಕೆ ನೀಡಿದ್ದಾರೆ. ಹಾಗೂ, ಪರಿಣಾಮಕಾರಿ ರಸಗೊಬ್ಬರ ನಿರ್ವಹಣೆಗಾಗಿ ಬೇಡಿಕೆ ಮತ್ತು ಪೂರೈಕೆ ಮೇಲೆ ದಿನನಿತ್ಯ ನಿಗಾ ಇಡುವಂತೆ ರಾಜ್ಯಗಳನ್ನು ಒತ್ತಾಯಿಸಿದ್ದಾರೆ.
ಅದೇ ರೀತಿ, ಇನ್ನೊಂದು ಸಂದರ್ಭದಲ್ಲೂ, ಮಾಂಡವೀಯ ಲೋಕಸಭೆಯಲ್ಲಿ ರಸಗೊಬ್ಬರಗಳ ಕೊರತೆ ಇರುವುದನ್ನು ನಿರಾಕರಿಸಿದರು. ಆದರೆ, ಡೈಅಮೋನಿಯಮ್ ಫಾಸ್ಫೇಟ್ ರಸಗೊಬ್ಬರದ ಕೊರತೆ ಇರುವ ಬಗ್ಗೆ ಕೆಲವು ರಾಜ್ಯಗಳಿಂದ ಕೇಂದ್ರಕ್ಕೆ ದೂರುಗಳು ಬಂದಿವೆ ಎಂದು ಹೇಳಿದರು. ಅದೂ ಅಲ್ಲದೆ, ಪ್ರತಿ ಬೆಳೆ ಋತುವಿನ ಆರಂಭದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು ಎಲ್ಲ ರಾಜ್ಯಗಳೊಂದಿಗೆ ಸಮಾಲೋಚಿಸಿ ರಸಗೊಬ್ಬರಗಳ ರಾಜ್ಯವಾರು ಮತ್ತು ತಿಂಗಳುವಾರು ಲಭ್ಯತೆಯನ್ನು ಪರಿಶೀಲಿಸುತ್ತದೆ ಎಂದು ಹೇಳಿದ್ದಾರೆ.
ಹಿಂದಿನ ತಿಂಗಳುಗಳಲ್ಲೂ ಇದೇ ರೀತಿಯ ಉತ್ತರಗಳನ್ನು ಕೇಂದ್ರ ಸರಕಾರ ನೀಡಿದೆ. ಆದರೆ ಈ ಹೇಳಿಕೆಗಳು ವಾಸ್ತವಿಕ ಅಂಕಿ-ಅಂಶಗಳಿಗಿಂತ ಭಿನ್ನವಾಗಿದೆ. ಭಾರತ ಸರಕಾರದ ರಸಗೊಬ್ಬರಗಳ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ಮ್ಯೂರಿಯೇಟ್ ಆಫ್ ಪೊಟಾಶ್ ಮತ್ತು ಡೈಅಮೋನಿಯಮ್ ಫಾಸ್ಫೇಟ್ನಂತಹ ರಸಗೊಬ್ಬರಗಳ ಲಭ್ಯತೆ ಮತ್ತು ಮಾರಾಟವು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ.
ಭಾರತದಲ್ಲಿ ವಿಶೇಷವಾಗಿ ಎರಡು ಬೆಳೆ ಋತುಗಳಾದ ಖಾರಿಫ್ (ಎಪ್ರಿಲ್ನಿಂದ ಸೆಪ್ಟಂಬರ್) ಮತ್ತು ರಬಿ (ಅಕ್ಟೋಬರ್ನಿಂದ ಮಾರ್ಚ್) ಅವಧಿಯಲ್ಲಿ ಬೆಳೆಗಳಿಗೆ ಬಳಸುವ ಪ್ರಮುಖ ರಸಗೊಬ್ಬರಗಳೆಂದರೆ ಯೂರಿಯ, ಡೈಅಮೋನಿಯಮ್ ಫಾಸ್ಫೇಟ್, ಮ್ಯೂರಿಯೇಟ್ ಆಫ್ ಪೊಟಾಶ್, ಸಾರಜನಕ, ಫಾಸ್ಫರಸ್ ಮತ್ತು ಪೊಟಾಶಿಯಮ್, ಸಿಂಗಲ್ ಸೂಪರ್ ಫಾಸ್ಫೇಟ್ ಹಾಗೂ ಟ್ರಿಪಲ್ ಸೂಪರ್ ಫಾಸ್ಫೇಟ್.
► ದಾಖಲೆಗಳು ಏನು ಹೇಳುತ್ತವೆ?
ಅಕ್ಟೋಬರ್ನಲ್ಲಿ ಡೈಅಮೋನಿಯಮ್ ಫಾಸ್ಫೇಟ್ಗೆ ಬೇಡಿಕೆ 18.08 ಲಕ್ಷ ಮೆಟ್ರಿಕ್ ಟನ್ ಇತ್ತು, ಆದರೆ 9.7 ಲಕ್ಷ ಮೆಟ್ರಿಕ್ ಟನ್ ಡೈಅಮೋನಿಯಮ್ ಫಾಸ್ಫೇಟ್ ಲಭ್ಯವಿತ್ತು, ಹಾಗೂ ಈ ಪೈಕಿ 9.1 ಲಕ್ಷ ಮೆಟ್ರಿಕ್ ಟನ್ ಗೊಬ್ಬರವನ್ನು ಮಾತ್ರ ಮಾರಾಟ ಮಾಡಲಾಯಿತು ಎನ್ನುವುದನ್ನು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯದ ದಾಖಲೆಗಳು ತೋರಿಸುತ್ತವೆ.
ಅಂದರೆ, ರೈತರ ಬೇಡಿಕೆಯ ಸುಮಾರು ಅರ್ಧದಷ್ಟು (49.64 ಶೇಕಡ) ಡೈಅಮೋನಿಯಮ್ ಫಾಸ್ಫೇಟ್ ರಸಗೊಬ್ಬರವನ್ನು ಒದಗಿಸಲು ದೇಶಕ್ಕೆ ಸಾಧ್ಯವಾಗಿಲ್ಲ. ನವೆಂಬರ್ನಲ್ಲೂ ದೇಶದಲ್ಲಿ 21 ಶೇಕಡಾ ಡೈಅಮೋನಿಯಮ್ ಫಾಸ್ಫೇಟ್ನ ಕೊರತೆಯಿತ್ತು.
ಅದೇ ರೀತಿ, ಅಕ್ಟೋಬರ್ನಲ್ಲಿ 59.37 ಶೇಕಡಾ ಮ್ಯೂರಿಯೇಟ್ ಆಫ್ ಪೊಟಾಶ್ನ ಕೊರತೆಯಿತ್ತು. ಮ್ಯೂರಿಯೇಟ್ ಆಫ್ ಪೊಟಾಶ್ನ ಬೇಡಿಕೆ 3.43 ಲಕ್ಷ ಮೆಟ್ರಿಕ್ ಟನ್ ಆದರೆ, ಸುಮಾರು 1.71 ಲಕ್ಷ ಮೆಟ್ರಿಕ್ ಟನ್ ಲಭ್ಯವಿತ್ತು. ಈ ಪೈಕಿ 1.39 ಲಕ್ಷ ಮೆಟ್ರಿಕ್ ಟನ್ ಮ್ಯೂರಿಯೇಟ್ ಆಫ್ ಪೊಟಾಶ್ ಮಾರಾಟ ಮಾಡಲಾಗಿತ್ತು. ನವೆಂಬರ್ನಲ್ಲಿ ಇದರ ಕೊರತೆಯು 71.7 ಶೇಕಡಾಕ್ಕೆ ಏರಿತು.
► ಬೇಡಿಕೆ ಮತ್ತು ಪೂರೈಕೆ
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆಯ ಪ್ರಕಾರ, ಭಾರತವು ಮುಖ್ಯವಾಗಿ ಯೂರಿಯ, ಡೈಅಮೋನಿಯಮ್ ಫಾಸ್ಫೇಟ್ ಮತ್ತು ಪೊಟಾಶಿಯಮ್ ಕ್ಲೋರೈಡನ್ನು ಆಮದು ಮಾಡಿಕೊಳ್ಳುತ್ತದೆ.
ಅಕ್ಟೋಬರ್ನಲ್ಲಿ, ಯೂರಿಯಾದ ಬೇಡಿಕೆಯು 36.15 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಆದರೆ ಅದರ ಲಭ್ಯತೆಯು 26.27 ಲಕ್ಷ ಮೆಟ್ರಿಕ್ ಟನ್ ಆಗಿತ್ತು. ಈ ಪೈಕಿ ಮಾರಾಟವಾದದ್ದು 24.16 ಲಕ್ಷ ಮೆಟ್ರಿಕ್ ಟನ್ ಮಾತ್ರ ಎಂದು ರಸಗೊಬ್ಬರಗಳ ಇಲಾಖೆ ಹೊಂದಿರುವ ಅಂಕಿಅಂಶಗಳು ಹೇಳುತ್ತವೆ. ಈ ಅಂಕಿಅಂಶಗಳ ಪ್ರಕಾರ, ಅಕ್ಟೋಬರ್ನಲ್ಲಿ 33 ಶೇಕಡಾ ಯೂರಿಯದ ಕೊರತೆಯಿತ್ತು. ನವೆಂಬರ್ನಲ್ಲಿ ಈ ಕೊರತೆಯು 35 ಶೇಕಡಾಕ್ಕೆ ಏರಿತು.
ವಾಸ್ತವವಾಗಿ, ಸಾರಜನಕ, ಫಾಸ್ಫರಸ್ ಮತ್ತು ಪೊಟಾಶಿಯಮ್ಗಿಂತ ಡೈಅಮೋನಿಯಮ್ ಫಾಸ್ಫೇಟ್ ಅಗ್ಗವಾಗಿರುವುದರಿಂದ, ಅದರ ಗುಣಮಟ್ಟ ಕಳಪೆಯಾಗಿದ್ದರೂ ರೈತರು ಸಾಮಾನ್ಯವಾಗಿ ಅದನ್ನು ಆಯ್ಕೆ ಮಾಡುತ್ತಾರೆ ಎಂದು ಬಾರಾಬಂಕಿ ಜಿಲ್ಲೆಯಲ್ಲಿರುವ ಭಾರತೀಯ ರೈತರು ಮತ್ತು ರಸಗೊಬ್ಬರ ಸಹಕಾರಿ ಕಿಸಾನ್ ಸೇವಾ ಕೇಂದ್ರ (ಇಫ್ಕೊ)ದ ಉಪ ಪ್ರಬಂಧಕ ಸುರೇಂದ್ರನಾಥ ತ್ರಿಪಾಠಿ ‘ಇಂಡಿಯಾಸ್ಪೆಂಡ್’ಗೆ ಹೇಳಿದ್ದಾರೆ.
ಸಾರಜನಕ, ಫಾಸ್ಫರಸ್ ಮತ್ತು ಪೊಟಾಶಿಯಮ್ ಬಗ್ಗೆ ಹೇಳುವುದಾದರೆ, ಇವುಗಳ ದಾಸ್ತಾನು ಬೇಡಿಕೆಗಿಂತ ಹೆಚ್ಚಿರುವುದನ್ನು ದಾಖಲೆಗಳು ತೋರಿಸುತ್ತವೆ. ಆದರೆ, ಈ ರಸಗೊಬ್ಬರಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಸರಕಾರ ಮಾರಾಟ ಮಾಡಿಲ್ಲ. ಹಾಗಾಗಿ, ಸಾರಜನಕ, ಫಾಸ್ಫರಸ್ ಮತ್ತು ಪೊಟಾಶಿಯಮ್ನ ಕೊರತೆಯು ಅಕ್ಟೋಬರ್ನಲ್ಲಿ 12.5 ಶೇಕಡ ಇದ್ದರೆ, ನವೆಂಬರ್ನಲ್ಲಿ ಅದು 19 ಶೇಕಡಕ್ಕೆ ಏರಿತು.
ಈ ಇಫ್ಕೊ ಕೇಂದ್ರದ ಹೊರಗಡೆ ರಸಗೊಬ್ಬರಗಳಿಗಾಗಿ ಸರತಿ ಸಾಲಿನಲ್ಲಿ ನಿಂತಿರುವ ರೈತರನ್ನು ‘ಇಂಡಿಯಾಸ್ಪೆಂಡ್’ ಮಾತನಾಡಿಸಿದಾಗ ಅವರು ಹೇಳಿದ್ದಿಷ್ಟು: ‘‘ನಾವು ರಸಗೊಬ್ಬರಗಳಿಗಾಗಿ ಇಲ್ಲಿ ಮುಂಜಾನೆ 5 ಗಂಟೆಯಿಂದ ಸರತಿ ಸಾಲಿನಲ್ಲಿ ಕಾಯುತ್ತೇವೆ. ನಮ್ಮಲ್ಲಿ ಕೆಲವರಿಗಷ್ಟೇ ಸಿಗುತ್ತದೆ. ಆದರೆ, ನಮ್ಮ ಬೆಳೆಗಳಿಗೆ ಅಗತ್ಯವಿರುವಷ್ಟು ಪ್ರಮಾಣದಲ್ಲಿ ರಸಗೊಬ್ಬರ ಸಿಕ್ಕಿಲ್ಲ’’ ಎಂದು ರಸಗೊಬ್ಬರ ಸಿಕ್ಕಿದ ರೈತರು ಹೇಳಿದ್ದಾರೆ.
ಕೃಪೆ: scroll.in







