`ಉದ್ಯೋಗ ಕೊಡಿ-ಇಲ್ಲವೆ ನಿರುದ್ಯೋಗ ಭತ್ತೆ ಕೊಡಿ': ಬೆಳಗಾವಿಯಲ್ಲಿ ಯುವ ಕಾಂಗ್ರೆಸ್ನಿಂದ ಪ್ರತಿಭಟನೆ
ಬೆಳಗಾವಿ, ಡಿ.17: ಕೋವಿಡ್ ಸಂಕಷ್ಟದ ನಂತರ ನಿರುದ್ಯೋಗ ಸಮಸ್ಯೆ ಅಗಾಧವಾಗಿ ಕಾಡುತ್ತಿದ್ದು, ಯುವ ಸಮೂಹಕ್ಕೆ ಉದ್ಯೋಗ ನೀಡಿ–ಇಲ್ಲವೆ 9 ಸಾವಿರ ರೂಪಾಯಿ ನಿರುದ್ಯೋಗ ಭತ್ತೆ ಕೊಡಿ ಎಂಬ ಬೇಡಿಕೆ ಮುಂದಿಟ್ಟುಕೊಂಡು ಯುವ ಕಾಂಗ್ರೆಸ್ ಇಂದು ಬೃಹತ್ ಪ್ರಮಾಣದಲ್ಲಿ ಬೆಳಗಾವಿ ಚಲೋ ಹೋರಾಟ ಹಮ್ಮಿಕೊಂಡಿತ್ತು. 'ಯುವಕರ ನಡೆ ಬೆಳಗಾವಿ ಕಡೆ' ಎಂಬ ಘೋಷಣೆಯೊಂದಿಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸುವರ್ಣ ವಿಧಾನಸೌಧದವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದರು.
ಹಾಲಿ ಬಿಜೆಪಿ ಸರಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ತೀವ್ರಗೊಂಡಿದ್ದು, ಸುಮಾರು ಎರಡು ಗಂಟೆಗಳ ಕಾಲ ಸುವರ್ಣ ಸೌಧದವರೆಗೆ ನಡೆದ ಹೋರಾಟಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೇತೃತ್ವ ವಹಿಸಿದ್ದರು. ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಸಾರಥ್ಯದಲ್ಲಿ ಯುವ ಪಡೆ ಸರಕಾರದ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿತು.
ಸಹಸ್ರಾರು ಯುವ ಕಾಂಗ್ರೆಸ್ ಕಾರ್ಯಕರ್ತರು ಡೊಳ್ಳು ಬಾರಿಸಿ, ರಾಜ್ಯ ಹಾಗೂ ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು. ಸುವರ್ಣ ವಿಧಾನಸೌಧದ ಬಳಿ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ತಡೆದರು. ಈ ಹಂತದಲ್ಲಿ ವಾಗ್ವಾದ ನಡೆಸಿದರು. ಬಳಿಕ ರಕ್ಷಾ ರಾಮಯ್ಯ ಸೇರಿ ಐವರು ನಿರುದ್ಯೋಗ ಭತ್ತೆ ನೀಡುವಂತೆ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತನಾಡಿ, ನಿರುದ್ಯೋಗ ಸಮಸ್ಯೆಯನ್ನು ಬಹುದೊಡ್ಡ ಹೋರಾಟವಾಗಿ ರೂಪಿಸಲಾಗುವುದು. ಉದ್ಯೋಗ ನೀಡದಿದ್ದರೆ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸಲಾಗುವುದು. ಮುಂದಿನ ವಿಧಾನಸಭಾ ಚುನಾವಣೆಗೆ ನಿರುದ್ಯೋಗ ವಿಚಾರವನ್ನು ಪ್ರಮುಖ ವಿಷಯವನ್ನಾಗಿ ಪರಿಗಣಿಸಲಾಗುವುದು. ಜತೆಗೆ ನಿರುದ್ಯೋಗ ಭತ್ತೆ ನೀಡುವ ವಿಷಯವನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಲಾಗುವುದು. ಈ ಕುರಿತು ರಾಹುಲ್ ಗಾಂಧಿ ಅವರು ನ್ಯಾಯ್ ಯೋಜನೆ ಬಗ್ಗೆ ಸಂದೇಶ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ನಿರುದ್ಯೋಗದ ವಿರುದ್ಧ ಕಾಂಗ್ರೆಸ್ ದೊಡ್ಡ ಹೋರಾಟ ಮಾಡಲಿದೆ ಎಂದು ಹೇಳಿದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದಾರೆ. ಇಂದು ರಾಜ್ಯ ಯುವ ಕಾಂಗ್ರೆಸ್ ನಿರುದ್ಯೋಗ ಸಮಸ್ಯೆ ವಿರುದ್ಧ ಹೋರಾಟ ಹಮ್ಮಿಕೊಂಡಿದ್ದು, ನಾವು ಉದ್ಯೋಗಕ್ಕೆ ಆಗ್ರಹಿಸಿ ಚಳವಳಿ ಮಾಡುತ್ತಿದ್ದೇವೆ. ವರ್ಷಕ್ಕೆ 2 ಕೋಟಿ ಉದ್ಯೋಗ ಕೋಡುತ್ತೇವೆ ಎಂದ ಕೇಂದ್ರದ ಬಿಜೆಪಿ ಸರಕಾರ ನುಡಿದಂತೆ ನಡೆಯಲಿಲ್ಲ. ದೇಶದಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಪದವೀಧರರೆಲ್ಲರೂ ಬೀದಿಬದಿಯಲ್ಲಿ ವ್ಯಾಪಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಯಾರಿಗೂ ಈ ಸರಕಾರದಿಂದ ನೆರವಾಗಿಲ್ಲ. ಅತಿಥಿ ಶಿಕ್ಷಕರಿಗೆ ಸಿಗುತ್ತಿರುವ ವೇತನಕ್ಕಿಂತ ನರೇಗಾ ಯೋಜನೆಯ ಕಾರ್ಮಿಕರ ಕೂಲಿಯೇ ಹೆಚ್ಚಾಗಿದೆ. ನಿಮ್ಮ ಹೋರಾಟ ಅರ್ಥಪೂರ್ಣ ಹೋರಾಟ, ಯುವಕರ ಕಣ್ಣು ತೆರೆಸುವ ಹೋರಾಟ. ಇಡೀ ರಾಜ್ಯ ಕಾಂಗ್ರೆಸ್ ಈ ಹೋರಾಟಕ್ಕೆ ಬೆಂಬಲ ನೀಡಲಿದೆ ಎಂದರು.
ಕೋವಿಡ್ ಸಮಯದಲ್ಲಿ ಉದ್ಯೋಗ ಕಡಿಮೆಯಾಗಿದೆ. ಬಿಜೆಪಿ ಸರಕಾರದಿಂದ ಸರಕಾರ ಹಾಗೂ ಖಾಸಗಿ ಉದ್ಯೋಗ ಸೃಷ್ಟಿಸಲು ಸಾಧ್ಯವಾಗಿಲ್ಲ. ದೇಶದ ಯುವಕರು ಪಕೋಡ ಮಾರಿಕೊಂಡು ಬದುಕಿರಿ ಎಂದು ಹೇಳುತ್ತಾರೆ. ಪಕೋಡ ಮಾರೋಣ ಎಂದರೆ ಅಡುಗೆ ಎಣ್ಣೆ ಲೀಟರ್ಗೆ 200 ರೂ. ಆಗಿದೆ. ಈ ಯುವಕರು ತಮ್ಮ ಪದವಿ ಪ್ರಮಾಣ ಪತ್ರದ ಪ್ರತಿಯನ್ನು ಪ್ರಧಾನಮಂತ್ರಿಗಳಿಗೆ ವಾಪಸ್ ಕಳುಹಿಸಿಕೊಡುವ ಕಾರ್ಯಕ್ರಮವನ್ನು ಯೂತ್ ಕಾಂಗ್ರೆಸ್ ಹಮ್ಮಿಕೊಳ್ಳಲಿದೆ ಎಂದರು.
ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ರಾಜ್ಯ ಸರಕಾರದ ವಿವಿಧ ಇಲಾಖೆಗಳಲ್ಲಿನ ಸರಕಾರಿ ಹುದ್ದೆಗಳ ನೇಮಕಾತಿಗಳನ್ನು ತಕ್ಷಣ ಆರಂಭಿಸಬೇಕು. ಉದ್ಯೋಗ ಸೃಷ್ಟಿಸದಿದ್ದರೆ ಮಾಸಿಕ 9,000 ರೂ ನಿರುದ್ಯೋಗ ಭತ್ತೆ ಕೊಡಬೇಕು. ರಾಜ್ಯದಲ್ಲಿ 56.6 ಲಕ್ಷ ಪದವೀಧರರಿದ್ದು, ಅದರಲ್ಲಿ 34 ಲಕ್ಷ ಯುವಜನರು ನಿರುದ್ಯೋಗಿಗಳಿದ್ದಾರೆ. ಜತೆಗೆ ಕನ್ನಡಿಗರಿಗೆ ಶೇ. 80 ರಷ್ಟು ಉದ್ಯೋಗ ಮೀಸಲಿಡಬೇಕು ಎಂದರು.
ಪ್ರಸ್ತುತ 30 ಸಾವಿರ ಶಿಕ್ಷಕರ ಕೊರತೆಯಿದ್ದು. ನೂತನ ಶಿಕ್ಷಣ ನೀತಿ ಜಾರಿಯಿಂದ ಈ ಪ್ರಮಾಣ 70 ಸಾವಿರಕ್ಕೆ ಏರಿದೆ. ಇಂತಹ ಸಂಕಷ್ಟದಲ್ಲಿ ಕೇವಲ 5 ಸಾವಿರ ಶಿಕ್ಷಕರ ನೇಮಕಾತಿಯಿಂದ ಯಾವುದೇ ಪರಿಹಾರ ದೊರೆಯುವುದಿಲ್ಲ. ಹೊಸ ಕೈಗಾರಿಕಾ ನೀತಿಯಿಂದ ಸೃಷ್ಟಿಯಾಗಿರುವ ಉದ್ಯೋಗದ ಬಗ್ಗೆಯೂ ಮಾಹಿತಿ ನೀಡಿಲ್ಲ. ಹೀಗಾಗಿ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ಗಳಿಗೆ ಬ್ಯಾಂಕ್ನಿಂದ ಪಡೆದ ಸಾಲವನ್ನು ಮನ್ನಾ ಮಾಡಬೇಕು. ಏರಿಕೆ ಮಾಡಿರುವ ವೃತ್ತಿ ಶಿಕ್ಷಣ ಶುಲ್ಕವನ್ನು ಸರಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಗೆಜೆಟೆಡ್ ಪ್ರೊಬೇಷನರ್ಸ್ (ಕೆ.ಎ.ಎಸ್) ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು. ವಿವಿಧ ಇಲಾಖೆಯಲ್ಲಿ ಎಸ್ಡಿಎ ಮತ್ತು ಎಫ್ಡಿಎ ಹುದ್ದೆಗಳನ್ನು ತುಂಬಲು ಒತ್ತು ನೀಡಬೇಕು. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿಯನ್ನು ತಕ್ಷಣವೇ ಆರಂಭಿಸಬೇಕು. ಹಿಂದುಳಿದ ವರ್ಗ ಪಿಹೆಚ್.ಡಿ ವಿದ್ಯಾರ್ಥಿಗಳ ಶಿಷ್ಯ ವೇತನ ಸರಕಾರ ತಡೆಹಿಡಿದಿದ್ದು ಅದನ್ನು ತಕ್ಷಣವೇ ಬಿಡುಗಡೆಗೊಳಿಸಬೇಕು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿ, ಕ್ರೀಡಾಸಕ್ತರನ್ನು ಸರಕಾರ ಪ್ರೋತ್ಸಾಹಿಸಬೇಕು ಎಂದು ಎಂ.ಎಸ್. ರಕ್ಷಾ ರಾಮಯ್ಯ ಹೇಳಿದರು.







