ಬೆಳಗಾವಿಯಲ್ಲಿ ಪುಂಡಾಟ ಮೆರೆಯುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ: ಗೃಹಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆ

ಶಿವಮೊಗ್ಗ, ಡಿ.18: ಎರಡು ದಿನಗಳಿಂದ ಬೆಳಗಾವಿಯಲ್ಲಿ ಒಂದಷ್ಟು ಜನ ಪುಂಡಾಟ ಮಾಡುತ್ತಿದ್ದಾರೆ. ಶಾಂತಿ ಕದಡುವ ಕೆಲಸ ಮಾಡುವುದರ ಜೊತೆ ಸರಕಾರಿ ವಾಹನಗಳನ್ನು ಜಖಂಗೊಳಿಸಿದ್ದಾರೆ. ಜೊತೆಗೆ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಧ್ವಂಸ ಮಾಡಿದ್ದಾರೆ. ಈ ದುಷ್ಕೃತ್ಯ ಎಸಗುವವರ ವಿರುದ್ಧ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿರುವ ಅವರು, ಕಿಡಿಗೇಡಿಗಳು ಯಾರೇ ಆಗಿದ್ದರೂ ಅವರನ್ನು ವಶಕ್ಕೆ ಪಡೆದು ಮೊಕದ್ದಮೆ ಹೂಡಬೇಕು. ಮತ್ತೆ ಇನ್ಯಾವತ್ತೂ ಇಂತಹ ಕೆಲಸ ಮಾಡದಂತೆ ಮಾಡಲು ಸೂಚಿಸಿದ್ದೇನೆ ಎಂದರು.
ಶಿವಾಜಿ ಹಾಗೂ ಸಂಗೊಳ್ಳಿ ರಾಯಣ್ಣ ಇಬ್ಬರೂ ರಾಷ್ಟ್ರಕ್ಕಾಗಿ ಪ್ರಾಣಾರ್ಪಣೆ ಮಾಡಿದ ದೊಡ್ಡ ವ್ಯಕ್ತಿಗಳು. ಇಂಥ ದೊಡ್ಡ ವ್ಯಕ್ತಿಗಳನ್ನು ಚಪರಾಸಿ ರಾಜಕಾರಣಕ್ಕೆ ಬಳಕೆ ಮಾಡುವವರನ್ನು ಕ್ಷಮಿಸಲು ಸಾಧ್ಯವಿಲ್ಲ ಎಂದು ಗೃಹಸಚಿವರು ಎಚ್ಚರಿಸಿದ್ದಾರೆ.
ಮಹಾನ್ ನಾಯಕರ ಪ್ರತಿಮೆ ಧ್ವಂಸ ಮಾಡಿದಾಕ್ಷಣ ಅವರ ಆಚಾರ, ವಿಚಾರಗಳು ಹಾಳಾಗುವುದಿಲ್ಲ. ಬೆಳಗಾವಿಯಲ್ಲಿ ಕನ್ನಡಿಗರು ಹಾಗೂ ಮರಾಠಿಗರು ಶಾಂತಿಯಿಂದ ಇದ್ದಾರೆ. ಆದರೆ ಕೆಲ ದುಷ್ಕರ್ಮಿಗಳು ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಕ್ಷಮಿಸಲಾಗದು. ಇಲ್ಲಿ ಶಾಂತಿ ಕಾಪಾಡಲು ಸೂಕ್ರ ಕ್ರಮ ಕೈಗೊಳ್ಳಲು ಪೊಲೀಸರಿಗೆ ಸೂಚಿಸಿದ್ದೇನೆ. ಜನರು ಆತಂಕಕ್ಕೊಳಗಾಗುವುದು ಬೇಡ ಎಂದು ಗೃಹಸಚಿವರು ಹೇಳಿದ್ದಾರೆ.







