ಸಹಕಾರಿ ಕ್ಷೇತ್ರದವರಿಗಾಗಿ ಜಿಲ್ಲಾ ಮಟ್ಟದ ಕ್ರೀಡಾಕೂಟ ಆಯೋಜನೆ: ಜಯಕರ ಶೆಟ್ಟಿ ಇಂದ್ರಾಳಿ
ಉಡುಪಿ, ಡಿ.18: ಜಿಲ್ಲೆಯ ಸಹಕಾರಿ ಕ್ಷೇತ್ರದ ವಿವಿಧ ಸಂಸ್ಥೆಗಳ ಸಿಬ್ಬಂದಿಗಳ ಕ್ರೀಡಾಪ್ರತಿಭೆಗಳನ್ನು ಗುರುತಿಸಲು ಶೀಘ್ರವೇ ಜಿಲ್ಲಾ ಮಟ್ಟದ ಸಹಕಾರಿ ಕ್ಷೇತ್ರದ ಕ್ರೀಡಾಕೂಟವನ್ನು ಆಯೋಜಿಸಲು ಚಿಂತನೆ ನಡೆದಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ನ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.
ನಗರದ ಹೊಟೇಲ್ ಡಯಾನ ಸಭಾಂಗಣದಲ್ಲಿ ಇಂದು ನಡೆದ ಯೂನಿಯನ್ನ 2020-2021ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಅವರು ಈ ವಿಷಯ ತಿಳಿಸಿದರು.
ಅಲ್ಲದೇ ಇದೇ ಜ.26ರಂದು ಉಡುಪಿ ಜಿಲ್ಲೆಯ ಮೂರು ತಾಲೂಕು ಕೇಂದ್ರಗಳಲ್ಲಿ ಸಹಕಾರ ಸಂಘಗಳ ಸಿಬ್ಬಂದಿಗಳಿಗಾಗಿ ಬೃಹತ್ ರಕ್ತದಾನ ಶಿಬಿರಗಳನ್ನು ಏರ್ಪಡಿಸಲಾಗುವುದು. ಅಂದು ಉಡುಪಿ, ಕುಂದಾಪುರ, ಕಾರ್ಕಳ ತಾಲೂಕುಗಳ ಸಹಕಾರ ಸಂಘಗಳ ಸಿಬ್ಬಂದಿಗಳಿಂದ ರಕ್ತದಾನ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಸುಮಾರು 500 ಯೂನಿಟ್ ರಕ್ತ ಸಂಗ್ರಹಿಸಿ ಬಡ ರೋಗಿಗಳಿಗೆ ನೆರವಾಗುವ ಗುರಿ ಇಟ್ಟುಕೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಮಾರ್ಗದರ್ಶನದಂತೆ ಯೂನಿಯನ್ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿರುವ ಒಟ್ಟು 660 ಸಹಕಾರ ಸಂಘಗಳಲ್ಲಿ 455 ಸಹಕಾರ ಸಂಘಗಳು ಜಿಲ್ಲಾ ಸಹಕಾರಿ ಯೂನಿಯನ್ನ ಸದಸ್ಯತ್ವ ಪಡೆದಿವೆ ಎಂದು ಜಯಕರ ಶೆಟ್ಟಿ ಇಂದ್ರಾಳಿ, 68 ನೇ ಅಖಿಲ ಭಾರತ ಸಹಕಾರ ಸಪ್ತಾಹವನ್ನು ಜಿಲ್ಲೆಯಾದ್ಯಂತ ಆಚರಿಸಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರೂ ಅನಿವಾರ್ಯ ಕಾರಣದಿಂದ ಅನ್ನು ನಿಲ್ಲಿಸ ಬೇಕಾಯಿತು ಎಂದರು.
ಉಡುಪಿ ಜಿಲ್ಲೆಯಾದ್ಯಂತ ಸಹಕಾರ ಸಂಘಗಳಿಂದ ವಾರ್ಷಿಕ ಒಂದು ಕೋಟಿ ರೂ.ಗಳಿಗೂ ಅಧಿಕ ಸಹಕಾರ ಶಿಕ್ಷಣ ನಿಧಿ ಸಂಗ್ರಹಿಸಲಾಗುತ್ತಿದ್ದು, 2019-2020 ರಲ್ಲಿ ಒಟ್ಟು 1,28,76,497.98 ರೂ.ಸಂಗ್ರಹಿಸಿ ಮಹಾಮಂಡಳಕ್ಕೆ ಪಾವತಿಸಲಾಗಿದೆ ಎಂದು ಜಯಕರ ಶೆಟ್ಟಿ ವಿವರಿಸಿದರು. ಮೂಡಬಿದರೆ ಕೆಐಸಿಎಂ (ಸಹಕಾರ ತರಬೇತಿ ಕೇಂದ್ರ) ಅನ್ನು ಮೇಲ್ದರ್ಜೆಗೇರಿಸಿ ನವೀಕರಿಸಲು 50 ಲಕ್ಷ ರೂ. ವೆಚ್ಚದ ಯೋಜನೆಯನ್ನು ಈಗಾಗಲೇ ಸಿದ್ದಪಡಿಸಲಾಗಿದ್ದು, ಶೀಘ್ರದಲ್ಲಿ ಕೆಲಸ ಪ್ರಾರಂಭವಾಗಲಿದೆ ಎಂದರು.
ಸಹಕಾರ ಸಂಘಗಳಿಗೆ ಮುದ್ರಾಂಕ ಶುಲ್ಕ ವಿನಾಯತಿ, ಸಹಕಾರ ಸಂಘಗಳ ಆಸ್ತಿ ಅಡವು ದಾಖಲಿಸುವಿಕೆಗೆ ಪ್ರತ್ಯೇಕ ಪ್ರಾಧಿಕಾರದ ರಚನೆ ಅಥವಾ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಿಗೆ ಈ ಅಧಿಕಾರದ ಪ್ರತ್ಯಾಯೋಜನೆ, ಸಹಕಾರ ಸಂಘಗಳ ಋಣಭಾರವನ್ನು ಪಹಣಿ ಪತ್ರದಲ್ಲಿ ದಾಖಲಿಸುವ ಬಗ್ಗೆ, ಸಹಕಾರ ಸಂಘಗಳ ಸಮರ್ಪಕ, ಆರೋಗ್ಯಕರ ಮತ್ತು ನಿಯಮಬದ್ದ ಬೆಳವಣಿಗೆ ಮತ್ತು ಅವುಗಳ ಅಭಿವೃದ್ದಿಯ ಬಗ್ಗೆ ಮನವಿಯನ್ನು ಈಗಾಗಲೇ ಸಹಕಾರ ಸಚಿವರಿಗೆ ಹಾಗೂ ಮಹಾಮಂಡಳದ ಅಧ್ಯಕ್ಷರಿಗೆ ನೀಡಲಾಗಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅಧ್ಯಕ್ಷರು ತಿಳಿಸಿದರು.
ಕೊರೋನ ಸಂಕಷ್ಟ ಇಡೀ ಜಗತ್ತನ್ನೇ ಕಂಗಾಲು ಮಾಡಿದಂತೆ, ಸಹಕಾರ ಕ್ಷೇತ್ರವನ್ನು ಬಿಟ್ಟಿಲ್ಲ. ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಜನಸೇವೆಗೆ ಮುಂದಾದ ಸಹಕಾರಿ ನೌಕರರನ್ನು ಕೊರೋನ ಫ್ರಂಟ್ ವಾರಿಯರ್ಸ್ ಆಗಿ ಪರಿಗಣಿಸಿ, ಸಂಘಗಳಲ್ಲಿ ದುಡಿಯುವ ಎಲ್ಲಾ ನೌಕರ ವರ್ಗದವರಿಗೆ ಪ್ರಥಮ ಪ್ರಾಶಸ್ತ್ಯನೀಡಿ ಲಸಿಕೆ ನೀಡುವಂತೆ ಹಾಗೂ ವಿಮಾ ಭದ್ರತೆ ಒದಗಿಸಿಕೊಡುವಂತೆ ಮಾಡಿಕೊಂಡ ಮನವಿಗೆ ಸಚಿವರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಸ್ಪಂದಿಸಿ ಪ್ರಥಮ ಪ್ರಾಶಸ್ತ್ಯದಲ್ಲೇ ಲಸಿಕೆ ವ್ಯವಸ್ಥೆ ಮಾಡಿಕೊಟ್ಟಿದೆ ಎಂದರು.
ವೇದಿಕೆಯಲ್ಲಿ ಯೂನಿಯನ್ನ ಉಪಾಧ್ಯಕ್ಷ ಅಶೋಕ್ ಕುಮಾರ್ ಬಲ್ಲಾಳ್, ನಿರ್ದೇಶಕರಾದ ಕಟಪಾಡಿ ಶಂಕರ ಪೂಜಾರಿ, ಶ್ರೀಧರ ಪಿ.ಎಸ್, ಎಚ್. ಗಂಗಾಧರ ಶೆಟ್ಟಿ, ಯಶಪಾಲ್ ಎ. ಸುವರ್ಣ, ಎನ್.ಮಂಜಯ್ಯ ಶೆಟ್ಟಿ, ಕೃಷ್ಣಮೂರ್ತಿ ಕುಂದಾಪುರ, ಅನಿಲ್ ಎಸ್.ಪೂಜಾರಿ ಮಾಳ, ಹರೀಶ್ ಶೆಟ್ಟಿ ಕಾರ್ಕಳ, ಹರೀಶ್ ಕಿಣಿ ಅಲೆವೂರು, ಕೆ.ಸುರೇಶ್ ರಾವ್, ಕೆ. ಕೊರಗ ಪೂಜಾರಿ, ಅಶೋಕ್ ಕುಮಾರ್ ಶೆಟ್ಟಿ ಬೆಳ್ಳಂಪಳ್ಳಿ., ಮನೋಜ್ ಎಸ್. ಕರ್ಕೇರ. ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಜಿಲ್ಲಾ ಸಹಕಾರ ಯೂನಿಯನ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ್ ಎಸ್.ಪಿ. ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು.