ವಿಟ್ಲ ಕುಂಡಡ್ಕ ದೈವಸ್ಥಾನಕ್ಕೆ ಬಿಲ್ಲವರ ಪ್ರವೇಶ ನಿಷೇಧ; ಆರೋಪ
ಬಿಲ್ಲವ ಸಂಘಟನೆಗಳಿಂದ ಖಂಡನೆ
ಬಂಟ್ವಾಳ, ಡಿ.18: ದೈವಸ್ಥಾನಕ್ಕೆ ಪ್ರಾರ್ಥನೆಗೆಂದು ತೆರಳಿದ್ದ ವೇಳೆ ಬಿಲ್ಲವ ಸಮಾಜದ ಯುವಕರನ್ನು ಹೊರಗೆ ಕಳುಹಿಸಿದ ಘಟನೆಯೊಂದು ಶುಕ್ರವಾರ ವಿಟ್ಲಮೂಡ್ನೂರು ಗ್ರಾಮದ ಕುಂಡಡ್ಕ ಎಂಬಲ್ಲಿ ನಡೆದಿರುವ ಬಗ್ಗೆ ಆರೋಪ ಕೇಳಿ ಬಂದಿದೆ.
ಗ್ರಾಮದ ಪಿಲಿಂಜ ಎಂಬಲ್ಲಿ ನೂತನ ದೈವಸ್ಥಾನ ನಿರ್ಮಾಣಗೊಂಡಿದ್ದು ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಗ್ರಾಮ ಸಂಬಂಧಿತ ದೈವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರ ಜತೆ ಬಿಲ್ಲವ ಸಮಾಜದ ಇಬ್ಬರು ಯುವಕರು ಇತರರೊಂದಿಗೆ ತೆರಳಿದ್ದು ದೈವಸ್ಥಾನದ ಉಸ್ತುವಾರಿ ನೋಡಿಕೊಳ್ಳುತ್ತಿರುವ ವ್ಯಕ್ತಿ ಅಧ್ಯಕ್ಷರಲ್ಲಿ ದೈವಸ್ಥಾನದ ಒಳಾಂಗಣಕ್ಕೆ ಬಿಲ್ಲವರು ಬರುವಂತಿಲ್ಲ ಎಂದಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಕೇಳಿಸಿಕೊಂಡ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯುವಕರನ್ನು ಹೊರ ಹೋಗುವಂತೆ ತಿಳಿಸಿದ್ದು ಯುವಕರು ಈ ವಿಚಾರವನ್ನು ಬಿಲ್ಲವ ಸಮಾಜ ಮುಖಂಡರುಗಳಲಲಿ ತಿಳಿಸಿದ್ದು ಅಲ್ಲದೆ ಇದೇ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿಯೂ ಹರಿಯಬಿಟ್ಟಿದ್ದರು. ಈ ನಡುವೆ ಯುವಕರನ್ನು ಕರೆದುಕೊಂಡು ಹೋಗಿದ್ದ ಅಧ್ಯಕ್ಷರಲ್ಲಿ ವಿಚಾರಿಸಿದಾಗ ಹಾರಿಕೆಯ ಉತ್ತರ ನೀಡಿದ್ದರೆನ್ನಲಾಗಿದೆ.
ಬಿಲ್ಲವರ ವಾಟ್ಸ್ ಆ್ಯಪ್ ಗ್ರೂಪುಗಳಲ್ಲಿ ಈ ವಿಚಾರ ಚರ್ಚೆಗೆ ಬಂದಿದ್ದು ಶನಿವಾರ ಸಂಜೆ ಕುಂಡಡ್ಕ, ವಿಟ್ಲ ವ್ಯಾಪ್ತಿಯ ಬಿಲ್ಲವ ಸಂಘಟನೆಗಳು, ವಿಟ್ಲ ಯುವವಾಹಿನಿ ಸದಸ್ಯರು ಖಂಡನಾ ಸಭೆ ನಡೆಸಿದ್ದವು.
ಮತ್ತೆ ದೂರವಾಣಿ ಮೂಲಕ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ವ್ಯಕ್ತಿಗೆ ಮಾತನಾಡಿದ್ದು, ಕ್ಷೇತ್ರದಲ್ಲಿ ನಡೆದುಕೊಂಡು ಬರುತ್ತಿದ್ದ ಕ್ರಮ ಇದಾಗಿದೆ. ಆದರೆ ಹೊರಗಿನಿಂದ ಬರುವವರನ್ನು ಹೋಗಿ ಎಂದು ಹೇಳಿಲ್ಲ. ಒಂದು ವೇಳೆ ಈ ಘಟನೆಯಿಂದ ನೋವಾಗಿದ್ದರೆ ಕ್ಷಮೆಯಿರಲಿ ಎಂದು ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಬಿಲ್ಲವರು ಪ್ರವೇಶಿಸುವುದು, ನಿರ್ಬಂಧ ಹೇರಿದರೆ ಎಲ್ಲಾ ರೀತಿಯ ಪ್ರತಿಭಟನೆ, ಹೋರಾಟ ನಡೆಸಲಾಗುವುದು ಎಂಬ ತೀರ್ಮಾನವನ್ನು ಸಭೆಯಲ್ಲಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.