ಕೆ.ಆರ್.ಪೇಟೆಯಲ್ಲಿ ದಲಿತ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ; 27 ಮಂದಿ ಸವರ್ಣೀಯರ ವಿರುದ್ಧ ದೂರು

ಕೆ.ಆರ್.ಪೇಟೆ: ಹನುಮ ಜಯಂತಿ ಪ್ರಯುಕ್ತ ದೇವಾಲಯ ಪ್ರವೇಶಿಸಿದ ದಲಿತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎನ್ನಲಾದ ಘಟನೆ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹರಿಹರಪುರದಲ್ಲಿ ಗುರುವಾರ ನಡೆದಿದೆ.
ಕೆ.ಆರ್.ಪೇಟೆ ಸರ್ಕಲ್ ಇನ್ಸ್ಪೆಕ್ಟರ್ ನಿರಂಜನ್ ದೂರು ಸ್ವೀಕರಿಸಲು ನಿರಾಕರಿಸಿದ ಬಳಿಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಅವರಲ್ಲಿ ದಲಿತರು ನೋವು ತೋಡಿಕೊಂಡಿದ್ದು, ನಂತರ ಹಲ್ಲೆ ಮಾಡಿದ 27 ಮಂದಿಯ ವಿರುದ್ಧ ಜಾತಿ ದೌರ್ಜನ್ಯ ಪ್ರಕರಣ ದಾಖಲಾಗಿದೆ ಎಂದು ಮೈಸೂರಿನ ವಕೀಲರಾದ ಎ.ಆರ್.ಕಾಂತರಾಜು ಅವರು ತಿಳಿಸಿದ್ದಾರೆ.
“ನಿಮ್ಮಿಂದ ದೇವಸ್ಥಾನ ಮಲಿನಗೊಂಡಿದೆ. ನಿಮ್ಮಂಥ ಜನರನ್ನು ಭೂಮಿ ಮೇಲೆ ಇರದಂತೆ ಸುಟ್ಟು ಹಾಕುತ್ತೇವೆ ಎಂದು ಡಿ.16ರ ರಾತ್ರಿ 11.30ರ ವೇಳೆಗೆ ಸುಮಾರು 50-60 ಜನ ಸವರ್ಣೀಯರು ಮಾರಕಾಸ್ತ್ರಗಳಿಂದ ದಲಿತರ ಮೇಲೆ ಹಲ್ಲೆ ನಡೆಸಿದ್ದಾರೆ. ಮಾರಕಾಸ್ತ್ರಗಳಾದ ದೊಣ್ಣೆ, ಕೊಡಲಿ, ಪಂಚ್, ಕಲ್ಲು ಮತ್ತು ಇಟ್ಟಿಗೆಗಳೊಂದಿಗೆ ದಲಿತ ಕಾಲನಿಗೆ ನುಗ್ಗಿ ದಾಂದಲೆ ನಡೆಸಿದ್ದಾರೆ. ಅಂಗವಿಕಲ ವ್ಯಕ್ತಿ ನಂಜಯ್ಯ ಎಂಬುವವರ ಮೇಲೆಯೂ ದಾಳಿ ನಡೆದಿದೆ. ಮಹಿಳೆಯರು ಮತ್ತು ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗಿದೆ” ಎಂದು ಗಾಯಾಳುಗಳು ದೂರು ನೀಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಯುವಕರಾದ ದರ್ಶನ್, ಸುನಿಲ್, ಲೋಹಿತ್, ಅಭಿಷೇಕ್, ವಿನಯ್, ಸಂಜಯ್, ಚಲವರಾಜು, ಭಾಗ್ಯಮ್ಮ, ಕುಮಾರ, ರಂಜಮ್ಮ, ಶೋಭಾ, ನಂಜಯ್ಯ ಅವರು ನೀಡಿದ ದೂರಿನ ಅನ್ವಯ 27 ಜನರ ಮೇಲೆ ಪ್ರಕರಣ ದಾಖಲಾಗಿದೆ.
ಆರೋಪಿಗಳನ್ನು ಮಂಜುನಾಥ್, ಶ್ರೀಧರ, ಸಂತೋಷ್, ಶ್ರೀನಿವಾಸ ಎಚ್.ಟಿ., ರಂಜಿತ್, ಸತೀಶ, ಸ್ವಾಮಿ, ಮುತ್ತು, ರಜಿತ್ ಅಲಿಯಾಸ್ ಮಿಲ್ಟ್ರಿ, ಮಂಜುನಾಥ, ಮೋಹನ್, ಮಂಜ, ಹರೀಶ ಮಡಗಿನಕುಡಿ, ವೆಂಕಟೇಶ್ ಹರಿಹರಪುರ, ರಾಘು, ರವಿ ಅಲಿಯಾಸ್ ಚಡ್ಡಿ, ಮಂಜ, ಸುರೇಶ, ಗುಂಡೂ, ಬಾನುಪ್ರಕಾಶ್, ಶಿವಕುಮಾರ, ದರ್ಶನ್ ಕುರೇನಹಳ್ಳಿ, ದೀಪು, ಮೋಹನ, ಪ್ರದೀಪ್, ಜಯಂತ್, ಗೌತಮ್ಮ ಅಲಿಯಾಸ್ ಕುಳ್ಳಯ್ಯ ಎಂದು ಗಾಯಾಳುಗಳು ದೂರಿದ್ದಾರೆ.







