ಮಂಗಳೂರು ಗೋಲಿಬಾರ್ ಗೆ ಎರಡು ವರ್ಷ; ಕ್ಯಾಂಪಸ್ ಫ್ರಂಟ್ ಪ್ರತಿಭಟನಾ ಪ್ರದರ್ಶನ

ಮಂಗಳೂರು, ಡಿ.20: ನಗರದಲ್ಲಿ ಸಿಎಎ, ಎನ್ಆರ್ಸಿ ವಿರುದ್ಧ ಪ್ರತಿಭಟನೆಯ ಸಂದರ್ಭ ನಡೆದ ಗೋಲಿಬಾರ್ ಸಂದರ್ಭ ಇಬ್ಬರು ಅಮಾಯಕರು ಬಲಿಯಾದ ಘಟನೆಗೆ ಎರಡು ವರ್ಷಗಳ ಸ್ಮರಣಾರ್ಥ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಜಿಲ್ಲಾ ಸಮಿತಿ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು ಮಾತನಾಡಿ ಈ ಒಂದು ದಿನವನ್ನು ನಾವೆಂದೂ ಮರೆಯುವುದಿಲ್ಲ, ಜಿಲ್ಲೆಗೆ ಇದೊಂದು ಕರಾಳ ದಿನವಾಗಿದೆ. ಅಮಾಯಕ ನೌಶೀನ್ ಹಾಗೂ ಜಲೀಲ್ ರನ್ನು ಗೋಲಿಬಾರ್ ನಡೆಸಿ ಕೊಂದಂತಹ ಪೋಲಿಸ್ ಕ್ರೂರರಿಗೆ ಹಾಗೂ ನೇತೃತ್ವ ನೀಡಿದವರಿಗೆ ಕಾನೂನಿನ ಮುಖಾಂತರ ಉತ್ತರ ನೀಡುವುದಾಗಿ ಹೇಳಿದರು.
ಕ್ಯಾಂಪಸ್ ಫ್ರಂಟ್ ರಾಜ್ಯ ಕಾರ್ಯದರ್ಶಿ ಸರ್ಫರಾಝ್ ಗಂಗಾವತಿ ಮಾತನಾಡಿ ಲಾಠಿ, ಗೋಲಿಬಾರ್ ಗಳ ಮುಖಾಂತರ ಇಂತಹ ನ್ಯಾಯಪರ ಹೋರಾಟಗಳನ್ನು ದಮನಿಸಬಹುದೆಂಬುದು ಕನಸು ಮಾತ್ರ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಮೊನ್ನೆಯ ರೈತರ ಹೋರಾಟದವರೆಗೆ ಹೋರಾಟಗಳು ಸೋತಿಲ್ಲ, ಸೋಲುವುದು ಕೂಡ ಇಲ್ಲ ಎಂದರು.
ಈ ಸಂದರ್ಭದಲ್ಲಿ ಮಂಗಳೂರು ನಗರ ಜಿಲ್ಲಾಧ್ಯಕ್ಷ ಸರಫುದ್ದೀನ್, ಗ್ರಾಮಾಂತರ ಅಧ್ಯಕ್ಷ ಅಶ್ರಫ್ ಪೊರ್ಕೊಡಿ, ಜಿಲ್ಲಾ ಮುಖಂಡರಾದ ಅರ್ಫೀದ್ ಅಡ್ಕಾರ್, ರಿಯಾಝ್ ಅಂಕತ್ತಡ್ಕ, ಅಶ್ಫಕ್ ಬಂಟ್ವಾಳ, ಫಯಾಝ್ ವಿಟ್ಲ, ಸರ್ಫರಾಝ್ ಅಂಗರಗುಂಡಿ, ಮುಕ್ತಾರ್ ಕಲ್ಲಡ್ಕ ಉಪಸ್ಥಿತರಿದ್ದರು. ಜಿಲ್ಲಾ ಮುಖಂಡ ಶಂಸುದ್ದೀನ್ ನಿರೂಪಿಸಿದರು.
ಗೋಲಿಬಾರ್ ಅಣುಕು ಪ್ರದರ್ಶನ
ಪ್ರತಿಭಟನಾ ಸ್ಥಳದಲ್ಲೇ ಗೋಲಿಬಾರ್ ನಡೆಸಿದ ಘಟನೆಯನ್ನು ಅಣುಕು ಪ್ರದರ್ಶನದ ಮೂಲಕ ನೆನಪಿಸಲಾಯಿತು.







