ಅಂಗನವಾಡಿಗಳಿಗೆ ಸಂಜೀವಿನಿ ಚಿಕ್ಕಿ ಸರಬರಾಜಿಗೆ ಮಾತುಕತೆ: ಉಡುಪಿ ಜಿಪಂ ಸಿಇಓ

ಉಡುಪಿ, ಡಿ.21: ಜಿಲ್ಲೆಯ ಅಂಗನವಾಡಿಗಳಿಗೆ ಸಂಜೀವಿನಿ ಚಿಕ್ಕಿ ಸರಬ ರಾಜು ಕುರಿತಂತೆ ಮಾತುಕತೆ ನಡೆಸಿ ಮಾರುಕಟ್ಟೆ ಉತ್ತೇಜಿಸಲು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ ನವೀನ್ ಭಟ್ ಭರವಸೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕಾಪು ತಾಲೂಕು ಪಂಚಾಯತ್, ಪಡುಬಿದ್ರಿ ಗ್ರಾಪಂ, ಮಹಾಗಣಪತಿ ಗ್ರಾಪಂ ಮಟ್ಟದ ಒಕ್ಕೂಟ, ಶ್ರೀಸುಬ್ರಹ್ಮಣ್ಯ ಸಂಜೀವಿನಿ ಗುಂಪು ಇವುಗಳ ಸಹಯೋಗದಲ್ಲಿ ಪಾದೆಬೆಟ್ಟಿನಲ್ಲಿ ನಿರ್ಮಿಸಿರುವ ಸಂಜೀವಿನಿ ಚಿಕ್ಕಿ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಜಿಪಂ ಸಹಿತ ವಿವಿಧ ಸಭೆಗಳಲ್ಲಿ ಬಿಸ್ಕತ್ ಬದಲು ಚಿಕ್ಕಿ ಖರೀದಿಸಿ ಉಪ ಯೋಗಿಸಲು ಕ್ರಮ ವಹಿಸಲಾಗುವುದು. ಗಿರಿಜನರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳ ಲಾಗಿದೆ. ಗಿರಿಜನರು ಕೀಳರಿಮೆ ಬಿಟ್ಟು ಸರಕಾರದ ಯೋಜನೆಗಳ ಮೂಲಕ ಸ್ವಾವಲಂಬಿಗಳಾಗಬೇಕು. ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡಲಾಗುವುದು. ಬೈಂದೂರಿನಲ್ಲಿ ಕೊರಗ ಸಮುದಾಯದ ಸಂಘ ಮೂಲಕ ಅಡಕೆ ಹಾಳೆ ತಟ್ಟೆ ನಿರ್ಮಾಣ ಘಟಕ ಕಾರ್ಯಗತವಾಗಲಿದೆ ಎಂದರು.
ಘಟಕವನ್ನು ಉದ್ಘಾಟಿಸಿದ ಶಾಸಕ ಲಾಲಾಜಿ ಆರ್ ಮೆಂಡನ್ ಮಾತನಾಡಿ, ಘಟಕ ಸ್ಥಾಪನೆ ಸಣ್ಣ ಪ್ರಯತ್ನವಾದರೂ ಕೊರಗ ಕುಟುಂಬಗಳ ದುಡಿಮೆಗೆ ಅವಕಾಶ ಸೃಷ್ಟಿಯಾಗಿದೆ. ಅದರ ಸದುಪಯೋಗ ಪಡಿಸಿ ಉತ್ತಮ ರೀತಿಯಲ್ಲಿ ಪರಿವರ್ತೆ ಹೊಂದಬೇಕು ಎಂದು ಹೇಳಿದರು.
ಚಿಕ್ಕಿ ತಯಾರಿ ತರಬೇತುದಾರ ಗಣೇಶ್ ಅವರನ್ನು ಗೌರವಿಸಲಾಯಿತು. ಪಡುಬಿದ್ರಿ ಗ್ರಾಪಂ ಅಧ್ಯಕ್ಷ ರವಿ ಶೆಟ್ಟಿ, ಜಿಪಂ ಯೋಜನಾ ನಿರ್ದೇಶಕ ಬಾಬು ಎಂ., ಜಿಲ್ಲಾ ಪಂಚಾಯತ್ ಕಾಪು ತಾಪಂ ಕಾರ್ಯನಿರ್ವಹಣಾಧಿಕಾರಿ ಸತೀಶ್ ಬಿ.ಎಸ್., ಐಟಿಡಿಪಿ ಯೋಜನಾ ಸಮಾನವ್ವಯಾಧಿಕಾರಿ ದೂದ್ ಪೀರ್, ಪಡುಬಿದ್ರಿ ಗ್ರಾಪಂ ಸದಸ್ಯರಾದ ಅಶೋಕ್ ಪೂಜಾರಿ, ಫಿರೋಜ್, ಅಬ್ದುಲ್ ಹುಸೈನ್, ಶೋಭಾ, ಶಿವಮ್ಮ, ಶಶಿಕಲಾ, ಗೀತಾ, ಕಾರ್ಕಳ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ ಉಪಸ್ಥಿತರಿದ್ದರು.
ಜಿಪಂ ಸಹಾಯಕ ಯೋಜನಾಧಿಕಾರಿ ಜೇಮ್ಸ್ ಡಿಸಿಲ್ವಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ ಆಚಾರ್ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವ್ಯವಸ್ಥಾಪಕಿ ನವ್ಯಾ ವಂದಿಸಿದರು.







