ಜಗತ್ತು ಕಂಡ ಶ್ರೇಷ್ಠ ಗಣಿತ ಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್
ಇಂದು ರಾಷ್ಟ್ರೀಯ ಗಣಿತ ಶಾಸ್ತ್ರ ದಿನ
ಏನಿದು ಹಾರ್ಡಿ-ರಾಮಾನುಜನ್ ನಂಬರ್?
ಈ ಹಾರ್ಡಿ-ರಾಮಾನುಜನ್ ನಂಬರ್ನ ಹಿಂದೆ ಒಂದು ನಿಜವಾದ ರೋಚಕ ಕತೆ ಇದೆ. ಒಮ್ಮೆ ರಾಮಾನುಜನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾಗ ಆತನನ್ನು ನೋಡಲು ಖ್ಯಾತ ಬ್ರಿಟಿಷ್ ಗಣಿತಜ್ಞ ಡಿ.ಎಚ್. ಹಾರ್ಡಿ ಅವರು ಟ್ಯಾಕ್ಸಿಯಲ್ಲಿ ಬಂದಿದ್ದರು. ಅದರ ನಂಬರ್ 1729. ರಾಮಾನುಜನ್ ಜೊತೆ ಉಭಯಕುಶಲೊಪರಿ ವಿಚಾರಿಸುತ್ತಾ ಈ ವಿಚಾರವನ್ನು ಹಾರ್ಡಿ ರಾಮಾನುಜನ್ಗೆ ತಿಳಿಸುತ್ತಾ, 1729 ಬಹಳ ಡಲ್ ಆಗಿರುವ ಏನೂ ವಿಶೇಷತೆ ಇಲ್ಲದ ನಂಬರ್ ಎಂದಾಗ ಅನಾರೋಗ್ಯದ ನಡುವೆಯೂ ರಾಮಾನುಜನ್ ಇದೊಂದು ಅತ್ಯಂತ ವಿಶೇಷ ನಂಬರ್ ಎಂದು ಹೇಳಿ ಅದರ ವಿಶೇಷತೆಯನ್ನು ಕ್ಷಣಾರ್ಧದಲ್ಲಿ ತಿಳಿಸಿದರು. ಈ ನಂಬರ್ನ ವಿಶೇಷತೆಯನ್ನು ರಾಮನುಜನ್ ಹೀಗೆ ಹೇಳಿರುತ್ತಾರೆ, ಇದೊಂದು ಅತೀ ವಿಶೇಷ ಸಂಖ್ಯೆಯಾಗಿದ್ದು, 2 ಸಂಖ್ಯೆಗಳ ಕ್ಯೂಬ್ಗಳನ್ನು ಕೂಡಿಸುವಾಗ ಸಿಗುವ ಎರಡನೇ ಅತೀ ಚಿಕ್ಕ ನಂಬರ್ ಇದಾಗಿದೆ ಮತ್ತು ಎರಡು ರೀತಿಯಲ್ಲಿಯೂ ಈ ಸಂಖ್ಯೆಯನ್ನು ಕ್ಯೂಬ್ಗಳ ಮೊತ್ತವಾಗಿ ಕಾಣಬಹುದು ಎಂದು ಹೇಳಿದರು. (“It is a very intresting number; it is the smallest number expressible as the sum of two cubes in two different ways”) 1729ರನ್ನು 1 X 1 X 1 + 12 X 12 X 12 + 1729ರನ್ನು 9 X 9 X 9 + 10 X 10 X 10 = 1729 ಎಂಬುದಾಗಿ ವಿವರಿಸಿದಾಗ ಹಾರ್ಡಿ ದಿಗ್ಭ್ರಮೆಗೊಂಡರು. ಅಂದಿನಿಂದ 1729 ಹಾರ್ಡಿ- ರಾಮನುಜ್ ನಂಬರ್ ಎಂದು ಪ್ರಖ್ಯಾತಿಗೊಂಡಿತು.
ಪ್ರತಿ ವರ್ಷ ಡಿಸೆಂಬರ್ 22 ರಂದು ರಾಷ್ಟ್ರೀಯ ಗಣಿತ ಶಾಸ್ತ್ರ ದಿನ ಎಂದು ಆಚರಣೆ ಮಾಡಿ ಗಣಿತ ಶಾಸ್ತ್ರಕ್ಕೆ ಅಮೋಘ ಕೊಡುಗೆ ನೀಡಿದ ಮಹಾನ್ ಗಣಿತ ಶಾಸ್ತ್ರಜ್ಞ ಶ್ರೀನಿವಾಸನ್ ರಾಮಾನುಜನ್ ಅವರನ್ನು ನೆನಪಿಸಿಕೊಂಡು ಅವರು ಗಣಿತ ಶಾಸ್ತ್ರಕ್ಕೆ ನೀಡಿದ ಸೇವೆಯನ್ನು ಸ್ಮರಿಸುವ ಕಾರ್ಯವನ್ನು ರಾಷ್ಟ್ರದಾದ್ಯಂತ ಮಾಡಲಾಗುತ್ತದೆ. ಇದರ ಜೊತೆಗೆ ಯುವಜನರಲ್ಲಿ ಮತ್ತು ಮಕ್ಕಳಲ್ಲಿ ಗಣಿತ ಶಾಸ್ತ್ರದ ಬಗ್ಗೆ ಹೆಚ್ಚಿನ ಒಲವು ಮತ್ತು ಆಸಕ್ತಿ ಮೂಡಿಸಿ ಯುವ ಪ್ರತಿಭೆಗಳನ್ನು ಗಣಿತ ಶಾಸ್ತ್ರದ ಸಂಶೋಧನೆಗಳತ್ತ ಮುಖ ಮಾಡಿಸುವ ಸದುದ್ದೇಶ ಕೂಡ ಅಡಗಿದೆ. ಜಗತ್ತು ಕಂಡ ಶ್ರೇಷ್ಠ ಗಣಿತಜ್ಞ ಶ್ರೀನಿವಾಸನ್ ರಾಮಾನುಜನ್ ಅವರ 125ನೇ ಜನ್ಮ ದಿನಾಚರಣೆ (ಡಿಸೆಂಬರ್ 22, 2012) ಯಂದು ಅಂದಿನ ನಮ್ಮ ದೇಶದ ಪ್ರಧಾನಿ ಮನಮೋಹನ್ ಸಿಂಗ್ ಅವರು ಚೆನೈಯಲ್ಲಿ ಈ ರಾಷ್ಟ್ರೀಯ ಗಣಿತ ಶಾಸ್ತ್ರ ದಿನಾಚರಣೆಗೆ ನಾಂದಿ ಹಾಡಿದರು. ಅಂದಿನಿಂದ ಪ್ರತಿವರ್ಷ ಡಿಸೆಂಬರ್ 22ರಂದು ರಾಷ್ಟ್ರದಾದ್ಯಂತ ರಾಷ್ಟ್ರೀಯ ಗಣಿತ ಶಾಸ್ತ್ರ ದಿನದ ಅಂಗವಾಗಿ ಗಣಿತ ಶಾಸ್ತ್ರದ ಸೆಮಿನಾರ್ ವರ್ಕ್ಶಾಪ್ ಮತ್ತು ಕ್ವಿಝ್ಗಳನ್ನು ಏರ್ಪಡಿಸಿ ಮಕ್ಕಳಲ್ಲಿ ಗಣಿತಶಾಸ್ತ್ರದ ಬಗ್ಗೆ ಒಲವು ಮೂಡಿಸಲಾಗುತ್ತಿದೆ ಮತ್ತು ಶ್ರೀನಿವಾಸನ್ ರಾಮಾನುಜನ್ ಜಗತ್ತಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸುವ ಕಾರ್ಯ ನಡೆಸಲಾಗುತ್ತದೆ.
ಯಾರಿವರು ರಾಮಾನುಜನ್?
ಶ್ರೀನಿವಾಸನ್ ಅಯ್ಯಂಗಾರ್ ರಾಮಾನುಜನ್, 1887ನೇ ಇಸವಿ ಡಿಸೆಂಬರ್ 22ರಂದು ಈರೋಡ್ (ತಮಿಳುನಾಡು)ನಲ್ಲಿ ಜನಿಸಿದರು. ಅತ್ಯಂತ ಕಡುಬಡುತನದ ಬ್ರಾಹ್ಮಣ ಮನೆತನದಲ್ಲಿ ಹುಟ್ಟಿದ ರಾಮಾನುಜನ್ ಬದುಕಿದ್ದು, ಕೇವಲ 32 ವರ್ಷ. 1920 ಎಪ್ರಿಲ್ 26ರಂದು ಅವರು ವಿಧಿವಶರಾದರು. ಆದರೆ ಅಷ್ಟು ಕಡಿಮೆ ಅವಧಿಯಲ್ಲಿ ಅವರು ಸಾಧಿಸಿದ ಸಾಧನೆ ಮಾತ್ರ ಊಹೆಗೂ ನಿಲುಕದ್ದು. ಬಹಳ ಮೇಧಾವಿಯಾಗಿದ್ದ ಅವರು ತನ್ನ 12ನೇ ವಯಸ್ಸಿಗೆ ಟ್ರಿಗ್ನೂಮೆಟ್ರಿಯನ್ನು ಕರಗತ ಮಾಡಿ ತನ್ನದೇ ಆದ ವಿಚಾರಗಳನ್ನು ಪ್ರತಿಪಾದಿಸಿದರು. ಕಡುಬಡತನವಿದ್ದರೂ ಸ್ನೇಹಿತರಿಂದ ಪುಸ್ತಕಗಳನ್ನು ಪಡೆದು ಓದುತ್ತಿದ್ದು, ಜೀವನೋಪಾಯಕ್ಕಾಗಿ ಕ್ಲರ್ಕ್ ಕೆಲಸ ಮಾಡಿ ತನ್ನ ಓದಿನ ಅಗತ್ಯಗಳನ್ನು ಪೂರ್ಯೆಸುತ್ತಿದ್ದ ಅವರು ಗಣಿತಶಾಸ್ತ್ರದ ಅತೀ ಕ್ಲಿಷ್ಟ ಸಮಸ್ಯೆಗಳನ್ನು ಬಿಡಿಸಿ ತನ್ನದೇ ಆದ ಥಿಯರಿ ಮತ್ತು ಹೊಸ ಹೊಸ ವಿಚಾರಗಳನ್ನು ಪ್ರತಿಪಾದಿಸುತ್ತಿದ್ದರು. ಅವರ ಅಗಾಧ ಪ್ರತಿಭೆಗೆ ಮಾರುಹೋಗದ ಜನರೇ ಇರಲಿಲ್ಲ. ಅವರ ಬುದ್ಧಿಶಕ್ತಿಯನ್ನು ಒಬ್ಬ ಇಂಗ್ಲಿಷ್ ಯುವಕ ಗುರುತಿಸಿ ಅವರನ್ನು ಆಕ್ಸ್ಪರ್ಡ್ ಯೂನಿವರ್ಸಿಟಿಯ ಪ್ರೊ. ಹಾರ್ಡಿಯವರ ಬಳಿ ಕಳುಹಿಸುವ ವ್ಯವಸ್ಥೆ ಮಾಡುತ್ತಾನೆ. ಅಲ್ಲಿಂದ ರಾಮಾನುಜನ್ ಅವರ ಗಣಿತ ಶಾಸ್ತ್ರದ ಅಮೋಘ ಪ್ರಯಾಣ ಆರಂಭವಾಯಿತು. ಎಂತಹ ಕ್ಲಿಷ್ಟ ಸಮಸ್ಯೆಗಳನ್ನೂ ಯಾರ ಸಹಾಯವಿಲ್ಲದೆ ತನ್ನದೇ ಆದ ವಿಚಾರಗಳನ್ನು ಪ್ರತಿಪಾದಿಸಿ ಅದನ್ನು ಸಾಧಿಸುವ ಛಲ ಮತ್ತು ಕೌಶಲ ಅವರಿಗಿತ್ತು. ಅವರ ಹೆಚ್ಚಿನ ಎಲ್ಲಾ ಸಂಶೋಧನೆಗಳು ಭಾರತೀಯ ಗಣಿತ ಶಾಸ್ತ್ರ ನಿಯತಕಾಲಿಕಗಳಲ್ಲಿ ಪ್ರಕಟವಾಗಿತ್ತು. ಸುಮಾರು 3,900ಕ್ಕೂ ಹೆಚ್ಚು ಕ್ಲಿಷ್ಟ ಸಮಸ್ಯೆಗಳನ್ನು ಗುರುತಿಸಿ ದಾಖಲಾತಿಯನ್ನು ಅತೀ ಕಡಿಮೆ ಅವಧಿಯಲ್ಲಿ ಮಾಡಿ ವಿಶ್ವವಿಖ್ಯಾತಿ ಗಳಿಸಿದ್ದರು. ರಾಮಾನುಜನ್ ಪ್ರೈಮ್, ರಾಮಾನುಜನ್ ಥೀಟಾ ಪಂಕ್ಷನ್, ಪಾರ್ಟಿಷನ್ ಫಾರ್ಮುಲಾ, ಮ್ಯಾಕ್ ಥೀಟಾ ಪಂಕ್ಷನ್ ಹೀಗೆ ನೂರಾರು ವಿಚಾರಗಳು, ಸಂಶೋಧನೆಗಳು ಜಗತ್ವಿಖ್ಯಾತವಾಗಿವೆ. ಅತೀ ಕಡಿಮೆ ಅವಧಿಯಲ್ಲಿ ಆತ ಮಾಡಿದ ಈ ಸಾಧನೆಗಳು ಮತ್ತಷ್ಟು ಹೆಚ್ಚಿನ ಸಂಶೋಧನೆಗಳಿಗೆ ರಹದಾರಿಯನ್ನು ತೋರಿಸಿತ್ತು. ಇದು ಇನ್ನಿತರ ಹೊಸ ಹೊಸ ಪ್ರತಿಭೆಗಳಿಗೆ ಮತ್ತಷ್ಟು ಹುಮ್ಮಸ್ಸು ತುಂಬಿ ಗಣಿತ ಶಾಸ್ತ್ರದ ಬಗ್ಗೆ ಹೆಚ್ಚು ಹೆಚ್ಚು ಜನರು ಮುಖ ಮಾಡುವಂತೆ ಪ್ರೇರೇಪಣೆ ನೀಡಿತ್ತು ಎಂದರೆ ತಪ್ಪಾಗಲಾರದು. ಗಣಿತ ಶಾಸ್ತ್ರದ ಮೇಲೆ ವಿಪರೀತ ಮೋಹ ಹೊಂದಿದ್ದ ರಾಮಾನುಜನ್ ಇತರ ವಿಷಯಗಳಲ್ಲಿ ಆಸಕ್ತಿ ಹೊಂದಿರಲಿಲ್ಲ. 1904ರಲ್ಲಿ ಸರಕಾರಿ ಆರ್ಟ್ ಕಾಲೇಜು ಕುಂಬಕೋಣಮ್ ಇಲ್ಲಿ ದಾಖಲಾತಿಯಾದರೂ ಗಣಿತದಲ್ಲಿ ವಿಶೇಷ ವ್ಯಾಮೋಹದ ಕಾರಣದಿಂದ ಇತರ ವಿಷಯಗಳಲ್ಲಿ ಅನುತ್ತೀರ್ಣರಾಗಿ ಪದವಿಗಳಿಸಲಾಗಲಿಲ್ಲ. 14ನೇ ವಯಸ್ಸಿನಲ್ಲಿ ಮನೆಯಿಂದ ಓಡಿ ಹೋಗಿ ತನ್ನ ಗಣಿತಶಾಸ್ತ್ರದ ದಾಹವನ್ನು ತೀರಿಸಲು ಯತ್ನಿಸಿದ್ದರು. 1912ರಲ್ಲಿ ಭಾರತೀಯ ಗಣಿತ ಶಾಸ್ತ್ರ ಸೊಸೈಟಿಯ ಸಂಸ್ಥಾಪಕರಾದ ರಾಮಸ್ವಾಮಿ ಅಯ್ಯರ್ ಅವರು ರಾಮಾನುಜನ್ ಅವರ ಪ್ರತಿಭೆ ಗುರುತಿಸಿ ಅವರಿಗೆ ಮದ್ರಾಸ್ ಪೋರ್ಟ್ ಟ್ರಸ್ಟ್ನಲ್ಲಿ ಕ್ಲರ್ಕ್ ಕೆಲಸ ನೀಡಿದರು. ಇದರಿಂದ ಮತ್ತಷ್ಟು ಪ್ರಚೋದಿತರಾಗಿ ತನ್ನ ಎಲ್ಲಾ ಸಂಶೋಧನೆಗಳನ್ನು ಇಂಗ್ಲೆಂಡ್ ಗಣಿತಶಾಸ್ತ್ರಜ್ಞರಿಗೆ ರಾಮಾನುಜನ್ ಕಳುಹಿಸಲು ಆರಂಭಿಸಿದರು. 1913ರಲ್ಲಿ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಜಿ.ಎಚ್. ಹಾರ್ಡಿ ಇವರು ಆತನಿಗೆ ಪತ್ರ ಬರೆದು ಅವರನ್ನು ಇಂಗ್ಲೆಂಡ್ಗೆ ಆಹ್ವಾನಿಸಿದರು. 1914ರಲ್ಲಿ ಇಂಗ್ಲೆಂಡ್ಗೆ ತಲುಪಿ ಟ್ರಿನಿಟಿ ಕಾಲೇಜಿಗೆ ಸೇರುತ್ತಾರೆ. 1917ರಲ್ಲಿ ಲಂಡನ್ ಗಣಿತಶಾಸ್ತ್ರ ಸೊಸೈಟಿ ಇದರ ಸದಸ್ಯರಾಗುತ್ತಾರೆ. 1918ರಲ್ಲಿ ರಾಯಲ್ ಸೊಸೈಟಿ ಫೆಲೋ ಆಗಿ ಆಯ್ಕೆಯಾಗಿ ಅತೀ ಚಿಕ್ಕ ವಯಸ್ಸಿನಲ್ಲಿ ಇದರ ಸದಸ್ಯರಾದ ಹಿರಿಮೆ ಅವರದು. ಅದರೆ ಇಂಗ್ಲೆಂಡ್ನ ಆಹಾರ ಮತ್ತು ವಾತಾವರಣ ಅವರಿಗೆ ಹಿಡಿಸದೆ ಆರೋಗ್ಯ ಕೈಕೊಡುತ್ತದೆ. 1919ರಲ್ಲಿ ಆರೋಗ್ಯ ಸಮಸ್ಯೆಯಿಂದ ಭಾರತಕ್ಕೆ ವಾಪಸಾಗುತ್ತಾರೆ. ಹದಗೆಟ್ಟ ಆರೋಗ್ಯ ಮತ್ತಷ್ಟು ಕಾಡಿ 1920ರಲ್ಲಿ ಇಹಲೋಕ ತ್ಯಜಿಸುತ್ತಾರೆ. ಕೇವಲ 32 ವರ್ಷ ಬದುಕಿದ್ದರೂ ಸಾವಿರಾರು ವಿಚಾರಗಳನ್ನು, ಪ್ರಬಂಧಗಳನ್ನು ಬರೆದು, ನೂರಾರು ಸಂಶೋಧನೆಗಳನ್ನು ಮಾಡಿ ಯುವ ಪೀಳಿಗೆಗೆ ಬಹಳಷ್ಟು ಸ್ಫೂರ್ತಿ ನೀಡಿ ಗಣಿತಶಾಸ್ತ್ರಕ್ಕೆ ಅದ್ಭುತವಾದ ಕೊಡುಗೆ ನೀಡಿದ್ದನ್ನು ಜಗತ್ತು ಮರೆಯದು.
ಕೊನೆಮಾತು:
ಗಣಿತಶಾಸ್ತ್ರವನ್ನು ಆಂಗ್ಲಭಾಷೆಯಲ್ಲಿ ಮ್ಯಾಥಮೆಟಿಕ್ಸ್ ಎಂದು ಕರೆಯುತ್ತಾರೆ. ಗ್ರೀಕ್ ಭಾಷೆಯಲ್ಲಿ ಮಥೇಮ್ ಎಂದರೆ ಜ್ಞಾನ ಎಂದರ್ಥ. ಈ ಗ್ರೀಕ್ ಶಬ್ದದಿಂದ ಹುಟ್ಟಿದ ಗಣಿತಶಾಸ್ತ್ರದಲ್ಲಿ ನಂಬರ್ ಥಿಯರಿ, ಅಲ್ಜಿಬ್ರಾ, ಟ್ರಿಗ್ನೋಮೆಟ್ರಿ ಹೀಗೆ ಹಲವಾರು ವಿಷಯಗಳು ಹುದುಗಿದೆ. ಅರಿತಷ್ಟು ಆಳಕ್ಕೆ ಸರಿಯುವ ವಿಚಾರವೆಂದರೆ ಅದು ಗಣಿಶಾಸ್ತ್ರ ಎಂದರೆ ತಪ್ಪಾಗಲಾರದು. ಆರ್ಕಿಮಿಡೀಸ್ನನ್ನು ಗಣಿತಶಾಸ್ತ್ರದ ಪಿತಾಮಹ ಎಂದು ಕರೆಯುತ್ತಾರೆ. ಭಾರತ ಕಂಡ ಶ್ರೇಷ್ಠ ಗಣಿತಜ್ಞರಲ್ಲಿ ಆರ್ಯಭಟ, ಬ್ರಹ್ಮಗುಪ್ತ, ಭಾಸ್ಕರ-II ವರಾಹಮಿಹಿರ, ಶ್ರೀನಿವಾಸ ರಾಮಾನುಜನ್ ಸೇರಿದ್ದಾರೆ. ಆರ್ಯಭಟರನ್ನು ‘ಭಾರತದ ಗಣಿತಶಾಸ್ತ್ರದ ಪಿತಾಮಹ’ ಎಂದು ಕರೆಯುತ್ತಾರೆ. ಗಣಿತಶಾಸ್ತ್ರ ಎನ್ನುವುದು ಈಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಕಂಪ್ಯೂಟರ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಇದೆ. ಇದರ ಮೂಲವೇ ಗಣಿತಶಾಸ್ತ್ರ. ಸೌರ ಮಂಡಲ, ಸೌರ ವಿಜ್ಞಾನ, ವಿಮಾನಯಾನ ಅಥವಾ ಇನ್ನಾವುದೇ ವಿಚಾರದಲ್ಲಿ ಗಣಿತಶಾಸ್ತ್ರ ಇಲ್ಲದೇ ಏನನ್ನೂ ಕಂಡು ಹಿಡಿಯಲು ಸಾಧ್ಯವಿಲ್ಲ. ಸಾಧಿಸಲೂ ಸಾಧ್ಯವಿಲ್ಲ. ನಮ್ಮ ಎಲ್ಲಾ ಲೆಕ್ಕಾಚಾರವೂ, ದೈನಂದಿನ ವ್ಯವಹಾರಗಳು ಗಣಿತಶಾಸ್ತ್ರದ ಮೇಲೆ ಅವಲಂಬಿತವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಯುವ ಪೀಳಿಗೆ ಗಣಿತಶಾಸ್ತ್ರದತ್ತ ಒಲವು ತೋರಿಸುವಂತಹ ಮಾರ್ಗದರ್ಶನ ಮಾಡಬೇಕು ಮತ್ತು ವಾತಾವರಣ ನಿರ್ಮಿಸಬೇಕಾಗಿದೆ. ಗಣಿತಶಾಸ್ತ್ರದಲ್ಲಿ ಹೆಚ್ಚಿನ ಸಂಶೋಧನೆ ಆಗಬೇಕಾಗಿದೆ. ಯುವ ಪೀಳಿಗೆಯ ಜನರು ಮೂಲ ವಿಜ್ಞಾನಗಳ ಬಗ್ಗೆ ಒಲವು ತೋರಿಸುವಂತೆ ಮಾಡಲು ಸರಕಾರ ಇನ್ನೂ ಹೆಚ್ಚಿನ ಪ್ರೋತ್ಸಾಹ, ಸಹಕಾರ ಮತ್ತು ಅನುದಾನ ನೀಡಬೇಕು. ಹೀಗೆ ಮಾಡಿದಲ್ಲಿ ಹೆಚ್ಚಿನ ಸಂಶೋಧನೆ ನಡೆದು ಭಾರತ ವಿಶ್ವದಲ್ಲಿ ಗಣಿತಶಾಸ್ತ್ರದಲ್ಲಿ ದೊಡ್ಡಣ್ಣನಾಗುವುದರಲ್ಲಿ ಸಂಶಯವೇ ಇಲ್ಲ. ಯಾಕೆಂದರೆ ಭಾರತ ದೇಶದಲ್ಲಿ ಪ್ರತಿಭೆಗೆ ಏನೂ ಕೊರತೆ ಇಲ್ಲ. ಸೂಕ್ತ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಬೆನ್ನು ತಟ್ಟಬೇಕಾದ ಅನಿವಾರ್ಯತೆ ಇದೆ. ಹಾಗೆ ಮಾಡಿದಲ್ಲಿ ಭಾರತ ದೇಶದಲ್ಲಿ ನೂರಾರು ಹೊಸ ಹೊಸ ರಾಮಾನುಜನ್ಗಳು ಮತ್ತಷ್ಟು ಹುಟ್ಟಿ ಬಂದಾರು.