‘ಬ್ರೋಕರಪ್ಪ’ನ ಕುತಂತ್ರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಬೆಳಗಾವಿ, ಡಿ.22: ಜೆಡಿಎಸ್ ಮುಳುಗುವ ಹಡುಗು ಎಂದು ಹೇಳಿಕೆ ನೀಡಿರುವ ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಪ್ರತಿಪಕ್ಷದ ನಾಯಕರನ್ನು ಹಿಟ್ಲರ್ ಆಸ್ಥಾನದಲ್ಲಿ ಸುಳ್ಳು ಹೇಳುವುದನ್ನೆ ಕಾಯಕ ಮಾಡಿಕೊಂಡಿದ್ದ ಗೋಬೆಲ್ಗೆ ಹೋಲಿಕೆ ಮಾಡಿದ್ದಾರೆ.
ಈ ಸಂಬಂಧ ಟ್ವೀಟ್ಗಳನ್ನು ಮಾಡಿರುವ ಅವರು, ಸುಳ್ಳು ಹೇಳುವ ಚಾಳಿಗೆ ಚಿಕಿತ್ಸೆ ಇಲ್ಲ. ‘ಸಿದ್ದಕಲೆ’ಯ ನಿಷ್ಣಾತರಿಗೆ ಸುಳ್ಳೇ ದೇವರು, ಸುಳ್ಳೇ ಸರ್ವಸ್ವ. ಜೆಡಿಎಸ್ ಮುಳುಗುತ್ತಿರುವ ಹಡಗು ಎಂದು ಸುಳ್ಳು ಹೇಳಿಕೊಂಡು ಓಡಾಡುವ ‘ಗೊಬೆಲಪ್ಪ’ನ ‘ಬೂಸಿಭಜನೆ’ ಹೊಸದೇನೂ ಅಲ್ಲ. ರಾಜಕೀಯ ಜನ್ಮಕೊಟ್ಟ ಪಕ್ಷದ ಬಗ್ಗೆಯೇ ಹಗುರವಾಗಿ ಮಾತನಾಡುವ ‘ಕೃತಘ್ನ’ತೆಗೆ ಇದೇ ಸಾಕ್ಷಿ ಎಂದು ಕಿಡಿಗಾರಿದ್ದಾರೆ.
ಒಬ್ಬ ನಾಯಕನನ್ನು ಸೃಷ್ಟಿಸುವ ಯೋಗ್ಯತೆ ಇಲ್ಲ. ಇರುವ ಪಕ್ಷದ ಮೇಲೆ ವಿಶ್ವಾಸವಿಲ್ಲ. ‘ಬ್ರೂಟಸ್ ಮನಃಸ್ಥಿತಿ’, ಸಂದರ್ಭಕ್ಕೆ ತಕ್ಕಂತೆ ‘ಬಣ್ಣ ಬದಲಿಸುವ ಊಸರವಳ್ಳಿ ದುಸ್ಥಿತಿ’. ಆಪರೇಷನ್ ಕಮಲದಲ್ಲಿ ಕುಮ್ಮಕ್ಕಾಗಿ ಮೈತ್ರಿ ಸರಕಾರ ಕೆಡವಿದ ಸಿದ್ದಶೂರನ ಸಾರಥ್ಯದಲ್ಲಿ ‘ಆಪರೇಷನ್ ಹಸ್ತ’ ನಡೆಯುತ್ತಿದೆ ಎಂದು ದೂರಿದ್ದಾರೆ.
ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ನಮ್ಮ ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ‘ಬ್ರೋಕರಪ್ಪ’ನ ಕುತಂತ್ರಕ್ಕೆ ಹೆದರುವ ಪ್ರಶ್ನೆ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್, ಈಗ ‘ಅಭಿನವ ಅರಸು’ ಎಂದು ಪುಂಗಿ ಬಿಡುವ ‘ಸುಳ್ಳುಸಿದ್ದಪ್ಪ’ನಿಗೆ ಶರಣಾಗಿದೆ. ಈ ವ್ಯಕ್ತಿಗೆ ಅರಸು ಹೆಸರೇಳುವ ಅರ್ಹತೆಯೇ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೆಡಿಎಸ್ ಮುಳುಗುವ ಪಕ್ಷವಾ? ತೇಲುವಾ ಪಕ್ಷವಾ? ಎನ್ನುವುದನ್ನು 2023ರ ವಿಧಾನಸಭೆ ಚುನಾವಣೆಯಲ್ಲಿ ನಾಡಿನ ಜನರೇ ತೋರಿಸುತ್ತಾರೆ. ಅಲ್ಲಿವರೆಗೆ ಸಿದ್ದಸೂತ್ರಧಾರನ ‘ಆಪರೇಷನ್ ಹಸ್ತವೆಂಬ ಅಸಹ್ಯ’ ನಡೆಯಲಿ. ಅದಕ್ಕೆ ಎಷ್ಟೇ ‘ಕೋನ’ಗಳನ್ನು ಸೃಷ್ಟಿಸಿದರೂ ಜೆಡಿಎಸ್ ಜಗ್ಗುವುದಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಡಿಎಸ್ ಜಟ್ಟಿಗಳನ್ನು ಸೃಷ್ಟಿಸುವ ಪಕ್ಷ. ನಮ್ಮ ಜಟ್ಟಿಗಳನ್ನು ಎಗರಿಸಿಕೊಂಡು ಹೋಗುವ ʼಬ್ರೋಕರಪ್ಪʼನ ಕುತಂತ್ರಕ್ಕೆ ಹೆದರುವ ಪ್ರಶ್ನೆ ಇಲ್ಲ. ಹಿಂದೆ ದೇವರಾಜ ಅರಸು ಅವರಿಗೆ ನರಕಯಾತನೆ ನೀಡಿದ್ದ ಕಾಂಗ್ರೆಸ್, ಈಗ ʼಅಭಿನವ ಅರಸುʼ ಎಂದು ಪುಂಗಿ ಬಿಡುವ ʼಸುಳ್ಳುಸಿದ್ದಪ್ಪʼನಿಗೆ ಶರಣಾಗಿದೆ. ಈ ವ್ಯಕ್ತಿಗೆ ಅರಸು ಹೆಸರೇಳುವ ಅರ್ಹತೆಯೇ ಇಲ್ಲ. 3/4
— H D Kumaraswamy (@hd_kumaraswamy) December 22, 2021