ಇನ್ಲ್ಯಾಂಡ್ ಸಂಸ್ಥೆಯಿಂದ ಪುತ್ತೂರಿನಲ್ಲಿ ಹೊಸ ಲೋಕ ಸೃಷ್ಠಿ : ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್
ಇನ್ಲ್ಯಾಂಡ್ ಮಯೂರ್ ಉದ್ಘಾಟನೆ
![ಇನ್ಲ್ಯಾಂಡ್ ಸಂಸ್ಥೆಯಿಂದ ಪುತ್ತೂರಿನಲ್ಲಿ ಹೊಸ ಲೋಕ ಸೃಷ್ಠಿ : ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಇನ್ಲ್ಯಾಂಡ್ ಸಂಸ್ಥೆಯಿಂದ ಪುತ್ತೂರಿನಲ್ಲಿ ಹೊಸ ಲೋಕ ಸೃಷ್ಠಿ : ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್](https://www.varthabharati.in/sites/default/files/images/articles/2021/12/22/318581-1640175648.jpeg)
ಪುತ್ತೂರು: ಕಟ್ಟಡ ನಿರ್ಮಾಣದಲ್ಲಿ ತನ್ನದೇ ಆದ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಇನ್ಲ್ಯಾಂಡ್ ಬಿಲ್ಡರ್ಸ್ ಸಂಸ್ಥೆಯು ಪುತ್ತೂರಿನಲ್ಲಿ ಇನ್ಲ್ಯಾಂಡ್ ಮಯೂರ್ ರೂಪದಲ್ಲಿ ಹೊಸದೊಂದು ಲೋಕವನ್ನು ಸೃಷ್ಠಿಸಿದೆ ಎಂದು ಪುತ್ತೂರಿನ ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ ಹೇಳಿದರು.
ಅವರು ಬುಧವಾರ ಪುತ್ತೂರಿನ ಮುಖ್ಯರಸ್ತೆಯಲ್ಲಿ ಇನ್ಲ್ಯಾಂಡ್ ಬಿಲ್ಡರ್ಸ್ ವತಿಯಿಂದ ನೂತನವಾಗಿ ನಿರ್ಮಾಣಗೊಂಡಿರುವ ‘ಇನ್ಲ್ಯಾಂಡ್ ಮಯೂರ್’ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ನೂತನ ವಸತಿ ಸಮುಚ್ಚಯವನ್ನು ಉದ್ಘಾಟಿಸಿ ಮಾತನಾಡಿದರು. ನೂತನ ಸಮುಚ್ಚಯ ಕಟ್ಟಡವನ್ನು ಅದ್ಭುತ ಮಾದರಿಯಲ್ಲಿ ನಡೆಸಲಾಗಿದ್ದು, ಈ ನಿರ್ಮಾಣವು ಬೆಳೆಯುತ್ತಿರುವ ಪುತ್ತೂರಿಗೆ ಚಿನ್ನದ ಕಿರೀಟವಾಗಿ ರೂಪುಗೊಂಡಿದೆ ಎಂದರು.
ವಾಣಿಜ್ಯ ಸಂಕೀರ್ಣವನ್ನು ನಾಕ್ ಆ್ಯಂಡ್ ರೈ ಎಂಟರ್ ಪ್ರೈಸಸ್ನ ಎ. ಚಿಕ್ಕಪ್ಪ ನಾಯ್ಕ್ ಉದ್ಘಾಟಿಸಿ ಶುಭ ಹಾರೈಸಿದರು.
ಅತಿಥಿಯಾಗಿ ಭಾಗವಹಿಸಿದ್ದ ನಗರಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಮಾತನಾಡಿ, ಜಿಲ್ಲಾ ಕೇಂದ್ರವಾಗಿ ಬೆಳೆಯುತ್ತಿರುವ ಪುತ್ತೂರಿನಲ್ಲಿ ಜನರ ನಿರೀಕ್ಷೆಗಳೂ ಹೆಚ್ಚುತ್ತಿದೆ. ಇದಕ್ಕೆ ಪೂರಕವಾಗಿ ಇನ್ಲ್ಯಾಂಡ್ ಮಯೂರ್ ಸಮುಚ್ಚಯವು ನಗರದ ಕೇಂದ್ರ ಭಾಗದಲ್ಲಿ ನಿರ್ಮಾಣಗೊಂಡು ಪುತ್ತೂರಿನ ಗರಿಮೆಯನ್ನು ಹೆಚ್ಚಿಸಿದೆ. ಪುತ್ತೂರಿನ ಅಭಿವೃದ್ಧಿಗೆ ಸಂಸ್ಥೆಯು ತನ್ನದೇ ಆದ ಕೊಡುಗೆಯನ್ನು ನೀಡಿದೆ ಎಂದರು.
ಕ್ರೆಡಾ ಸಂಸ್ಥೆಯ ಅಧ್ಯಕ್ಷ ಹಾಗೂ ಕಟ್ಟಡ ನಿರ್ಮಾಣ ಉದ್ಯಮಿ ಪುಷ್ಪರಾಜ್ ಜೈನ್ ಮಾತನಾಡಿ ಪುತ್ತೂರಿಗೆ ಉತ್ತಮ ಕಟ್ಟಡ ಲಭ್ಯವಾಗಿದೆ. ಈ ಕಟ್ಟಡವು ಆಂತರಿಕ ವಿನ್ಯಾಸದಲ್ಲಿ ಅಂತರಾಷ್ಟ್ರೀಯ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಇನ್ಲ್ಯಾಂಡ್ ಸಂಸ್ಥೆಯು ವಸತಿ ಸಮುಚ್ಚಯದಲ್ಲಿ ಮನೆಗಳನ್ನು ಮಾರಾಟ ಮಾಡಿದ ಬಳಿಕವೂ ತನ್ನ ಗ್ರಾಹಕರಿಗೆ ಸೇವೆ ನೀಡುತ್ತಿರುವುದು ಸಂಸ್ಥೆಯ ಯಶಸ್ಸಿಗೆ ಪ್ರಧಾನ ಕಾರಣವಾಗಿದೆ ಎಂದು ಹೇಳಿದರು.
ಪ್ರಸ್ತಾವಿಕ ಮಾತನಾಡಿದ ಇನ್ಲ್ಯಾಂಡ್ ಬಿಲ್ಡರ್ಸ್ನ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ಅವರು ಇನ್ಲ್ಯಾಂಡ್ ಮಯೂರ ವಸತಿ ಸಮುಚ್ಚಯವು 72 ಮನೆಗಳನ್ನು ಹಾಗೂ ವಾಣಿಜ್ಯ ಸಮುಚ್ಚಯವು 34 ಅಂಗಡಿ ಮಳಿಗೆಗಳನ್ನು ಹೊಂದಿದೆ. ಕಳೆದ 37 ವರ್ಷಗಳಿಂದ ಇನ್ಲ್ಯಾಂಡ್ ಸಂಸ್ಥೆಯು ಮಂಗಳೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಾಣ ಮಾಡುತ್ತಿದೆ. ಕಟ್ಟಡ ನಿರ್ಮಾಣದಲ್ಲಿ ಗುಣಮಟ್ಟ ಹಾಗೂ ಮಾರಾಟದ ನಂತರ ಗ್ರಾಹಕ ಕಾಳಜಿಯನ್ನು ಸಂಸ್ಥೆಯು ಹೊಂದಿರುವುದೇ ಯಶಸ್ವಿಗೆ ಕಾರಣವಾಗಿದೆ ಎಂದರು.
ಸಭಾ ಕಾರ್ಯಕ್ರಮದ ಮೊದಲು ಹಿಂದೂ, ಮುಸ್ಲಿಂ, ಕ್ರೈಸ್ತ ಧರ್ಮಗಳ ಧರ್ಮಗುರುಗಳಿಂದ ಪೂಜೆ, ಪ್ರಾರ್ಥನೆ ನಡೆಸಲಾಯಿತು.
ವೇದಿಕೆಯಲ್ಲಿ ಇನ್ಲ್ಯಾಂಡ್ ಬಿಲ್ಡರ್ಸ್ನ ನಿರ್ದೇಶಕರಾದ ಇಂಜಿನಿಯರ್ ವಹಾಜ್ ಯೂಸುಫ್, ಇಂಜಿನಿಯರ್ ಮೆಹರಾಜ್ ಯೂಸುಫ್ ಉಪಸ್ಥಿತರಿದ್ದರು.
ಶಾಹಿಲ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಮಾರುಕಟ್ಟೆ ಮುಖ್ಯಸ್ಥ ಉಲ್ಲಾಸ್ ವಂದಿಸಿದರು.