ಮೈಷುಗರ್ ಟರ್ಬೈನ್ ಯಂತ್ರ ಸಾಗಣೆ ಪ್ರಕರಣ: ಪ್ರಗತಿಪರ ಸಂಘಟನೆಗಳಿಂದ ಮೈಷುಗರ್ ಅಧ್ಯಕ್ಷರಿಗೆ ತರಾಟೆ

ಮಂಡ್ಯ, ಡಿ.22: ಸರಕಾರಿ ಸ್ವಾಮ್ಯದ ಮೈಷುಗರ್ ಸಕ್ಕರೆ ಕಾರ್ಖಾನೆಯಿಂದ ನಿರಾಣಿ ಷುಗರ್ಸ್ ಗುತ್ತಿಗೆ ಪಡೆದಿರುವ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆಗೆ(ಪಿಎಸ್ಎಸ್ಕೆ) ಸಾಗಾಣೆ ಮಾಡುತ್ತಿದ್ದ ಪ್ರಕರಣ ಮಂಗಳವಾರ ಬೆಳಕಿಗೆ ಬಂದಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಪಿಎಸ್ಎಸ್ಕೆ ಸಿಬ್ಬಂದಿ ಮಂಗಳವಾರ ಅನಧಿಕೃತವಾಗಿ ಮಂಡ್ಯದ ಮೈಷುಗರ್ ಕಾರ್ಖಾನೆ ಆವರಣ ಪ್ರವೇಶ ಮಾಡಿ ದುಬಾರಿ ಮೌಲ್ಯದ ಟರ್ಬೈನ್ ಗವರ್ನರ್ ಯಂತ್ರವನ್ನು ಸಾಗಾಣೆ ಮಾಡುತ್ತಿದ್ದ ವೇಳೆ ಕರವೇ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮು, ನಗರಾಧ್ಯಕ್ಷ ಟಿ.ಕೆ.ಸೋಮಶೇಖರ್, ಇತರ ಮುಖಂಡರು ತಡೆದು ಪ್ರತಿಭಟನೆ ವ್ಯಕ್ತಪಡಿಸಿದ್ದರು.
ಈ ವಿಷಯ ತಿಳಿಯುತ್ತಿದ್ದಂತೆ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ರೈತ ನಾಯಕಿ ಸುನಂದಾ ಜಯರಾಂ, ರೈತಸಂಘದ ಚಂದ್ರಶೇಖರ್ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ನಾಗೇಂದ್ರ, ಸಿಪಿಎಂನ ಟಿ.ಎಲ್.ಕೃಷ್ಣೇಗೌಡ, ಸಿ.ಕುಮಾರಿ, ಟಿ.ಯಶವಂತ್, ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಇತರೆ ಪ್ರಗತಿಪರ ಸಂಘಟನೆಗಳ ಮುಖಂಡರು ಕಾರ್ಖಾನೆಗೆ ದಾವಿಸಿ ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡರು.
ಮೈಷುಗರ್ ಕಂಪನಿಯ ಸಹವಿದ್ಯುತ್ ಘಟಕದ ಟರ್ಬೈನ್ ಯಂತ್ರವನ್ನು ನಿರಾಣಿ ಷುಗರ್ಸ್ನ ಪಿಎಸ್ಎಸ್ಕೆಗೆ ಸಾಗಿಸಲು ಆ ಕಾರ್ಖಾನೆಯ ಸಿಬ್ಬಂದಿ ಶರಣಬಸಪ್ಪ ಎಂಬಾತನಿಗೆ ಸಹಕರಿಸಿದ ಮೈಷುಗರ್ ಕಾರ್ಖಾನೆಯ ಪ್ರಕಾಶ್ ಎಂಬ ಅಧಿಕಾರಿ ವಿರುದ್ಧ ಪೊಲೀಸರಿಗೆ ದೂರು ನೀಡಬೇಕು ಎಂದು ಅವರು ಅಧ್ಯಕ್ಷರಿಗೆ ಒತ್ತಾಯಿಸಿದರು.
ಮೈಷುಗರ್ ಕಾರ್ಖಾನೆ ಆರಂಭಕ್ಕೆ ಸರಕಾರ ಹಸಿರುನಿಶಾನೆ ತೋರಿಸಿದ್ದರೂ ತಾವು ಆ ನಿಟ್ಟಿನಲ್ಲಿ ಯಾವುದೇ ಕ್ರಮವಹಿಸಿಲ್ಲವೇಕೆ? ಎಂದು ಅಧ್ಯಕ್ಷರನ್ನು ಪ್ರಶ್ನಿಸಿದ ಅವರು, ಕಾರ್ಖಾನೆಯಲ್ಲಿರುವ ಯಂತ್ರೋಪಕರಣ ಸೇರಿದಂತೆ ಪ್ರತಿಯೊಂದು ವಸ್ತುಗಳನ್ನು ಕಾಪಾಡಬೇಕಾದ ಜವಾಬ್ಧಾರಿ ನಿಮ್ಮ ಮೇಲಿದೆ. ಜತೆಗೆ ಕಾರ್ಖಾನೆ ಆರಂಭಕ್ಕೆ ಕ್ರಮವಹಿಸಬೇಕು ಎಂದು ಅವರು ಅಧ್ಯಕ್ಷರಿಗೆ ತಾಕೀತು ಮಾಡಿದರು.
ಯಂತ್ರ ನೀಡುವಂತೆ ನನಗೆ ಪಿಎಸ್ಎಸ್ಕೆಯಿಂದ ಯಾವುದೇ ಪತ್ರ ಬಂದಿಲ್ಲ. ನನಗೆ ತಿಳಿಯದೇ ಇದು ನಡೆದು ಹೋಗಿದೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿ ತನಿಖೆಗೆ ಕ್ರಮವಹಿಸುವೆ. ಕಾರ್ಖಾನೆಯ ವಸ್ತುಗಳ ರಕ್ಷಣೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವೆ ಎಂದು ಅಧ್ಯಕ್ಷ ಶಿವಲಿಂಗೇಗೌಡ ಭರವಸೆ ನೀಡಿದರು.
ಸಮಗ್ರ ತನಿಖೆಗೆ ಮಾಜಿ ಅಧ್ಯಕ್ಷರ ಆಗ್ರಹ
ಮೈಷುಗರ್ ಕಾರ್ಖಾನೆಯ ಯಂತ್ರ ಸಾಗಾಣೆ ಕುರಿತ ಪ್ರಕರಣ ಸಂಬಂಧ ಸಮಗ್ರ ತನಿಖೆ ನಡೆಸಬೇಕು. ಕಾರ್ಖಾನೆ ಅಧ್ಯಕ್ಷರು, ಎಂಡಿ, ಆಡಳಿತ ಮಂಡಳಿ, ಪಿಎಸ್ಎಸ್ಕೆ ಗುತ್ತಿಗೆ ಪಡೆದಿರುವ ನಿರಾಣಿ ಷುಗರ್ಸ್ ಮುಖ್ಯಸ್ಥ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ಪ್ರಕರಣದಲ್ಲಿ ಹೊಣೆಗಾರರನ್ನಾಗಿ ಮಾಡಬೇಕು. ಪ್ರಕರಣವನ್ನು ವಿಪಕ್ಷ ನಾಯಕರು ಸದನದಲ್ಲಿ ಪ್ರಸ್ತಾಪಿಸಬೇಕು. ಮುರುಗೇಶ್ ನಿರಾಣಿ ರಾಜೀನಾಮೆಗೆ ಆಗ್ರಹಿಸಬೇಕು ಎಂದು ಮೈಸೂರು ಸಕ್ಕರೆ ಕಾರ್ಖಾನೆ(ಮೈಷುಗರ್) ಮಾಜಿ ಅಧ್ಯಕ್ಷರುಗಳ ವೇದಿಕೆ ಸಂಚಾಲಕರಾದ ಸಿದ್ದರಾಮೇಗೌಡ, ಹಾಲಹಳ್ಳಿ ರಾಮಲಿಂಗಯ್ಯ ಹಾಗೂ ಬಿ.ಸಿ.ಶಿವಾನಂದ ಆಗ್ರಹಿಸಿದ್ದಾರೆ.







