ಅಸ್ಸಾಂ ಎನ್ಕೌಂಟರ್: ಸ್ವತಂತ್ರ ತನಿಖೆಗೆ ಕೋರಿ ಗುಜರಾತ್ ಹೈಕೋರ್ಟ್ ಗೆ ಮನವಿ ಸಲ್ಲಿಸಿದ ನ್ಯಾಯವಾದಿ
ಗುವಾಹತಿ: ಅಸ್ಸಾಂನಲ್ಲಿ ನಡೆದ ಎನ್ಕೌಂಟರ್ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ದಿಲ್ಲಿ ಮೂಲದ ನ್ಯಾಯವಾದಿಯೊಬ್ಬರು ಗುವಾಹತಿ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಸಲ್ಲಿಸಿದ್ದಾರೆ.
ಮೇ ತಿಂಗಳಿನಿಂದ ಇಲ್ಲಿವರೆಗೆ ಇಂತಹ 80ಕ್ಕೂ ಅಧಿಕ ಘಟನೆಗಳು ನಡೆದಿವೆ ಎಂದು ಪ್ರತಿಪಾದಿಸುವ ಮಾದ್ಯಮ ವರದಿಗಳನ್ನು ದೂರುದಾರ ಆರಿಫ್ ಜ್ವಾಡ್ಡರ್ ಅವರು ಉಲ್ಲೇಖಿಸಿದ್ದಾರೆ. ಈ ಅವಧಿಯಲ್ಲಿ ನಡೆದ ನಕಲಿ ಎನ್ಕೌಂಟರ್ನಲ್ಲಿ 28 ಜನರು ಸಾವನ್ನಪ್ಪಿದ್ದಾರೆ ಹಾಗೂ 48 ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಎನ್ಕೌಂಟರ್ನ ಸಂದರ್ಭ ಎಲ್ಲರೂ ಶಸ್ತ್ರ ರಹಿತರಾಗಿದ್ದರು ಹಾಗೂ ಅವರ ಕೈಗಳಿಗೆ ಕೋಳ ಹಾಕಲಾಗಿತು ಎಂದು ಜ್ವಾಡ್ಡರ್ ದೂರಿನಲ್ಲಿ ಪ್ರತಿಪಾದಿಸಿದ್ದಾರೆ.
ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಪರಿಗಣಿಸುವಂತೆ ಆಗ್ರಹಿಸಿ ಇ-ಮೇಲ್ ಮೂಲಕ ರಾಷ್ಟ್ರೀಯ ಮಾನವ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ಅವರು ಹೇಳಿದ್ದಾರೆ. ಆಯೋಗ ದೂರನ್ನು ಗಣನೆಗೆ ತೆಗೆದುಕೊಂಡಿದೆ. ಆದರೆ, ಇದಕ್ಕೆ ಪ್ರತಿಕ್ರಿಯೆಯಾಗಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮನವಿ ಸಲ್ಲಿಸಿದ ಬಳಿಕವೇ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸೆಪ್ಟಂಬರ್ 14ರಂದು ಪ್ರಕರಣಕ್ಕೆ ಸಂಬಂಧಿಸಿ ಕೈಗೊಂಡ ಕ್ರಮಗಳ ಬಗ್ಗೆ ಅಸ್ಸಾಂ ಪೊಲೀಸರಿಂದ ವರದಿ ಕೇಳಿತ್ತು ಎಂದು ಜ್ವಾಡ್ಡರ್ ಹೇಳಿದ್ದಾರೆ. ನವೆಂಬರ್ 28ರಂದು ಆಯೋಗ ದೂರನ್ನು ಅಸ್ಸಾಂ ಮಾನವ ಹಕ್ಕು ಆಯೋಗಕ್ಕೆ ವರ್ಗಾಯಿಸಿತು ಎಂದು ಅವರು ತಿಳಿಸಿದ್ದಾರೆ.
ಎನ್ಕೌಂಟರ್ ವಿರುದ್ಧ ರಾಷ್ಟ್ರೀಯ ಮಾನವ ಹಕ್ಕು ಆಯೋಗವಾಗಲಿ, ಅಸ್ಸಾಂ ಮಾನವ ಹಕ್ಕು ಆಯೋಗವಾಗಲಿ ಯಾವುದೇ ದೃಢ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆದುದರಿಂದ ತಾನು ಗುವಾಹತಿ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಬೇಕಾಯಿತು ಎಂದು ಅವರು ತಿಳಿಸಿದ್ದಾರೆ.
ದೂರಿನಲ್ಲಿ ಜ್ವಾಡ್ಡರ್, ‘‘ಪೊಲೀಸ್ ಸಿಬ್ಬಂದಿಗೆ ಕೊಲ್ಲುವ ಪರವಾನಿಗೆ ಇಲ್ಲ. ಕ್ರಿಮಿನಲ್ ಕಾನೂನು ಸಂಹಿತೆಯ ಗುರಿ ಕ್ರಿಮಿನಲ್ಗಳನ್ನು ಬಂಧಿಸುವುದು ಹಾಗೂ ಅವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸುವುದು. ಅವರನ್ನು ಕೊಲ್ಲುವುದಲ್ಲ. ಇಂಹ ಎನ್ಕೌಂಟರ್ ಹತ್ಯೆಗಳು ಸಂತ್ರಸ್ತರ ವೈಯುಕ್ತಿಕ ಸ್ವಾತಂತ್ರ ಹಾಗೂ ಬದಕುನ್ನು ಕಸಿದುಕೊಳ್ಳುತ್ತವೆ’’ ಎಂದು ಜ್ವಾಡ್ಡೆರ್ ಹೇಳಿದ್ದಾರೆ.