ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಅಧಿಕಾರಿಗಳಿಗೆ ಡಿಸಿ ಕೂರ್ಮಾರಾವ್ ಸೂಚನೆ
![ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಅಧಿಕಾರಿಗಳಿಗೆ ಡಿಸಿ ಕೂರ್ಮಾರಾವ್ ಸೂಚನೆ ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಿ: ಅಧಿಕಾರಿಗಳಿಗೆ ಡಿಸಿ ಕೂರ್ಮಾರಾವ್ ಸೂಚನೆ](https://www.varthabharati.in/sites/default/files/images/articles/2021/12/23/318733-1640273157.jpg)
ಉಡುಪಿ, ಡಿ.23: ಆರೋಗ್ಯ ಸೇವೆಗಳನ್ನು ಜನಸಾಮಾನ್ಯರಿಗೆ ವ್ಯವಸ್ಥಿತವಾಗಿ ತಲುಪಿಸಲು ವಿವಿಧ ಆರೋಗ್ಯ ವ್ಯವಸ್ಥೆಯನ್ನು ಸರಕಾರ ಇಲಾಖೆಯ ಮೂಲಕ ಮಾಡಿದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಕಾರ್ಯವನ್ನು ವೈದ್ಯರು ಹಾಗೂ ಸಿಬ್ಬಂದಿ ವರ್ಗ ತಪ್ಪದೇ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದ್ದಾರೆ.
ಮಣಿಪಾಲದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮಿತಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಸರಕಾರ ಜನಸಾಮಾನ್ಯರ ಆರೋಗ್ಯ ಸುಧಾರಣೆಗೆ ಅನೇಕ ಯೋಜನೆಗಳು ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಆರೋಗ್ಯವಂತ ಸಮಾಜ ವಿದ್ದಲ್ಲಿ ಮಾತ್ರ ಸದೃಡ ದೇಶ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವಂತನಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಗರ್ಭಿಣಿ ಮಹಿಳೆಯರಿಗೆ ಪ್ರಾಥಮಿಕ ಹಂತದಲ್ಲಿಯೇ ತಾಯಿ ಕಾರ್ಡ್ಗಳನ್ನು ವಿತರಿಸಿ, ಪ್ರತಿ ತಿಂಗಳು ನಿಯಮಿತ ತಪಾಸಣೆ ಕಾರ್ಯಗಳನ್ನು ಕೈಗೊಳ್ಳಬೇಕು. ಅವರಲ್ಲಿ ಇತರೇ ಕಾಯಿಲೆಗಳು ಇವೆಯೇ ಎಂಬ ಬಗ್ಗೆಯೂ ಸಹ ಪರೀಕ್ಷೆಗಳನ್ನು ಮಾಡುವುದರೊಂದಿಗೆ, ಅವುಗಳಿಗೂ ಚಿಕಿತ್ಸೆ ನೀಡುವುದು ಸೂಕ್ತ ಎಂದರು.
ಗರ್ಭಿಣಿ ಮಹಿಳೆಯರ ಪ್ರಸವ ಪ್ರಕರಣಗಳನ್ನು ಪ್ರಾಥಮಿಕ ಆರೋಗ್ಯ ಕೆಂದ್ರದಲ್ಲಿ ನಿರ್ವಹಿಸುವುದು ಕಷ್ಟವಾದ ಸಂದರ್ಭದಲ್ಲಿ ಅವರುಗಳನ್ನು ಇತರೇ ಆಸ್ಪತ್ರೆಗಳಿಗೆ ವರ್ಗಾಯಿಸುವಾಗ ರೋಗಿಯ ವೈದ್ಯಕೀಯ ಹಿನ್ನಲೆಯ ವಿವರ ಗಳನ್ನು ಹಂಚಿಕೊಳ್ಳುವಲ್ಲಿ ಸಮನ್ವಯತೆ ತೋರುವುದು ಅತ್ಯಾವಶ್ಯಕವಾಗಿದ್ದು, ಇದನ್ನು ತಪ್ಪದೇ ನಿರ್ವಹಿಸಬೇಕೆಂದು ಸೂಚನೆ ನೀಡಿದ ಅವರು, ಜಿಲ್ಲೆಯಲ್ಲಿ ತಾಯಿ- ಮಗು ಮರಣ ಪ್ರಮಾಣವನ್ನು ಶೂನ್ಯಕ್ಕಿಳಿಸುವಂತೆ ತಿಳಿಸಿದರು.
ವೈದ್ಯರುಗಳು ಚಿಕಿತ್ಸೆಗೆ ಬರುವ ರೋಗಿಗಳೊಂದಿಗೆ ಸಹನೆಯಿಂದ ವರ್ತಿಸಿ, ಸೌಹಾರ್ದಯುತವಾಗಿ ಅವರ ತೊಂದರೆಗಳನ್ನು ಆಲಿಸಿ ಚಿಕಿತ್ಸೆ ನೀಡಬೇಕು ಎಂದ ಕೂರ್ಮಾರಾವ್, ಶಿಶುಗಳಿಗೆ ಸಾರ್ವತ್ರಿಕ ಸಾಮಾನ್ಯ ಲಸಿಕಾ ಕಾರ್ಯ ಕ್ರಮದಡಿ ನೀಡುವ ಚುಚ್ಚುಮದ್ದುಗಳನ್ನು ತಪ್ಪದೇ ನಿೀಡುವ ಕೆಲಸವಾಗಬೇಕು ಎಂದರು.
ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ 4 ತಾಯಿ-ಮಗು ಮರಣ ಸಂಭವಿಸಿದ್ದು, ಮರಣ ಸಂದರ್ಭದಲ್ಲಿ ತಪ್ಪದೇ ಶವ ಪರೀಕ್ಷೆಯನ್ನು ಮಾಡುವುದರೊಂದಿಗೆ ಸಾವಿನ ನಿಖರ ಕಾರಣಗಳನ್ನು ಪತ್ತೆ ಹಚ್ಚಬೇಕು. ಒಂದೊಮ್ಮೆ ವೈದ್ಯಕೀಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದಲ್ಲಿ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾ ಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಸಭೆಯಲ್ಲಿ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್, ಡಿಹೆಚ್ಓ ಡಾ.ನಾಗಭೂಷಣ ಉಡುಪ, ಜಿಲ್ಲಾ ಆರ್ಸಿಹೆಚ್ ಅಧಿಕಾರಿ ಡಾ.ಎಂ.ಜಿ.ರಾಮ ಹಾಗೂ ಅರೋಗ್ಯ ಇಲಾಖೆಯ ವಿವಿಧ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.