ಕ್ರಿಸ್ಮಸ್ ಆಚರಣೆ ಮಾನವೀಯತೆಯನ್ನು ಜೀವಂತಗೊಳಿಸಲಿ: ಉಡುಪಿ ಬಿಷಪ್

ಉಡುಪಿ, ಡಿ.23: ಸ್ವರ್ಗ ಭುವಿಗಳಿಗೆ ಮಹದಾನಂದವನ್ನು ತಂದ ಸುದಿನವೇ ಕ್ರಿಸ್ಮಸ್. ದೇವಪುತ್ರ ಈ ಲೋಕದಲ್ಲಿ ಮುಗ್ಧ ಮಗುವಾಗಿ ಜನಿಸಿ, ಪಾಪ ವೊಂದನ್ನು ಬಿಟ್ಟು ಇನ್ನೆಲ್ಲದರಲ್ಲಿಯೂ ನಮ್ಮಂತೆಯೇ ಆಗಬಯಸಿದ ಯೇಸು ಸ್ವಾಮಿ ಬಡವರಿಗೆ ಆಶಾಕಿರಣವಾಗಿ, ದುಃಖಿತರಿಗೆ ಸಾಂತ್ವನವಾಗಿ, ದೀನ ದಲಿತರ ಸಂಗಾತಿಯಾಗಿ, ನೊಂದವರ ಭರವಸೆಯಾಗಿ, ಬಹಿಷ್ಕೃತರ ಗೆಳೆಯನಾಗಿ ಬಂದರು ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಜೆರಾಲ್ಡ್ ಐಸಾಕ್ ಲೋಬೊ ತಮ್ಮ ಕ್ರಿಸ್ಮ್ ಹಬ್ಬದ ಸಂದೇಶದಲ್ಲಿ ತಿಳಿಸಿದ್ದಾರೆ.
ಕಳೆದೆರಡು ವರ್ಷಗಳಿಂದ ಇಡೀ ವಿಶ್ವವೇ ಕೊರೋನ ಸೋಂಕಿನ ಅಟ್ಟಹಾಸಕ್ಕೆ ನಲುಗಿ ಹೋಗಿದೆ. ಸಾವಿರಾರು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಲಕ್ಷಾಂತರ ಕುಟುಂಬಗಳು ನಿರುದ್ಯೋಗ ಹಾಗೂ ಬಡತನಕ್ಕೆ ಬಲಿಯಾಗಿವೆ. ಬಸವಳಿದ ಈ ಲೋಕಕ್ಕೆ ಹೊಸ ಜೀವವನ್ನು ನೀಡುವ ಅಗತ್ಯವಿದೆ. ಕ್ರಿಸ್ತರ ಜನನದ ಕ್ರಿಸ್ಮಸ್ ಹಬ್ಬದ ಆಚರಣೆಯು ನಮ್ಮಲ್ಲಿ ಮಾನವೀಯತೆಯನ್ನು ಜೀವಂತಗೊಳಿಸಬೇಕು. ಮನುಷ್ಯನಿಗೆ ಮಾನವೀಯತೆಯು ಮರೀಚಿಕೆಯಾಗದೆ ಸ್ವಾತಂತ್ರ, ಶಾಂತಿ, ಭಾವೈಕ್ಯತೆ, ಕ್ಷಮೆ, ಪ್ರೀತಿ, ಸಹನೆ, ಸಂಯಮ ಮತ್ತು ನೈತಿಕತೆ ಯನ್ನು ತನ್ನ ಉಸಿರಾಗಿಬೇಕಿದೆ ಎಂದು ಅವರು ಹೇಳಿದರು.
ಕ್ರಿಸ್ಮಸ್ ಶಾಂತಿ-ಪ್ರೀತಿಯ ಉತ್ಸವ. ಈ ಉತ್ಸವವನ್ನು ಯೋಗ್ಯವಾಗಿ ಆಚರಿಸಲು ಶಕ್ತರಲ್ಲದ ಸಾವಿರಾರು ಜನರು ಮತ್ತು ಕುಟುಂಬಗಳು ನಮ್ಮ ನೆರೆಹೊರೆಯಲ್ಲಿವೆ. ಕ್ರಿಸ್ಮಸ್ನ ಭಾವವಾದ ಶಾಂತಿ, ಪ್ರೀತಿಯು ಹಂಚಿಕೊಳ್ಳು ವುದರಲ್ಲಿ ಕಂಡುಬರಬೇಕು. ನಮ್ಮಲ್ಲಿ ಇರುವ ಸಂಪನ್ಮೂಲಗಳನ್ನು ಇಲ್ಲದವ ರೊಡನೆ ಕಿಂಚಿತ್ತಾದರೂ ಹಂಚಿಕೊಂಡರೆ ಕ್ರಿಸ್ಮಸ್ನ ಮೂಲ ಅರ್ಥ ನಮಗೆ ಸ್ಪಷ್ಟವಾಗಬಹುದು.
ಶಾಂತಿ ದೇವನೊಲಿದ ಮನುಜರಿಗೆ ಎಂಬ ದೇವ ದೂತರ ಹಾಡು ನಮಗೆ ಅರ್ಥಪೂರ್ಣವಾಗಿ ಕೇಳಿಸಲಿ. ಈ ವರ್ಷದಕ್ರಿಸ್ಮಸ್ ನಮಗೆ ಸೋಂಕಿನ ಭೀತಿಯಿಂದ, ಅನಾರೋಗ್ಯದಿಂದ, ನಿರಾಶೆ-ದುಖಗಳಿಂದ ಬಿಡುಗಡೆಗೊಳಿಸಿ ಸ್ವರ್ಗದ ಶಾಂತಿ ಪ್ರೀತಿಯಿಂದ ನಮ್ಮನ್ನು ತುಂಬಲಿ. ಸಮಸ್ತ ಸಹೋದರ ಸಹೋದರಿಯರಿಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.







