ಕುಡಿಯುವ ನೀರಿನ ಯೋಜನೆ ಕಾಂಗ್ರೆಸ್ನ ಸಾಧನೆ: ವಿನಯಕುಮಾರ್ ಸೊರಕೆ
ಕಾಪು: ಕಾಪು ಪುರಸಭೆಗೆ ಕುಡಿಯುವ ನೀರಿನ ಯೋಜನೆಗೆ ಅಂದು ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ ಮಂಜೂರಾಗಿತ್ತು. ಆ ಯೋಜನೆಯನ್ನು ಕಡಿತಗೊಳಿಸಿದ ಬಿಜೆಪಿ ಸರ್ಕಾರ 57 ಕೋಟಿ ರೂ. ಗೆ ಸೀಮಿತಗೊಳಿಸಿ ಕಾಮಗಾರಿಗೆ ಚಾಲನೆ ನೀಡಿದೆ ಎಂದು ಕಾಂಗ್ರೆಸ್ ಮುಖಂಡ ವಿನಯಕುಮಾರ್ ಸೊರಕೆ ಬಿಜೆಪಿಗೆ ತಿರುಗೇಟು ನೀಡಿದರು.
ಕಾಪುವಿನ ರಾಜೀವ ಭವನದಲ್ಲಿ ಶುಕ್ರವಾರ ಕರೆದ ಸುದ್ಧಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜಕೀಯಕ್ಕಾಗಿ ಈ ಯೋಜನೆಯನ್ನು ವಿರೋಧ ಮಾಡಿತ್ತು. ಇದೀಗ ಅದೇ ಯೋಜನೆಯನ್ನು ಕಡಿತಗೊಳಿಸಿ ಬೇರೆ ಹೆಸರಿನಲ್ಲಿ ಕಾಮಗಾರಿ ನಡೆಸುತ್ತಿದ್ದು, ತಮ್ಮದೇ ಸಾಧನೆ ಎನ್ನುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜುರಾದ ಯೋಜನೆಯನ್ನು ಬಿಜೆಪಿಯ ಸಮಯದಲ್ಲಿ ಕಾಮಗಾರಿ ನಡೆಯುತ್ತಿದೆ ಎಂದರು.
ಕಾಪು ಪುರಸಭೆ ರಚನೆಯಾದ ಬಳಿಕ ಸಮಗ್ರ ಅಭಿವೃದ್ಧಿಗೆ ಅವಕಾಶವಿತ್ತು. ತಾಲೂಕು ಘೋಷಣೆಗೂ ಪುರಸಭೆ ಪೂರಕವಾಗಿತ್ತು. ತಮ್ಮ ಅವಧಿಯಲ್ಲಿ ಕಾಪು ಪುರಸಭೆ ವ್ಯಾಪ್ತಿಯಲ್ಲಿ ಕುಡಿಯುವ ನೀರು, ಒಳ ಚರಂಡಿ ಯೋಜನೆ, ಕಸ ಮತ್ತು ತ್ಯಾಜ್ಯ ವಿಲೇವಾರಿ, ಘನ ತ್ಯಾಜ್ಯ ನಿರ್ವಹಣೆ, ಕೊಳಚೆ ನೀರಿನ ಸಮಸ್ಯೆ ಮತ್ತು ಮನೆ ನಿವೇಶನ ಕೊಡಲು ಯೋಜನೆ ರೂಪಿಸಲಾಗಿತ್ತು.
ಬಿಜೆಪಿ ಶಾಸಕರು ಕಾಪು ಅಭಿವೃದ್ಧಿಗೆ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಇದಕ್ಕೆ ಮತದಾರರೇ ಉತ್ತರ ನೀಡಲಿದ್ದಾರೆ ಎಂದು ಸೊರಕೆ, ಕಾಪು ಪುರಸಭೆಯಲ್ಲಿ ಕಾಂಗ್ರೆಸ್ಗೆ ಗೆಲ್ಲುವ ಎಲ್ಲಾ ಅವಕಾಶಗಳಿದ್ದು, ಕಾಂಗ್ರೆಸ್ ಬಹುಮತದೊಂದಿಗೆ ಆಡಳಿತ ನಡೆಸಲಿದೆ. ಮತದಾರರ ಬೆಂಬಲವೂ ಇದಕ್ಕೆ ಪೂರಕವಾಗಿ ದೊರಕಲಿದೆ ಎಂಬ ವಿಶ್ವಾಸವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಹೊಸದಾಗಿ ಕಾಪು ಪುರಸಭೆ ಹಾಗೂ ತಾಲ್ಲೂಕು ರಚನೆಗೆ ಕಾರಣೀಕರ್ತರಾದ ವಿನಯಕುಮಾರ್ ಸೊರಕೆ ಅವರು ಕಾಪುವನ್ನು ಸಮಗ್ರ ಅಭಿವೃದ್ಧಿಗೊಳಿಸಿದ್ದಾರೆ. ಈ ಬಗ್ಗೆ ಮತದಾರರೇ ತಮ್ಮಲ್ಲಿ ಹೇಳುತಿದ್ದಾರೆ. ಕಾಪು ಪುರಸಭಾ ವ್ಯಾಪ್ತಿತ ಮತದಾರರು ಕಾಂಗ್ರೆಸ್ ಪರವಾಗಿದ್ದು, ಕಾಪು ಪುರಸಭೆ ಕಾಂಗ್ರೆಸ್ಗೆ ಒಳಿಯಲಿದೆ ಎಂದು ಆಶಾಭಾವನೆಯನ್ನು ವ್ಯಕ್ತಪಡಿಸಿದರು.
ಉಸ್ತುವಾರಿ ಕಳ್ಳಿಗೆ ತಾರನಾಥ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್, ಕೆಪಿಸಿಸಿ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ, ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಪುತ್ರನ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇನ್ನ, ಪಕ್ಷದ ಮುಖಂಡರಾದ ಎ. ಬಿ.ಮಾರ್ಟಿಸ್, ಅಲ್ಪಸಂಖ್ಯಾತ ಘಟಕದ ಕಾಪು ಕ್ಷೇತ್ರದ ಅಧ್ಯಕ್ಷ ಶರ್ಪುದ್ದೀನ್ ಶೇಖ್, ಹರೀಶ್ ಕಿಣಿ, ಪ್ರಭಾಕರ ಪಾಲನ್, ಕಾಪು ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಉಪಸ್ಥಿತರಿದ್ದರು.