ವಿಧಾನಸಭೆ ಅಧಿವೇಶನ ಯಶಸ್ವಿ ಕಾರ್ಯಕಲಾಪ ತೃಪ್ತಿಕರ: ಸಭಾಧ್ಯಕ್ಷ ಕಾಗೇರಿ ಹರ್ಷ
ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಪೀಕರ್

ಬೆಳಗಾವಿ, ಡಿ.24; ಬೆಳಗಾವಿಯ ಸುವರ್ಣ ಸೌಧದಲ್ಲಿ ಕಳೆದ ಡಿಸೆಂಬರ್ 13 ರಿಂದ ಇಂದಿನವರೆಗೆ 10 ದಿನಗಳ ಕಾಲ ನಡೆದ 15ನೇ ವಿಧಾನಸಭೆಯ 11ನೇ ಅಧಿವೇಶನವು ಯಶಸ್ವಿಯಾಗಿದೆ. ಕಾರ್ಯಕಲಾಪಗಳು ತೃಪ್ತಿಕರವಾಗಿ ನಡೆದಿವೆ. ಅಧಿವೇಶನಕ್ಕೆ ಸರಕಾರ ಹಾಗೂ ಜಿಲ್ಲಾಡಳಿತ ಕೈಗೊಂಡ ವ್ಯವಸ್ಥೆ ಅಚ್ಟುಕಟ್ಟಾಗಿ ನಿರ್ವಹಣೆಯಾಗಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅಧಿವೇಶನದ ಮುಕ್ತಾಯದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು 10 ದಿನಗಳ ಕಾಲ ಸುಮಾರು 52 ಗಂಟೆಗಳ ಕಾರ್ಯಕಲಾಪಗಳು ಜರುಗಿದೆ. ಮುಖ್ಯಮಂತ್ರಿಗಳು, ವಿರೋಧ ಪಕ್ಷದ ನಾಯಕರು ಸೇರಿದಂತೆ ಸದನದ ಎಲ್ಲಾ ಸದಸ್ಯರು ಯಶಸ್ವಿಗೆ ಕಾರಣರಾಗಿದ್ದಾರೆ. 150 ಚುಕ್ಕೆ ಗುರುತಿನ ಪ್ರಶ್ನೆಗಳಿಗೆ 149 ಉತ್ತರವನ್ನು ಸರಕಾರವು ಒದಗಿಸಿದೆ. 2032 ಚುಕ್ಕೆ ಗುರುತಿಲ್ಲದ ಪ್ರಶ್ನೆಗಳಿಗೆ 1921 ಲಿಖಿತ ಉತ್ತರಗಳನ್ನು ನೀಡಲಾಗಿದೆ. ಅತಿವೃಷ್ಟಿ ಕುರಿತ ಚರ್ಚೆಯಲ್ಲಿ 37 ಸದಸ್ಯರು ಭಾಗವಹಿಸಿ ಸುಮಾರು 9 ಗಂಟೆಗಳ ಕಾಲ ಹಾಗೂ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಯಲ್ಲಿ 13 ಸದಸ್ಯರು ಭಾಗವಹಿಸಿ ಸುಮಾರು 6 ಗಂಟೆಗಳ ಕಾಲ ಚರ್ಚಿಸಿದ್ದಾರೆ.
ಶೂನ್ಯ ವೇಳೆಯಲ್ಲಿ 24 ಸೂಚನೆಗಳನ್ನು ಚರ್ಚಿಸಲಾಗಿದೆ. 350 ಗಮನ ಸೆಳೆಯುವ ಸೂಚನೆಗಳ ಪೈಕಿ 213 ಉತ್ತರಗಳನ್ನು ಸ್ವೀಕರಿಸಲಾಗಿದೆ. ಧನವಿನಿಯೋಗ ವಿಧೇಯಕ ಸೇರಿದಂತೆ 10 ವಿಧೇಯಕಗಳನ್ನು ಅಂಗೀಕರಿಸಲಾಗಿದೆ. ಒಂದು ಹಕ್ಕುಚ್ಯುತಿ ಪ್ರಸ್ತಾವನೆಯನ್ನು ಸದನದಲ್ಲಿ ಮಂಡಿಸಿ, ಚರ್ಚಿಸಿ ತೀರ್ಮಾನಿಸಲಾಗಿದೆ. ಪೂರಕ ಅಂದಾಜುಗಳ ಎರಡನೇ ಕಂತು ಹಾಗೂ ರಾಜ್ಯ ಹಣಕಾಸಿನ ಮಧ್ಯ ವಾರ್ಷಿಕ ಪರಿಶೀಲನಾ ವರದಿಗೆ ಅಂಗೀಕಾರ ದೊರೆತಿದೆ. 2018ನೇ ಸಾಲಿನ ಕರ್ನಾಟಕ ಎಸ್ಸಿ, ಎಸ್ಟಿ ಹಾಗೂ ಇತರೆ ಹಿಂದುಳಿದ ವರ್ಗಗಳ ನೇಮಕಾತಿ, ಮೀಸಲಾತಿ ತಿದ್ದುಪಡಿ ವಿಧೇಯಕ ಹಿಂಪಡೆಯಲಾಗಿದೆ. ಕನ್ನಡ ಬಾವುಟ, ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗಳಿಗೆ ಕಿಡಿಗೇಡಿಗಳು ಅಪಮಾನ ಮಾಡಿದ ಕೃತ್ಯವನ್ನು ಖಂಡಿಸಿ ಸದನವು ನಿರ್ಣಯ ಕೈಗೊಂಡಿದೆ ಎಂದರು.
ಈ ವರ್ಷ ಒಟ್ಟು 40 ದಿನಗಳ ಕಾಲ ಅಧಿವೇಶನ ನಡೆದಿದೆ. ಆಡಳಿತ ಹಾಗೂ ಪ್ರತಿ ಪಕ್ಷಗಳ ನಡುವೆ ಅಭಿಪ್ರಾಯ ಭೇದಗಳು ಬಂದಾಗ ಅವರ ನಡುವೆ ಸಹಮತ ಮೂಡಿಸಿ ಸದನ ನಿರ್ವಹಿಸಲಾಗಿದೆ. ಅಧಿವೇಶನದಲ್ಲಿ ಸದಸ್ಯರು ಉತ್ಸಾಹದಿಂದ ಭಾಗವಹಿಸಿದ್ದಾರೆ. ಹೆಚ್ಚು ದಿನಗಳ ಕಾಲ ಅಧಿವೇಶನ ನಡೆಯಬೇಕು ಎಂಬುವುದು ಸದಸ್ಯರ ಹಾಗೂ ಸರಕಾರದ ಅಪೇಕ್ಷೆಯಾಗಿದೆ. ಬೆಳಗಾವಿ ಅಧಿವೇಶನದಲ್ಲಿ ವಿಧಾನಸಭೆ ಸದಸ್ಯರ ಸರಾಸರಿ ಹಾಜರಾತಿ ಶೇ. 75 ರಷ್ಟು ಇತ್ತು. ಸುಮಾರು 5000 ಜನರು ಗ್ಯಾಲರಿ ಮೂಲಕ ಕಲಾಪಗಳನ್ನು ಆಸಕ್ತಿಯಿಂದ ವೀಕ್ಷಣೆ ಮಾಡಿದ್ದಾರೆ.
ಜಿಲ್ಲಾಡಳಿತ ಕಾರ್ಯಕ್ಕೆ ಮೆಚ್ಚುಗೆ: ಅಧಿವೇಶನದ ಯಶಸ್ವಿಗೆ ಉತ್ತಮ ವಸತಿ, ಸಾರಿಗೆ, ಆಹಾರ, ಆರೋಗ್ಯ ಮತ್ತಿತರ ಸೌಕರ್ಯಗಳನ್ನು ಜಿಲ್ಲಾಡಳಿತ ಅತ್ಯುತ್ತಮವಾಗಿ ನಿರ್ವಹಿಸಿದೆ. ಬೆಳಗಾವಿ ಜನರು ಆದರದ ಆತಿಥ್ಯ ನೀಡಿದ್ದಾರೆ. ಬೆಳಗಾವಿಯಲ್ಲಿ ಶಾಶ್ವತವಾಗಿ ಶಾಸಕರ ಭವನ ನಿರ್ಮಿಸುವ ಕುರಿತು ಮುಖ್ಯಮಂತ್ರಿಗಳು ನಿರ್ಣಯ ಕೈಗೊಳ್ಳುವರು.






.jpg)
_0.jpg)
.jpg)

