ಯಾವುದೇ ಪುಸ್ತಕ ಪ್ರವೇಶಕ್ಕೆ ತಾತ್ವಿಕ ಬಿತ್ತಿಯ ಅವಶ್ಯಕತೆ ಇದೆ: ಡಾ. ಬರಗೂರು ರಾಮಚಂದ್ರಪ್ಪ
![ಯಾವುದೇ ಪುಸ್ತಕ ಪ್ರವೇಶಕ್ಕೆ ತಾತ್ವಿಕ ಬಿತ್ತಿಯ ಅವಶ್ಯಕತೆ ಇದೆ: ಡಾ. ಬರಗೂರು ರಾಮಚಂದ್ರಪ್ಪ ಯಾವುದೇ ಪುಸ್ತಕ ಪ್ರವೇಶಕ್ಕೆ ತಾತ್ವಿಕ ಬಿತ್ತಿಯ ಅವಶ್ಯಕತೆ ಇದೆ: ಡಾ. ಬರಗೂರು ರಾಮಚಂದ್ರಪ್ಪ](https://www.varthabharati.in/sites/default/files/images/articles/2021/12/25/318961-1640437759.jpg)
ದಾವಣಗೆರೆ, ಡಿ.25 : ಯಾವುದೇ ಪುಸ್ತಕ ಪ್ರವೇಶಕ್ಕೆ ತಾತ್ವಿಕ ಬಿತ್ತಿಯ ಅವಶ್ಯಕತೆ ಇದೆ ಎಂದು ಸಾಹಿತ್ಯ, ಹಿರಿಯ ಲೇಖಕರು ಹಾಗೂ ಸಾಂಸ್ಕೃತಿಕ ಚಿಂತಕರು ಡಾ. ಬರಗೂರು ರಾಮಚಂದ್ರಪ್ಪ ಹೇಳಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಶನಿವಾರ ಜನಪದ ವಿದ್ವಾಂಸ ಡಾ.ಎಂ.ಜಿ. ಈಶ್ವರಪ್ಪ ಅವರ 'ನಿಜದಿಂ ಕುರಿತೋದದೆಯುಂ' ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಗ್ರಾಮ ಭಾರತ ಮತ್ತು ಭಾರತ ಬಹುತ್ವ ಸಂಸ್ಕೃತಿ ಹೊಂದಿದೆ. ಭಾರತದಲ್ಲಿ 24 ಕೋಟಿ ಕುಟುಂಬಗಳಿವೆ, ಈ ಪೈಕಿ 19.1 ಕುಟುಂಬಗಳು ಗ್ರಾಮಗಳಲ್ಲಿವೆ. ಹೀಗಾಗಿ, ಗ್ರಾಮ ಭಾರತ ಸಂಸ್ಕೃತಿ ಮಹತ್ವದ್ದು ಎಂದು ಹೇಳಿದರು.
ಪ್ರಸ್ತುತ ಧರ್ಮ ಮತ್ತು ಸಂಸ್ಕೃತಿ ವಿಚಾರದಲ್ಲಿ ಹೆಚ್ಚು ಅಪವ್ಯಾಖ್ಯಾನ ನಡೆಯುತ್ತಿದೆ. ಧರ್ಮ ಭಕ್ತಿ ಆಗುವುದಿಲ್ಲ. ದೇವರ ಜೊತೆಗೆ ನಡೆಯುವ ಖಾಸಗಿ ಅನುಸಂದಾನ ಮುಖ್ಯವಾಗಿದೆ. ದೇವರನ್ನು ಭೈಯುವ ಪದ್ಧತಿ ನಮ್ಮಲಿದೆ. ಆದರೆ, ಈಗಿನ ಕೆಲ ಸಾಂಸ್ಥಿಕ ಧರ್ಮ ಪ್ರತಿಪಾದಕರಿಂದ ದೇವರು ಮತ್ತು ಧರ್ಮ ಹೆಚ್ಚು ಶೋಷಣೆಗೆ ಒಳಗಾಗಿದೆ. ಏಕೆಂದರೆ ಒಬ್ಬ ನೈಜ ಭಕ್ತ ಭಕ್ತಿ ಪ್ರದರ್ಶನ ಮಾಡುವುದಿಲ್ಲ. ಆದರೆ, ಸಾಂಸ್ಥಿಕ ಧರ್ಮ ಪ್ರತಿಪಾದಕರು ಭಕ್ತಿಯನ್ನು ಇವೆಂಟ್ ಮ್ಯಾನೇಜ್ಮೆಂಟ್ನಂತೆ ಬಿಂಬಿಸುತ್ತಿದ್ದಾರೆ ಎಂದರು.
ಲಿಖಿತ ಭಾಷೆ ಮತ್ತು ಮೌಖಿಕ ಭಾಷೆಯ ನಡುವೆ ವ್ಯತ್ಯಾಸವಿದೆ. ಲಿಖಿತ ಭಾಷೆಯಲ್ಲಿ ಶುದ್ಧ, ಅಶುದ್ಧ ಹುಡುಕುವುದು ಸಾಮಾನ್ಯ. ಆದರೆ, ಮೌಖಿಕ ಭಾಷೆಯಲ್ಲಿ ಶುದ್ಧ, ಅಶುದ್ಧ ಕಲ್ಪನೆಯೇ ಅಶುದ್ಧ ಅಥವಾ ಅಪ್ರಸ್ತುತ. ಮೌಖಿಕ ಭಾಷೆಯಲ್ಲಿ ಜನಸಾಮಾನ್ಯರು ಬಳಕೆ ಮಾಡುವ ಪದಗಳೇ (ಭಾಷೆಯೇ) ಮಾನದಂಡವಾಗಬೇಕು ಎಂದರು.
ಲೇಖಕ ಡಾ.ಎಂ.ಜಿ. ಈಶ್ವರಪ್ಪ ಮಾತನಾಡಿ, 20 ಆಯ್ದ ನಾಟಕಗಳಲ್ಲಿ ಬರುವ ಗಾದೆ, ಒಗಟು, ನುಡಿಗಟ್ಟುಗಳನ್ನು ವಿಶ್ಲೇಷಣೆ ಮಾಡಿ
ನಿಜದಿಂ ಕುರಿತೋದದೆಯುಂ ಕೃತಿ ರಚಿಸಲಾಗಿದೆ. ಹೊಸ ಪೀಳಿಗೆಗೆ ಕೆಲವು ಪದಗಳ ಅರ್ಥ ತಿಳಿಯದಾಗಿದೆ. ಹೀಗಾಗಿ, ನಮ್ಮ ಗ್ರಾಮೀಣ ಜನರ ಪದಗಳನ್ನು ಯುವ ಜನಾಂಗಕ್ಕೆ ಅರ್ಥ ಮಾಡಿಕೊಡುವ ನಿಟ್ಟಿನಲ್ಲಿ ಈ ಪುಸ್ತಕ ಹೊರಬಂದಿದೆ ಎಂದರು.
ಪುಸ್ತಕದ ಕುರಿತು ಕನ್ನಡ ಪ್ರಾಧ್ಯಾಪಕ ಡಾ. ದಾದಾಪೀರ್ ನವಿಲೇಹಾಳ್ ಹಾಗೂ ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷತೆ ವಹಿಸಿದ್ದರು. ಕ.ಸಾ.ಪ. ನಿಕಟಪೂರ್ವ ಜಿಲ್ಲಾಧ್ಯಕ್ಷ ಮಂಜುನಾಥ ಕುರ್ಕಿ ಸ್ವಾಗತಿಸಿದರು. ಪ್ರಹ್ಲಾದ್ ಭಟ್ ಪ್ರಾರ್ಥಿಸಿದರೆ ಸಂಧ್ಯಾ ಸುರೇಶ್ ನಿರೂಪಿಸಿದರು.