ಬೆಳ್ಳಂಪಳ್ಳಿ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ
ಉಡುಪಿ, ಡಿ.25: ಬೆಳ್ಳಂಪಳ್ಳಿ ಜೈಹಿಂದ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಒಂದು ವರ್ಷದಿಂದ ಖಾಯಂ ಶಿಕ್ಷಕರಿಲ್ಲದೆ ಸಾಕಷ್ಟು ಸಮಸ್ಯೆ ಗಳಾಗುತ್ತಿವೆ. ಮಕ್ಕಳ ಹಿತದೃಷ್ಠಿಯಿಂದ ಡಿ.27ರ ಒಳಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕು. ಇಲ್ಲದಿದ್ದರೆ ಡಿ.28ರಿಂದ ಪೋಷಕರು, ಹಳೆ ವಿದ್ಯಾರ್ಥಿ ಗಳು, ಗ್ರಾಮಸ್ಥರು ಸೇರಿ ಶಾಲೆಯ ಎದುರು ಉಪವಾಸ ಸತ್ಯಾಗ್ರಹ ನಡೆಸ ಲಾಗುವುದು ಎಂದು ಶಾಲೆಯ ಹಳೆ ವಿದ್ಯಾರ್ಥಿ ನಾಗರಾಜ್ ಹೆಗ್ಡೆ ಎಚ್ಚರಿಕೆ ನೀಡಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1947ರಲ್ಲಿ ಪ್ರಾರಂಭಗೊಂಡ ಈ ಶಾಲೆಯು 75ವರ್ಷಗಳ ಇತಿಹಾಸ ಹೊಂದಿದೆ. ಇಲ್ಲಿ 40ಸಾವಿರ ಮಕ್ಕಳು ವಿದ್ಯಾರ್ಜನೆ ಮಾಡಿದ್ದಾರೆ. ಮೊದಲು ಇದ್ದ 16 ಖಾಯಂ ಶಿಕ್ಷಕರಲ್ಲಿ ಒಬ್ಬೊಬ್ಬರೇ ನಿವೃತ್ತಿಯಾಗುತ್ತ ಬಂದು, ಯಾರು ಕೂಡ ಖಾಯಂ ಶಿಕ್ಷಕರಿಲ್ಲದಂತಾಗಿದೆ ಎಂದರು.
ಕೊನೆಗೆ ಯಾವುದೇ ಶಿಕ್ಷಕರ ನೇಮಕಾತಿ ಇಲ್ಲದ ಕಾರಣ ದೊಡ್ಡಣಗುಡ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಓರ್ವ ಶಿಕ್ಷಕಿಯನ್ನು ಮೂರು ದಿನದ ಮಟ್ಟಿಗೆ ನಿಯೋಜಿಸಲಾಯಿತು. ಒಂದು ವರ್ಷದ ನಂತರ ಖಾಯಂ ಶಿಕ್ಷಕಿಯನ್ನು ನೇಮಿಸಲಾಯಿತು. ಈಗ ಅವರು ಕೂಡ ನಿವೃತ್ತಿ ಹೊಂದಿದ್ದಾರೆ. ಇದರಿಂದ ಇಲ್ಲಿ ಖಾಯಂ ಶಿಕ್ಷಕರ ಸಂಖ್ಯೆ ಶೂನ್ಯವಾಗಿದೆ ಎಂದು ಅವರು ತಿಳಿಸಿದರು.
ಸದ್ಯ ಶಾಲೆಯಲ್ಲಿ ಒಟ್ಟು 70 ವಿದ್ಯಾರ್ಥಿಗಳಿದ್ದು, ನಾಲ್ಕು ಮಂದಿ ಗೌರವ ಶಿಕ್ಷಕರು ಯಾವುದೇ ನಿರೀಕ್ಷೆ ಇಲ್ಲದೆ ಮಕ್ಕಳ ಶಿಕ್ಷಣ ನೀಡುತ್ತಿದ್ದಾರೆ. ಈ ಶಾಲೆ ಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳಿದ್ದಾರೆ. ಅಲ್ಲದೆ ಹಾಸ್ಟೆಲ್ನಲ್ಲಿರುವ ಮಕ್ಕಳು ಕೂಡ ಬರುತ್ತಾರೆ. ಖಾಯಂ ಶಿಕ್ಷಕರ ನಿಯೋಜನೆಗಾಗಿ ಶಿಕ್ಷಣ ಇಲಾಖೆಗೆ ಲೋಕಾಯುಕ್ತರಿಗೆ, ಜಿಲ್ಲಾಧಿಕಾರಿ ಗಳಿಗೆ ಮನವಿಯನ್ನು ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಅವರು ದೂರಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ಮಂಡಳಿ ಸದಸ್ಯ ತಾರನಾಥ್ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹ್ಮದ್, ಯುವಶಕ್ತಿ ರಾಜ್ಯಾಧ್ಯಕ್ಷ ಪ್ರಮೋದ್ ಉಚ್ಚಿಲ ಉಪಸ್ಥಿತರಿದ್ದರು.
ಎಚ್ಎಂ ಇಲ್ಲದೆ ಬಿಸಿಯೂಟಕ್ಕೆ ಸಮಸ್ಯೆ
ಈ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲದೆ ಹಳೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರದ ಸಹಿ ಹಾಗೂ ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೆ ತೊಂದರೆಯಾಗುತ್ತಿದೆ ಎಂದು ನಾಗರಾಜ್ ಹೆಗ್ಡೆ ಆರೋಪಿಸಿದರು.
ಖಾಯಂ ಶಿಕ್ಷಕರಿಲ್ಲದೆ ಬಿಸಿಯೂಟದ ಕಾರ್ಯನಿರ್ವಹಣೆಗೆ ಸಮಸ್ಯೆ ಆಗು ತ್ತಿದೆ. ಎರಡು ತಿಂಗಳಿನಿಂದ ಮುಖ್ಯೋಪಾಧ್ಯಾಯ ರಿಲ್ಲದ ಕಾರಣ ಖಾತೆಯಲ್ಲಿ ರುವ ಬಿಸಿಯೂಟದ ಹಣ ತೆಗೆಯಲು ಆಗುತ್ತಿಲ್ಲ. ಸದ್ಯ ಬಿಸಿಯೂಟಕ್ಕೆ ಸಂಬಂಧಿಸಿ ಕೇವಲ ಐದು ದಿನಗಳಿಗೆ ಬೇಕಾದ ಸಾಮಾನುಗಳಿವೆ ಎಂದು ಅವರು ತಿಳಿಸಿದರು.