ವಾಜಪೇಯಿ ಆಶಯದಂತೆ ಜನರ ಮನೆ ಬಾಗಿಲಿಗೇ ಆಡಳಿತ: ಸಚಿವ ಡಾ. ಅಶ್ವತ್ಥನಾರಾಯಣ

ಬೆಂಗಳೂರು, ಡಿ. 25: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಆಶಯದಂತೆ ರಾಜ್ಯದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ರಾಜ್ಯ ಸರಕಾರದ ಸೇವೆಗಳನ್ನು ಜನರ ಮನೆ ಬಾಗಿಲಿಗೇ ತಲುಪಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.
ಶನಿವಾರ ವಾಜಪೇಯಿಯವರ 97ನೆ ಜನ್ಮದಿನದ ಅಂಗವಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆಗಳು ಜತೆಗೂಡಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ `ಉತ್ತಮ ಆಡಳಿತ ದಿವಸ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಲ್ಲಿರುವ ಯುವಿಇಸಿ ಕಾಲೇಜನ್ನು `ಯೂನಿವರ್ಸಿಟಿ ಆಫ್ ಎಮಿನೆನ್ಸ್' ಮಟ್ಟಕ್ಕೆ ಉನ್ನತೀಕರಿಸಲಾಗುತ್ತಿದೆ.
ಇದು ವಾಜಪೇಯಿಯವರು ಕಂಡಂತಹ ಕನಸಿಗೆ ಪೂರಕವಾಗಿದೆ. ಹಾಗೆಯೇ ಪ್ರತಿಯೊಂದು ಜಿಲ್ಲೆಯಲ್ಲೂ ಕನಿಷ್ಠ ಒಂದಾದರೂ ವಿಶ್ವವಿದ್ಯಾಲಯ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ತಂತ್ರಜ್ಞಾನದ ಮೂಲಕ ಸರಕಾರವನ್ನು ಜನರ ಬಳಿಗೆ ಕೊಂಡೊಯ್ಯುವುದೆ ಉತ್ತಮ ಆಡಳಿತದ ಲಕ್ಷಣ. ಉನ್ನತ ಶಿಕ್ಷಣವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಸಿಗುವಂತೆ ಮಾಡಲಾಗಿದೆ. ಇನ್ನೊಂದೆಡೆ, ಇದೇ ತಂತ್ರಜ್ಞಾನವನ್ನು ಬಳಸಿಕೊಂಡು ಕೌಶಲ್ಯಗಳನ್ನು ಕಲಿಸಲಾಗುತ್ತಿದೆ. ಸರಕಾರಿ ಎಂಜಿನಿಯರಿಂಗ್ ಕಾಲೇಜುಗಳನ್ನು ಅತ್ಯುತ್ತಮ ಸಂಸ್ಥೆಗಳನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಭಾರತದಲ್ಲಿ ಆಗಿರುವಷ್ಟು ಡಿಜಿಟಲೀಕರಣ ಮುಂದುವರಿದ ದೇಶಗಳಲ್ಲೂ ಆಗಿಲ್ಲ. ವಿಶಿಷ್ಟ ಗುರುತಿನ ಪ್ರಾಧಿಕಾರವು ತಂತ್ರಜ್ಞಾನವನ್ನು ಬಳಸಿಕೊಂಡು ಜನರ ಖಾತೆಗಳಿಗೆ ನೇರವಾಗಿ ಅನುಕೂಲಗಳನ್ನು ತಲುಪಿಸುತ್ತಿದೆ. ಬ್ಯಾಂಕ್ ಖಾತೆ ತೆಗೆಯುವುದರಿಂದ ಹಿಡಿದು ಅಡುಗೆ ಅನಿಲ ಪೂರೈಕೆವರೆಗೆ ಇವತ್ತು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದ್ದು, ಇದು ಉತ್ತಮ ಆಡಳಿತದ ಹೆಗ್ಗುರುತು ಎಂದು ಅವರು ಪ್ರತಿಪಾದಿಸಿದರು.
ವಾಜಪೇಯಿಯವರ ಪರಿಕಲ್ಪನೆಗಳಾದ ಗ್ರಾಮ ಸಡಕ್ನಿಂದ ಹಿಡಿದು ನದಿ ಜೋಡಣೆಯವರೆಗೆ ಹತ್ತು ಹಲವು ಸಂಗತಿಗಳು ಇಂದು ದೇಶವನ್ನು ಮುನ್ನಡೆಸುತ್ತಿವೆ. ಮೋದಿಯವರು ನೂರಾರು ಅಪ್ರಸ್ತುತ ಕಾನೂನುಗಳನ್ನು ರದ್ದುಪಡಿಸಿದ್ದು, ಪಾರದರ್ಶಕತೆ ಮತ್ತು ಉತ್ತರದಾಯಿತ್ವವನ್ನು ತಂದಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ವಿದ್ಯುನ್ಮಾನ, ಐಟಿ-ಬಿಟಿ ಇಲಾಖೆಗಳು ತಾವು ತೆಗೆದುಕೊಂಡಿರುವ ಜನಪರ ಉಪಕ್ರಮಗಳು ಮತ್ತು ರೂಪಿಸಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರಾತ್ಯಕ್ಷಿಕೆಯನ್ನು ಪ್ರಸ್ತುತ ಪಡಿಸಿದವು.
ಸಮಾರಂಭದಲ್ಲಿ ಹಿರಿಯ ವಿಜ್ಞಾನಿ ವಾಸುದೇವ ಅತ್ರೆ, ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ನಿರ್ದೇಶಕಿ ಮಂಜುಶ್ರೀ, ಐಟಿ ಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ್, ಜಿಟಿಟಿಸಿ ಮುಖ್ಯಸ್ಥ ರಾಘವೇಂದ್ರ ರಾವ್, ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ ಉಪಸ್ಥಿತರಿದ್ದರು.







