ಉಡುಪಿ ಧರ್ಮಪ್ರಾಂತ ಮಟ್ಟದಲ್ಲಿ ವಂ.ಆಲ್ಫ್ರೆಡ್ ರೋಚ್ ‘ಪುನೀತ’ ಪದವಿಗೇರಿಸುವ ಪ್ರಕ್ರಿಯೆಗೆ ಚಾಲನೆ

ಬ್ರಹ್ಮಾವರ, ಡಿ.27: ಕಪುಚಿನ್ ಸಭೆಯ ಧರ್ಮಗುರು ಆಲ್ಫ್ರೆಡ್ ರೋಚ್ ಅವರನ್ನು ಪುನೀತ ಪದವಿಗೇರಿಸಲಾಗುವ ಉಡುಪಿ ಧರ್ಮಪ್ರಾಂತ ಮಟ್ಟದ ಪ್ರಕ್ರಿಯೆಗೆ ಸೋಮವಾರ ಬ್ರಹ್ಮಾವರದ ಪವಿತ್ರ ಕುಟುಂಬ ದೇವಾಲಯದಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಜೆರಾಲ್ಡ್ ಲೋಬೊ ಅವರ ನೇತೃತ್ವದಲ್ಲಿ ನಡೆದ ದಿವ್ಯ ಬಲಿಪೂಜೆಯೊಂದಿಗೆ ಚಾಲನೆ ನೀಡಲಾಯಿತು.
ಪವಿತ್ರ ಬಲಿಪೂಜೆ ಅರ್ಪಿಸಿದ ಬಳಿಕ ಪುನೀತ ಪದವಿಗೇರಿಸಲಾಗುವ ಉಡುಪಿ ಧರ್ಮಪ್ರಾಂತ ಮಟ್ಟದ ಪ್ರಕ್ರಿಯೆಗೆ ಸಂಬಂಧಿಸಿ ತಪಾಸಣಾ ಸಮಿತಿ ಯ ಸದಸ್ಯರಿಗೆ ಬಿಷಪ್ ಪ್ರಮಾಣ ವಚನ ಬೋಧಿಸುವುದರೊಂದಿಗೆ ಅಧಿಕೃತ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅ.ವಂ.ಡಾ.ಲೋಬೊ, ನಮ್ಮ ಇದೇ ಮಣ್ಣಿನಲ್ಲಿ ಹುಟ್ಟಿ ತನ್ನ ಸಾತ್ವಿಕ ಜೀವನದ ಮೂಲಕ ಪ್ರತಿಯೊಬ್ಬರಿಗೂ ಮಾರ್ಗದರ್ಶಕರಾಗಿ ಸಂತ ಪದವಿಯತ್ತ ತೆರಳಲು ಸನ್ನದ್ದರಾಗಿರುವ ಧರ್ಮಗುರು ಆಲ್ಫ್ರೆಡ್ ರೋಚ್ ಅವರನ್ನು ಪಡೆದಿರುವ ಧರ್ಮಪ್ರಾಂತ ನಿಜಕ್ಕೂ ಧನ್ಯ. ಇದೊಂದು ಚಾರಿತ್ರಿಕ ಘಟನೆಯಾಗಿದ್ದು, ಉಡುಪಿ ಧರ್ಮಪ್ರಾಂತಕ್ಕೆ ಅಭಿಮಾನದ ವಿಚಾರವಾಗಿದೆ. ಇದೊಂದು ದೀರ್ಘಕಾಲದ ಪ್ರಕ್ರಿಯೆಯಾಗಿದ್ದು ಆದಷ್ಟು ಬೇಗ ಸಂತ ಪದವಿ ಲಭಿಸುವಂತಾಗಲಿ ಎಂದು ಹಾರೈಸಿದರು.
ಉಡುಪಿ ಧರ್ಮಪ್ರಾಂತ ಮಟ್ಟದ ಪ್ರಕ್ರಿಯೆಗೆ ಸಂಬಂಧಿಸಿ ತಪಾಸಣಾ ಸಮಿತಿಯ ಮುಖ್ಯಸ್ಥರಾಗಿ ಉಡುಪಿ ಧರ್ಮಾಧ್ಯಕ್ಷರ ಪ್ರತಿನಿಧಿಯಾಗಿ ಶ್ರೇಷ್ಠ ಧರ್ಮಗುರು ವಂ.ಡಾ.ಬ್ಯಾಪ್ಟಿಸ್ ಮಿನೇಜಸ್ ಅವರಿಗೆ ಪ್ರಮೋಟರ್ ಆಫ್ ಜಸ್ಟಿಸ್ ಸದಸ್ಯರಾಗಿ ವಂ. ಸುನೀಲ್ ಕುಮಾರ್ ಡಿಸೋಜಾ, ನೋಟರಿಯಾಗಿ ವಂ. ರವಿ ರಾಜೇಶ್ ಸೆರಾವೊ, ಇತಿಹಾಸ ಆಯೋಗ ಸದಸ್ಯರಾಗಿ ವಂ. ಸ್ಟೀವನ್ ಡಿಸೋಜಾ, ಮೇಲ್ವಿಚಾರಕರಾಗಿ ವಂ.ಬ್ಯಾಪ್ಟಿಸ್ಸ್ ರೊಡ್ರಿಗಸ್, ವಂ.ಜೊಯೇಲ್ ಲೋಪಿಸ್, ವಂ.ಸಾಂತಾ ಲೋಪಿಸ್ ಇರಲಿದ್ದಾರೆ.
ಸಂತ ಪದವಿಗೇರಿಸುವ ಪ್ರಕ್ರಿಯೆ ದೀರ್ಘ ಕಾಲದ್ದಾಗಿದ್ದು, ದೇವರ ಸೇವಕ, ಮಾನ್ಯವಂತ, ಪುನೀತ ಹಾಗೂ ಸಂತ ಈ ನಾಲ್ಕು ಹಂತಗಳಲ್ಲಿ ನಡೆಯಲಿದೆ. ಇದೇ ವೇಳೆ ಆಲ್ಫ್ರೆಡ್ ರೋಚ್ ಅವರಿಗೆ ಪುನೀತ ಪದವಿಗೇರಿಸಲಾಗುವ ಪ್ರಕ್ರಿಯೆಯ ದಸ್ತಾವೇಜು ದಾಖಲೀಕರಣ ಮತ್ತು ಮಾಹಿತಿಗಾಗಿ ವೆಬ್ಸೈಟ್ ಮತ್ತು ಕಚೇರಿಯನ್ನು ಉದ್ಘಾಟಿಸಲಾಯಿತು.
ಕಾರ್ಯಕ್ರಮದಲ್ಲಿ ಕಪುಚಿನ್ ಸಭೆ ಕರ್ನಾಟಕ ಪ್ರಾಂತ್ಯದ ಮುಖ್ಯಸ್ಥರಾದ ವಂ.ಆಲ್ವಿನ್ ಡಾಯಸ್, ಸಹ ಮುಖ್ಯಸ್ಥರಾದ ವಂ. ಪಾವ್ಲ್ ಮೆಲ್ವಿನ್ ಫೆರ್ನಾಂಡಿಸ್, ಉಡುಪಿ ಧರ್ಮಪ್ರಾಂತದ ಶ್ರೇಷ್ಠ ಗುರು ವಂ.ಡಾ.ಬ್ಯಾಪ್ಟಿಸ್ ಮಿನೇಜಸ್, ಬ್ರಹ್ಮಾವರ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ವಂ.ವಿಕ್ಟರ್ ಫೆರ್ನಾಂಡಿಸ್ ಸೇರಿದಂತೆ ಕಪುಚಿನ್ ಸಭೆ ಮತ್ತು ಉಡುಪಿ ಧರ್ಮಪ್ರಾಂತದ ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ಹಾಗೂ ಭಕ್ತವೃಂದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ಉಡುಪಿ ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ವಂ.ಚೇತನ್ ಲೋಬೊ ಕಾರ್ಯಕ್ರಮ ನಿರೂಪಿಸಿದರು.
ವಂ.ಆಲ್ಫ್ರೆಡ್ ರೋಚ್ ಕುರಿತು ಒಂದಿಷ್ಟು
1924ರಲ್ಲಿ ಬ್ರಹ್ಮಾವರ ತಾಲೂಕಿನ ಬಾರಕೂರಿನಲ್ಲಿ ಜನಿಸಿದ ಆಲ್ಫ್ರೆಡ್ ರೋಚ್, ಕ್ರೈಸ್ತ ಧರ್ಮಗುರುವಾಗಿ ರಾಜ್ಯದಾದ್ಯಂತ ಸೇವೆ ಸಲ್ಲಿಸಿ ಬ್ರಹ್ಮಾವರದಲ್ಲಿ ಹದಿನಾರು ವರ್ಷ ಜನಸೇವೆ ಮಾಡಿ 1996ರಲ್ಲಿ ಮೃತಪಟ್ಟರು. ಅವರ ಸಾತ್ವಿಕ ಜೀವನ, ನಿಸ್ವಾರ್ಥ ಸೇವೆ, ಬಡವರ ಅಭಿವೃದ್ಧಿಗೆ ಸಹಾಯ ಹಾಗೂ ಸೇವೆಗಳನ್ನು ಜನರು ಗೌರವಿಸಿ ಪುನೀತ ಪದವಿಗೇರಿಸುವ ಬಲವಾದ ಒತ್ತಾಯ ಕೇಳಿಬಂದಿತ್ತು.
ಆಲ್ಫ್ರೆಡ್ ರೋಚ್ ನಿಧನರಾಗಿ 25 ವರ್ಷ ಕಳೆದರೂ ‘ಪುನೀತ’ ಪದವಿ ಗೇರಿಸಬೇಕೆಂಬ ಭಕ್ತರ ಪ್ರಬಲ ಬೇಡಿಕೆಯನ್ನು ಪರಿಗಣಿಸಿರುವ ವ್ಯಾಟಿಕನ್ ಸಂತರು ಹಾಗೂ ಪುನೀತರನ್ನಾಗಿ ಘೋಷಿಸುವ ವಿಭಾಗವು ಪ್ರಕ್ರಿಯೆ ಆರಂಭಿಸು ವಂತೆ ಅನುಮತಿ ನೀಡಿದೆ.
ಪುನೀತ ಪದವಿಗೇರಿಸುವ ಪ್ರಕ್ರಿಯೆ ಅತ್ಯಂತ ಸಂಕೀರ್ಣ ಹಾಗೂ ಸುದೀರ್ಘ ವಾಗಿದ್ದು, ಕೆಥೋಲಿಕ್ ಧರ್ಮಸಭೆಯ ನೇಮ-ನಿಯಮಗಳ ಪ್ರಕಾರ ನಡೆಯ ಲಿದೆ. ಈ ಪ್ರಕ್ರಿಯೆಯಲ್ಲಿ ಮೊದಲು ’ಪುನೀತ’, ಅನಂತರ ’ಸಂತ’ ಪದವಿಯನ್ನು ಪೋಪ್ ನೀಡಲಿದ್ದಾರೆ. ಪುನೀತ ಪದವಿಗೇರಿಸುವ ಪ್ರಕ್ರಿಯೆಯ ಪ್ರಥಮ ಹಂತವನ್ನು ವ್ಯಕ್ತಿ ಜೀವಿಸಿದ ಪರಿಸರದಲ್ಲಿ ನಡೆಸಲಾಗುವುದು.







