ರಾಜ್ಯಾದ್ಯಂತ ನೈಟ್ ಕರ್ಫ್ಯೂ ಆರಂಭ: ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಪೊಲೀಸರ ಕಾರ್ಯಾಚರಣೆ

ಬೆಂಗಳೂರು, ಡಿ.28: ಅಗತ್ಯ ಚಟುವಟಿಕೆಗಳನ್ನು ಹೊರತುಪಡಿಸಿ, ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಜನರ ಓಡಾಟಕ್ಕೆ ಸಂಪೂರ್ಣ ಕಡಿವಾಣ ಹಾಕಲಾಗಿದ್ದು, ರಾಜ್ಯದ ಪ್ರಮುಖ ನಗರಗಳಲ್ಲಿ ಪೊಲೀಸರು ನಾಕಾಬಂದಿ ಹಾಕಿ ವಾಹನಗಳ ತಪಾಸಣೆ ಆರಂಭಿಸಿದ್ದಾರೆ.
ಜ.7 ರವರೆಗೆ ಮುಂದುವರಿಯಲಿದೆ. ಸರಕಾರದ ನಿಯಮಾನುಸಾರ 144 ಸೆಕ್ಷನ್ ಜಾರಿಯಲ್ಲಿರಲಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.
ನೈಟ್ ಕರ್ಫ್ಯೂ ವೇಳೆ ಅನಾರೋಗ್ಯ ಸಮಸ್ಯೆವುಳ್ಳವರು, ರೋಗಿಗಳು ಮತ್ತು ಅವರ ಪರಿಚಾರಕರು, ವ್ಯಕ್ತಿಗಳ ಓಡಾಟಕ್ಕೆ ತುರ್ತು ಅಗತ್ಯ ಸಂಚಾರಕ್ಕೆ ಅವಕಾಶ. ರಾತ್ರಿಯಲ್ಲಿ ಕೆಲಸ ನಿರ್ವಹಿಸುವ ಅಗತ್ಯವಿರುವ ಎಲ್ಲ ಕೈಗಾರಿಕೆಗಳು, ಕಂಪೆನಿಗಳು ಕಾರ್ಯ ನಿರ್ವಹಿಸಲು ಅನುಮತಿ. ಆದರೆ, ಅಂತಹ ಸಂಸ್ಥೆಗಳ ಉದ್ಯೋಗಿಗಳು ಸಂಬಂಧಿತ ಸಂಸ್ಥೆ, ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿ ತೋರಿಸಿ ಸಂಚಾರ ಮಾಡಬಹುದು.
ಟೆಲಿಕಾಂ ಮತ್ತು ಇಂಟರ್ ನೆಟ್ ಸೇವಾ ಪೂರೈಕೆದಾರ ಉದ್ಯೋಗಿಗಳು ಮತ್ತು ವಾಹನಗಳು ತಮ್ಮ ಸಂಸ್ಥೆಯಿಂದ ನೀಡಲಾದ ಗುರುತಿನ ಚೀಟಿಯನ್ನು ತೋರಿಸಬಹುದು. ಐಟಿ ಮತ್ತು ಬಿಟಿ ಕಂಪೆನಿಗಳ ಉದ್ಯೋಗಿಗಳು ಆದಷ್ಟು ವರ್ಕ್ ಫ್ರಂ ಹೋಂ ಇದ್ದು, ಅಗತ್ಯ ಇದ್ದವರಷ್ಟೇ ಕಚೇರಿಗೆ ತೆರಳಬಹುದು.
ಮೆಡಿಕಲ್ ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅಗತ್ಯ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಅವಕಾಶ ಇದೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಎಲ್ಲ ರೀತಿಯ ಸರಕುಗಳ ಸಾಗಣೆಗೆ ಯಾವುದೇ ನಿರ್ಬಂಧವಿರುವುದಿಲ್ಲ. ಟ್ರಕ್ಗಳು, ಸರಕು ವಾಹನಗಳು ಅಥವಾ ಖಾಲಿ ಸೇರಿದಂತೆ ಯಾವುದೇ ಸರಕು ವಾಹನಗಳ ಸಂಚಾರಕ್ಕೆ ಅವಕಾಶ ಇದೆ. ಹೋಮ್ ಡೆಲಿವರಿ ಮತ್ತು ಇ-ಕಾಮರ್ಸ್ನ ಕಂಪೆನಿಗಳನ್ನು ಅನುಮತಿಸಲಾಗಿದೆ.
ಬಸ್ಗಳು, ರೈಲುಗಳು, ಮೆಟ್ರೋ ರೈಲು ಸೇವೆಗಳು ಮತ್ತು ವಿಮಾನ ಪ್ರಯಾಣಕ್ಕೂ ಅನುಮತಿಸಲಾಗಿದೆ. ಸಾರ್ವಜನಿಕ ಸಾರಿಗೆ, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟ ವಿಮಾನ ನಿಲ್ದಾಣಗಳು, ಬಸ್ ಟರ್ಮಿನಲ್ಗಳು, ಬಸ್ ನಿಲ್ದಾಣ, ರೈಲು ನಿಲ್ದಾಣಗಳು ಇತ್ಯಾದಿಗಳಿಗೆ ವಿಮಾನ, ರೈಲು ಮತ್ತು ರಸ್ತೆಯ ಮೂಲಕ ಪ್ರಯಾಣಿಕರ ಓಡಾಟಕ್ಕೆ ಯಾವುದೇ ನಿಬರ್ಂಧ ಇಲ್ಲ. ಆದರೆ ಪ್ರಯಾಣಿಕರು ಪ್ರಯಾಣ ದಾಖಲೆಗಳು, ಟಿಕೆಟ್ಗಳನ್ನು ಪ್ರದರ್ಶಿಸಿದರೆ ಮಾತ್ರ ಅವಕಾಶ ಇದೆ.
ಡಿ.30 ರಿಂದ ಜ.2 ರವರೆಗೆ ರೆಸ್ಟೋರೆಂಟ್, ಹೊಟೇಲ್, ಕ್ಲಬ್, ಪಬ್ಗಳಲ್ಲಿ ಶೇ.50 ರಷ್ಟು ಮಾತ್ರ ಆಸನ ವ್ಯವಸ್ಥೆ ಮಾಡಬೇಕು. ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕೋವಿಡ್-19 ನೆಗಟಿವ್ ರಿಪೋರ್ಟ್ ಹೊಂದಿರಬೇಕು ಮತ್ತು 2 ಡೋಸ್ ಲಸಿಕೆ ಪಡೆದಿರಬೇಕು. ಡಿ.28 ರಿಂದ ಸಭೆಗಳು, ಸಮ್ಮೇಳನಗಳು, ಮದುವೆಗಳು ಸೇರಿದಂತೆ ಭಾಗವಹಿಸುವವರ ಸಂಖ್ಯೆಯನ್ನು 300 ಜನರಿಗೆ ಮಾತ್ರ ಸೀಮಿತಗೊಳಿಸಬೇಕು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.






.jpg)

