ಪುತ್ತೂರು: ದೇವಸ್ಥಾನ ಮುಂಭಾಗದ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
![ಪುತ್ತೂರು: ದೇವಸ್ಥಾನ ಮುಂಭಾಗದ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ ಪುತ್ತೂರು: ದೇವಸ್ಥಾನ ಮುಂಭಾಗದ ಕೆರೆಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ](https://www.varthabharati.in/sites/default/files/images/articles/2021/12/30/319512-1640848148.jpg)
ಮನೋಹರ ಪ್ರಭು
ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ಗದ್ದೆಯಲ್ಲಿರುವ ಕೆರೆಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಗುರುವಾರ ಬೆಳಗ್ಗೆ ಪತ್ತೆಯಾಗಿದೆ.
ಪುತ್ತೂರು ನಗರದ ದರ್ಬೆ ಎಂಬಲ್ಲಿನ ನಿವಾಸಿ ಮನೋಹರ ಪ್ರಭು (48) ಮೃತರು ಎಂದು ಗುರುತಿಸಲಾಗಿದೆ.
ಅವರು ಇಂಟರ್ನೆಟ್ ಕೇಬಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಕೆರೆಯ ಪಕ್ಕದಲ್ಲಿ ಅವರ ಚಪ್ಪಲಿ ಹಾಗೂ ಸ್ಕೂಟರ್ ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಂದಾಜಿಸಲಾಗಿದೆ.
ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಪೊಲೀಸರು ಗರುಡ ಪಾತಾಳದ ಮೂಲಕ ತಲಾಶೆ ನಡೆಸಿ ಕೆರೆಯೊಳಗೆ ಕಣ್ಮರೆಯಾಗಿದ್ದ ಮನೋಹರ ಪ್ರಭು ಅವರ ಮೃತದೇಹವನ್ನು ಹೊರ ತೆಗೆದರು. ಬಳಿಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಪುತ್ತೂರು ಸರ್ಕಾರಿ ಆಸ್ಪತ್ರೆ ಗೆ ಕೊಂಡೊಯ್ಯಲಾಯಿತು.
ಮನೋಹರ ಪ್ರಭು ಬುಧವಾರ ರಾತ್ರಿಯಿಂದ ಗುರುವಾರ ಬೆಳಗ್ಗಿನ ನಡುವೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.