ಅಲಕ್ಷಿತ ಬುಡಕಟ್ಟುಗಳು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಬೇಕು ಡಾ.ದುಗ್ಗಪ್ಪ ಕಜೆಕಾರ್
ಉಡುಪಿ, ಡಿ.30: ಉಡುಪಿ ಜಿಲ್ಲೆಯ ಕುಡುಬಿ ಸಮುದಾಯ, ಉತ್ತರ ಕನ್ನಡದ ಹಾಲಕ್ಕಿ ಸಮುದಾಯ ಹಾಗೂ ದಕ್ಷಿಣ ಕನ್ನಡದ ಚೆನ್ನದಾಸ ಸಮುದಾಯ ಬುಡಕಟ್ಟು ಸಮುದಾಯಗಳ ಆಚರಣೆ, ಸಂಸ್ಕೃತಿ ಹಾಗೂ ಭಾಷೆಯನ್ನು ಹೊಂದಿದ್ದು, ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಅನಿವಾರ್ಯತೆ ಇದೆ ಎಂದು ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಸಹ ಪ್ರಾಧ್ಯಾಪಕ ಡಾ. ದುಗ್ಗಪ್ಪ ಕಜೆಕಾರ್ ಹೇಳಿದ್ದಾರೆ.
ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಶಿವಮೊಗ್ಗ, ಐಕ್ಯೂಎಸಿ ಸಮಾಜಶಾಸ್ತ್ರ ವಿಭಾಗ, ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಶಿವಮೊಗ್ಗ, ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಜನಜಾತಿ ದಿವಸದ ಅಂಗವಾಗಿ ಗುರುವಾರ ನಡೆದ ’ಬುಡಕಟ್ಟು ಜನಾಂಗ- ಸಂಸ್ಕೃತಿ ಮತ್ತು ತಲ್ಲಣಗಳು’ ಜಾಲಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಈ ಸಮುದಾಯಗಳು ಕರ್ನಾಟಕ ಸರಕಾರದ ಮೀಸಲಾತಿ ಪಟ್ಟಿಯಲ್ಲಿ ಕಾರಣಾಂತರಗಳಿಂದ ಪ್ರವರ್ಗ-1ರಲ್ಲಿ ಜಾತಿಗಳಾಗಿ ಪರಿಗಣಿಸಲ್ಪಟ್ಟಿವೆ ಎಂದು ಅವರು ನುಡಿದರು. ಪ್ರತಿ ಬುಡಕಟ್ಟು ಭಾಷೆ, ಸಂಸ್ಕೃತಿ, ಉಡುಗೆ, ಆಹಾರ ಕ್ರಮದಲ್ಲಿ ಭಿನ್ನವಾಗಿವೆ. ಅವುಗಳನ್ನು ನಾವು ಒಂದಕ್ಕೊಂದು ಹೋಲಿಸಬಾರದು ಎಂದವರು ಅಭಿಪ್ರಾಯಪಟ್ಟರು.
ಅಲ್ಲದೇ ಬುಡಕಟ್ಟುಗಳಿಗೆ ಜಾತಿ-ಧರ್ಮವಿಲ್ಲ. ಸಾಂಸ್ಕೃತೀಕರಣದ ಪ್ರಭಾವ ದಿಂದ ಕೆಲವೊಂದು ಬುಡಕಟ್ಟುಗಳು ಹಿಂದೂ ಧರ್ಮ, ಜಾತಿ ಬಣ್ಣ ಪಡೆಯುತ್ತಿವೆ ಎಂದರು.
ಬಿ.ಎನ್.ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ ದಾಂಡೇಲಿ ಇದರ ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಎಸ್.ಎಸ್.ಹಿರೇಮಠ ಮಾತನಾಡಿ, ಸಿದ್ಧಿ ಸಮುದಾಯದ ಸಂಸ್ಕೃತಿ, ಭಾಷೆ ಹಾಗೂ ಅವರ ಕಸುಬುಗಳ ಬಗ್ಗೆ ವಿವರವಾಗಿ ಮಾತನಾಡಿದರು. ಸಿದ್ಧಿಗಳ ವಲಸೆ ಹಾಗೂ ಹಿನ್ನಲೆಗಳ ಬಗ್ಗೆ ಕೂಡ ಪರಿಚಯಿಸಿದರು.
ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ಶಿವಮೊಗ್ಗ ಕ್ಷೇತ್ರ ಪ್ರಚಾರಾಧಿಕಾರಿ ಜಿ. ತುಕರಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಪ್ರಾಂಶುಪಾಲ ಡಾ. ಶೇಖರ್ ಸಂಪನ್ಮೂಲ ವ್ಯಕ್ತಿಗಳ ಮಾತುಗಳನ್ನು ವಿಶ್ಲೇಷಿಸಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಶಿಕಾರಿಪುರ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ.ಮಂಜುಳಾ ಟಿ. ಸ್ವಾಗತಿಸಿದರು.







