ಸ್ಥಳೀಯಾಡಳಿತ ಫಲಿತಾಂಶ; ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ: ನಳಿನ್ ಕುಮಾರ್
![ಸ್ಥಳೀಯಾಡಳಿತ ಫಲಿತಾಂಶ; ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ: ನಳಿನ್ ಕುಮಾರ್ ಸ್ಥಳೀಯಾಡಳಿತ ಫಲಿತಾಂಶ; ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ: ನಳಿನ್ ಕುಮಾರ್](https://www.varthabharati.in/sites/default/files/images/articles/2021/12/30/319578-1640884256.jpg)
ಮಂಗಳೂರು, ಡಿ.30: ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಚುನಾವಣೆಯ ಫಲಿತಾಂಶವು ತೃಪ್ತಿ ತಂದಿದೆ. ಕರಾವಳಿಯಲ್ಲಿ ಬಿಜೆಪಿ ಗೆದ್ದು ಮತ್ತೊಮ್ಮೆ ಅಧಿಕಾರ ಉಳಿಸಿಕೊಂಡಿದೆ. ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳನ್ನು ಬಿಜೆಪಿ ಈ ಬಾರಿ ಪಡೆದಿದೆ. ಒಟ್ಟಾರೆ ರಾಜ್ಯದ ಫಲಿತಾಂಶವು ತೃಪ್ತಿ ತಂದಿದೆ. ಆದರೆ ಇದು ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಅಲ್ಲ ಎಂದು ದ.ಕ. ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ವಿಟ್ಲ ಹಾಗೂ ಕೋಟೆಕಾರ್ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ ಹಿನ್ನೆಲೆಯಲ್ಲಿ ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ಒಬ್ಬ ಪಕ್ಷೇತರ ನಿಂತರೂ ಮತಗಳಲ್ಲಿ ವ್ಯತ್ಯಾಸವಾಗುತ್ತದೆ, ವಿರುದ್ಧ ಫಲಿತಾಂಶ ಬರುತ್ತದೆ. ಆದರೂ ಬಿಜೆಪಿಗೆ ಉತ್ತಮವಾದ ಫಲಿತಾಂಶ ಲಭಿಸಿದೆ. ಚಿಕ್ಕಮಗಳೂರು, ಉತ್ತರ ಕರ್ನಾಟಕ ಭಾಗದ ಕೆಲವೆಡೆ ಈ ಬಾರಿ ನಾವು ಗೆದ್ದಿದ್ದೇವೆ. ಗ್ರಾಪಂ, ಪಪಂಗಳು ಯಾವುದೇ ಚುನಾವಣೆಯ ದಿಕ್ಸೂಚಿ ಆಗುವುದಿಲ್ಲ. ಇದರಲ್ಲಿ ಸ್ಥಳೀಯ ಸಮಸ್ಯೆ, ವಿಷಯವೇ ಮುಖ್ಯವಾಗಿರುತ್ತದೆ ಎಂದರು.