ಬಜೆ ಡ್ಯಾಮ್ ನೀರಿನ ಮಟ್ಟ ಪರಿಶೀಲನೆ

ಉಡುಪಿ, ಡಿ.31: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯತ್ಗಳಿಗೆ ಕುಡಿ ಯುವ ನೀರು ಪೂರೈಸುತ್ತಿರುವ ಬಜೆ ಡ್ಯಾಮ್ಗೆ ಶಾಸಕ ಕೆ.ರಘುಪತಿ ಭಟ್ ನಗರ ಸಭೆಯ ಅಧಿಕಾರಿಗಳೊಂದಿಗೆ ಇಂದು ಭೇಟಿ ನೀಡಿ ನೀರಿನ ಮಟ್ಟವನ್ನು ಪರಿಶೀಲಿಸಿದರು.
ಮುಂದಿನ ದಿನಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಲಿರುವುದರಿಂದ ನೀರಿನ ಪಂಪಿಂಗ್ ಹಾಗೂ ನೀರಿನ ಪೂರೈಕೆಗೆ ಬೇಕಾಗುವ ಪೂರ್ವ ತಯಾರಿಯನ್ನು ಮಾಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.
ಬಜೆ ಡ್ಯಾಮ್ನಲ್ಲಿ ನೀರು ಹರಿಯುತ್ತಿದ್ದು, ನೀರಿನ ಮಟ್ಟ 5.1 ಮೀಟರ್ ಇದ್ದು, ಶಿರೂರಿನಲ್ಲಿರುವ ಡ್ಯಾಮ್ನಲ್ಲಿ ನೀರು ಸಂಗ್ರಹಿಸಲು ನಗರಸಭೆ ನಿರ್ಧರಿಸಿದೆ. ಸದ್ಯ ಮೇ ಅಂತ್ಯದವರೆಗೆ ಬೇಕಾದಷ್ಟು ನೀರಿನ ಸಂಗ್ರಹ ಇದೆ ಎಂದು ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆಯ ಅಧ್ಯಕ್ಷ ಸುಮಿತ್ರಾ ಆರ್.ನಾಯಕ್, ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್ ಅಂಚನ್, ಪೌರಾಯುಕ್ತ ಉದಯ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಯಶ್ವಂತ್, ಅಭಿಯಂತರ ದುರ್ಗಾಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.







