ಮದ್ಯ ಸೇವನೆ ರೋಗವೇ ಹೊರತು ಚಟ ಅಲ್ಲ: ಡಾ.ಕಿರಣ್ ಕುಮಾರ್
![ಮದ್ಯ ಸೇವನೆ ರೋಗವೇ ಹೊರತು ಚಟ ಅಲ್ಲ: ಡಾ.ಕಿರಣ್ ಕುಮಾರ್ ಮದ್ಯ ಸೇವನೆ ರೋಗವೇ ಹೊರತು ಚಟ ಅಲ್ಲ: ಡಾ.ಕಿರಣ್ ಕುಮಾರ್](https://www.varthabharati.in/sites/default/files/images/articles/2022/01/1/319766-1641035616.jpg)
ಉಡುಪಿ, ಜ.1: ಮದ್ಯ ಸೇವನೆ ಎಂಬುದು ರೋಗವೇ ಹೊರತು ಚಟ ಅಲ್ಲ. ಆ ರೋಗಕ್ಕೆ ಪರಿಹಾರ ಕಂಡುಕೊಳ್ಳಲು ವೈದ್ಯಕೀಯ ಚಿಕಿತ್ಸೆಯಿಂದ ಸಾಧ್ಯವಾಗುತ್ತದೆ ಎಂದು ಭಾರತೀಯ ಮನೋ ವೈದ್ಯಕೀಯ ಸಂಘ ಕರ್ನಾಟಕ ಶಾಖೆ ಅಧ್ಯಕ್ಷ ಹಾಗೂ ತಜ್ಞ ಮನೋವೈದ್ಯ ಡಾ.ಕಿರಣ್ ಕುಮಾರ್ ಹೇಳಿದ್ದಾರೆ.
ಉಡುಪಿ ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ವತಿಯಿಂದ ಆಸ್ಪತ್ರೆಯಲ್ಲಿ ಆಯೋಜಿಸಲಾದ 10 ದಿನಗಳ 29ನೇ ಮದ್ಯವ್ಯಸನ ವಿಮುಕ್ತಿ ಶಿಬಿರವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮದ್ಯ ಸೇವನೆ ಮತ್ತು ಮದ್ಯ ವ್ಯಸನ ತ್ಯಜಿಸುವ ಕುರಿತು ಜನರಲ್ಲಿ ಬಹಳಷ್ಟು ತಪ್ಪು ಕಲ್ಪನೆಗಳಿವೆ. ಸರಿಯಾದ ವೈದ್ಯಕೀಯ ಚಿಕಿತ್ಸೆ ಇದ್ದರೆ ಮದ್ಯ ವ್ಯಸನ ವಿಮುಕ್ತಿಯಿಂದ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಮದ್ಯ ಸೇವನೆ ಹೃದಯರೋಗಕ್ಕೆ ಉತ್ತಮ ಎಂಬ ತಪ್ಪು ಅಭಿಪ್ರಾಯಗಳಿವೆ. ಇವುಗಳನ್ನು ಜನರ ಮನಸ್ಸಿನಿಂದ ತೆಗೆದು ಹಾಕಬೇಕು ಎಂದರು.
ಇಂದು ಮಹಿಳೆಯರು ಹಾಗೂ ವಿದ್ಯಾರ್ಥಿಗಳು ಕೂಡ ಮದ್ಯ ವ್ಯಸನಕ್ಕೆ ಹೆಚ್ಚು ಹೆಚ್ಚು ಬಲಿಯಾಗುತ್ತಿದ್ದಾರೆ. ಮದ್ಯ ವ್ಯಸನದಿಂದ ಸಾಮಾಜಿಕ ಸಮಸ್ಯೆ ಮಾತ್ರವಲ್ಲದೆ ಆರ್ಥಿಕ ಸಮಸ್ಯೆಗಳನ್ನು ಕೂಡ ಎದುರಿಸಬೇಕಾಗುತ್ತದೆ. ಈ ವ್ಯಸನ ದಿಂದ ದೈಹಿಕ ಹಾಗೂ ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಕಾಯಿಲೆಗಳು ಕೂಡ ಕಂಡುಬರುತ್ತವೆ ಎಂದು ಅವರು ತಿಳಿಸಿದರು.
ಅಧ್ಯಕ್ಷತೆಯನ್ನು ಡಾ.ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಡಾ.ಪಿ.ವಿ.ಭಂಡಾರಿ ವಹಿಸಿದ್ದರು. ಈ ಸಂದರ್ಭದಲ್ಲಿ ಮದ್ಯ ವ್ಯಸನ ವಿಮುಕ್ತ ರನ್ನು ಸನ್ಮಾನಿಸಲಾಯಿತು. ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ್ ಎಂ., ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ ಅಧ್ಯಕ್ಷ ಡಾ.ವಿನಾಯಕ ಶೆಣೈ ಮುಖ್ಯ ಅತಿಥಿಗಳಾಗಿದ್ದರು.
ಆಸ್ಪತ್ರೆಯ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ, ಡಾ.ಮಾನಸ, ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನಶಾಸ್ತ್ರಜ್ಞ ನಾಗರಾಜ್ ಮೂರ್ತಿ ವಂದಿಸಿದರು. ದೀಪಶ್ರೀ ಹಾಗೂ ಪೃಥ್ವಿ ಕಾರ್ಯಕ್ರಮ ನಿರೂಪಿಸಿದರು.