ಕೊರಗ ಸಮುದಾಯದ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
![ಕೊರಗ ಸಮುದಾಯದ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ ಕೊರಗ ಸಮುದಾಯದ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ](https://www.varthabharati.in/sites/default/files/images/articles/2022/01/1/319831-1641056057.jpg)
ಮಂಗಳೂರು, ಜ.1: ಉಡುಪಿ ಜಿಲ್ಲೆಯ ಕೋಟದ ಆದಿವಾಸಿ ಕೊರಗ ಸಮುದಾಯದ ಮನೆಯಲ್ಲಿ ನಡೆದ ಮೆಹಂದಿ ಕಾರ್ಯಕ್ರಮದ ಮೇಲೆ ಪೊಲೀಸರು ನಡೆಸಿದ ದಾಳಿ, ದಾಂಧಲೆ, ದೌರ್ಜನ್ಯವನ್ನು ಖಂಡಿಸಿ ಡಿವೈಎಫ್ಐ ಸಿಪಿಎಂ ಮತ್ತು ದಲಿತ ಹಕ್ಕುಗಳ ಹೋರಾಟ ಸಮಿತಿ ಉರ್ವಸ್ಟೋರ್ ಘಟಕಗಳ ನೇತೃತ್ವದಲ್ಲಿ ಶನಿವಾರ ಉರ್ವಸ್ಟೋರ್ನಲ್ಲಿ ಪ್ರತಿಭಟನೆ ನಡೆಯಿತು.
ಸಿಪಿಎಂ ನಗರ ಸಮಿತಿ ಮುಖಂಡರಾದ ಪ್ರಶಾಂತ್ ಎಂಬಿ ಮಾತನಾಡಿ ಕೊರಗ ಸಮುದಾಯದ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ ಪೊಲೀಸರ ಕ್ರಮ ಖಂಡನೀಯ. ಮೂಲ ನಿವಾಸಿಗಳಾದ ಕೊರಗ ಸಮುದಾಯವನ್ನು ರಕ್ಷಿಸಿ ಮುಖ್ಯವಾಹಿನಿಗೆ ತರಬೇಕಾಗಿದ್ದ ಪೊಲೀಸರೇ ದಾಂಧಲೆ ನಡೆಸಿ ದಬ್ಬಾಳಿಕೆ ಮಾಡಿರುವುದು ಅಕ್ಷಮ್ಯ ಅಪರಾಧ. ಹಾಗಾಗಿ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಲಿತ ಹಕ್ಕುಗಳ ಹೋರಾಟ ಸಮಿತಿಯ ಮಂಗಳೂರು ನಗರ ಅಧ್ಯಕ್ಷ ನಾಗೇಂದ್ರ ಮತ್ತು ನಗರ ಮುಖಂಡರಾದ ರಘುವೀರ್, ಸಿಪಿಎಂ ಮತ್ತು ಡಿವೈಎಫ್ಐ ಸ್ಥಳೀಯ ಮುಖಂಡರಾದ ಮನೋಜ್ ಕುಲಾಲ್, ರಾಜೇಶ್ ಕೆ, ಧನರಾಜ್, ಇಕ್ಬಾಲ್ ಮತ್ತು ಸ್ಥಳೀಯರಾದ ಉಮಾ, ದುಗ್ಗಪ್ಪ, ಸರೋಜಾ ಮತ್ತಿತರರು ಪಾಲ್ಗೊಂಡಿದ್ದರು.