ಮಿಯಾವಕಿ ಅರ್ಬನ್ ಫಾರೆಸ್ಟ್ ಲೋಕಾರ್ಪಣೆ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ಸನ್ಮಾನ
![ಮಿಯಾವಕಿ ಅರ್ಬನ್ ಫಾರೆಸ್ಟ್ ಲೋಕಾರ್ಪಣೆ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ಸನ್ಮಾನ ಮಿಯಾವಕಿ ಅರ್ಬನ್ ಫಾರೆಸ್ಟ್ ಲೋಕಾರ್ಪಣೆ: ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ಸನ್ಮಾನ](https://www.varthabharati.in/sites/default/files/images/articles/2022/01/1/319839-1641057592.jpg)
ಮಂಗಳೂರು, ಜ.1: ನಗರದ ರಾಮಕೃಷ್ಣ ಮಠದ ಆವರಣದಲ್ಲಿ ನಿರ್ಮಿಸಲಾದ 500 ಗಿಡಗಳನ್ನು ಒಳಗೊಂಡ ಮಿಯಾವಕಿ ಮಾದರಿಯ ವಿವೇಕಾನಂದ ವೃಕ್ಷಾಲಯಯನ್ನು ವೃಕ್ಷಮಾತೆ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಶನಿವಾರ ಲೋಕಾರ್ಪಣೆ ಮಾಡಿದರು.
ಬಳಿಕ ಮಾತನಾಡಿದ ಅವರು ಗಿಡ ನೆಡುವುದೆಂದರೆ ನನಗೆ ತುಂಬ ಖುಷಿಯ ಸಂಗತಿ. ನನ್ನಿಂದ ಸಾಧ್ಯವಾದಷ್ಟು ಎಲ್ಲ ಬಗೆಯ ಗಿಡಗಳನ್ನು ನೆಟ್ಟು ಪೋಷಿಸುತ್ತ ಬಂದಿದ್ದೇನೆ. ಮುಂದೆಯೂ ಪೋಷಿಸುವೆ ಎಂದರು. ಈ ಸಂದರ್ಭ ತುಳಸಿ ಗೌಡ ಅವರನ್ನು ರಾಮಕೃಷ್ಣ ಮಠದ ವತಿಯಿಂದ ಸನ್ಮಾನಿಸಲಾಯಿತು.
50 ಕೆರೆ ಅಭಿವೃದ್ಧಿ: ಮಂಗಳೂರು ನಗರಾಭಿವೃದ್ಧಿ ಪ್ರಾಾಧಿಕಾರ (ಮುಡಾ) ಅಧ್ಯಕ್ಷ ರವಿಶಂಕರ ಮಿಜಾರು ಮಾತನಾಡಿ, ಒಂದುವರೆ ವರ್ಷದೊಳಗೆ ತನ್ನ ಅಧಿಕಾರವಧಿ ಮುಗಿಯಲಿದೆ. ಅದಕ್ಕಿಂತ ಮುನ್ನ 50 ಕೆರೆಗಳನ್ನು ಅಭಿವೃದ್ಧಿಗೊಳಿಸಿ ಲೋಕಾರ್ಪಣೆ ಮಾಡುವ ಉದ್ದೇಶ ಇದೆ. ಈಗಾಗಲೇ 20 ಕೆರೆಗಳ ಅಭಿವೃದ್ಧಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಆ ಪೈಕಿ 8 ಕೆರೆಗಳ ಅಭಿವೃದ್ಧಿ ಪೂರ್ತಿಯಾಗಿದೆ. ಉಳಿದ 13 ಕೆರೆಗಳ ಅಭಿವೃದ್ಧಿ ಯಾಗುತ್ತಿದೆ ಎಂದು ಹೇಳಿದರು.
ನಗರದ 83 ಕಡೆಗಳಲ್ಲಿ ಉದ್ಯಾನ ನಿರ್ಮಿಸುವ ಉದ್ದೇಶವಿದೆ. 10 ಕಡೆಗಳಲ್ಲಿ ಮಿಯಾವಕಿ ಮಾದರಿಯ ವೃಕ್ಷ ಸಂಕುಲ ನಿರ್ಮಾಣಕ್ಕೆೆ ಸಿದ್ಧತೆ ನಡೆಸಲಾಗಿದೆ. ನಗರದ 8 ವಾರ್ಡ್ಗಳಲ್ಲಿ ಸಸ್ಯರಾಶಿ ಕ್ಷೀಣಿಸುತ್ತಿರುವುದು ಕಂಡುಬಂದಿದ್ದು, ಈ ಎಲ್ಲ ವಾರ್ಡ್ಗಳಲ್ಲಿ ಸಸಿ ನೆಟ್ಟು ಹಸಿರು ಹೆಚ್ಚಿಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ರವಿಶಂಕರ್ ಮಿಜಾರು ತಿಳಿಸಿದರು.
ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜಿ, ಸ್ವಾಮಿ ಏಕಗಮ್ಯಾನಂದಜಿ, ಮಾಜಿ ಎಂಎಲ್ಸಿ ಕ್ಯಾ.ಗಣೇಶ್ ಕಾರ್ಣಿಕ್, ವಲಯ ಅರಣ್ಯಾಧಿಕಾರಿ ಪ್ರಶಾಂತ್, ಪ್ರಗತಿಪರ ಕೃಷಿಕ ವಸಂತ ಕಜೆ ಮತ್ತಿತರರಿದ್ದರು.