'ವಿಶ್ವ ಕೊಂಕಣಿ ಸರ್ದಾರ್' ಬಸ್ತಿ ವಾಮನ ಶೆಣೈ ನಿಧನ
![ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ ಶೆಣೈ ನಿಧನ ವಿಶ್ವ ಕೊಂಕಣಿ ಸರ್ದಾರ್ ಬಸ್ತಿ ವಾಮನ ಶೆಣೈ ನಿಧನ](https://www.varthabharati.in/sites/default/files/images/articles/2022/01/2/319891-1641132864.jpeg)
ಮಂಗಳೂರು, ಜ.2: 'ವಿಶ್ವ ಕೊಂಕಣಿ ಸರ್ದಾರ್' ಎಂದೇ ಜನಪ್ರಿಯರಾಗಿದ್ದ, ಸಾಹಿತ್ಯ ಪೋಷಕ, ನಗರದ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದ ಸಂಸ್ಥಾಪಕ ಬಸ್ತಿ ವಾಮನ ಮಾಧವ ಶೆಣೈ(87) ರವಿವಾರ ತುಂಬೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
ಮೃತರು ಇಬ್ಬರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯ ಸಂಸ್ಕಾರವು ಜ.3ರಂದು ಮಧ್ಯಾಹ್ನ 12 ಗಂಟೆಗೆ ಅವರ ಜನ್ಮಸ್ಥಳ ಬಂಟ್ವಾಳದಲ್ಲಿ ನೆರವೇರಲಿದೆ. ಅದಕ್ಕೂ ಮೊದಲು ಬೆಳಗ್ಗೆ 9ರಿಂದ 10ರವರೆಗೆ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಶಕ್ತಿನಗರದಲ್ಲಿರುವ ವಿಶ್ವ ಕೊಂಕಣಿ ಕೇಂದ್ರದಲ್ಲಿ ಇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಬಸ್ತಿ ವಾಮನ ಶೆಣೈ 1943ರ ನವೆಂಬರ್ 6ರಂದು ಬಂಟ್ವಾಳದಲ್ಲಿ ಜನಿಸಿದರು. ಮಂಗಳೂರಿನ ಶಕ್ತಿನಗರದಲ್ಲಿ ವಿಶ್ವ ಕೊಂಕಣಿ ಕೇಂದ್ರವನ್ನು ಸ್ಥಾಪಿಸುವ ಮೂಲಕ ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಯ ಉಳಿವು ಮತ್ತು ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿ ಗಮನ ಸೆಳೆದಿದ್ದರು.
ಸಂತಾಪ: ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಯು.ಟಿ.ಖಾದರ್, ರಾಜೇಶ್ ನಾಯ್ಕ್, ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.