ಕಾಂಗ್ರೆಸ್ನವರದು ಮತದ ಮೇಲಿನ ಅಂಧತೆ: ಸಿ.ಟಿ.ರವಿ

ಬೆಂಗಳೂರು, ಜ.2: ತಾಲಿಬಾನ್ನದು ಮತಾಂಧತೆ, ಕಾಂಗ್ರೆಸ್ನವರದು ಮತದ ಮೇಲಿನ ಅಂಧತೆ. ತಾಲಿಬಾನ್ಗೂ ಸ್ಪರ್ಧೆ ಕೊಡುವ ರೀತಿಯಲ್ಲಿ ಕಾಂಗ್ರೆಸ್ ಪಕ್ಷದವರ ವರ್ತನೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಹೇಳಿದ್ದಾರೆ.
ನಗರದ 'ಸೆವೆನ್ ಮಿನಿಸ್ಟರ್ ಕ್ವಾರ್ಟರ್ಸ್'ನಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಬಹುಸಂಖ್ಯಾತರ ಭಾವನೆಗೆ ಕವಡೆ ಕಿಮ್ಮತ್ತನ್ನೂ ಕೊಡುತ್ತಿಲ್ಲ. ಕುಟುಂಬಕ್ಕೆ ಜೋತು ಬಿದ್ದ ಪಕ್ಷವಾದ ಕಾಂಗ್ರೆಸ್ ಕಾಲಕ್ಕೆ ತಕ್ಕಂತೆ ಬದಲಾಗುವ ಮನಸ್ಥಿತಿಯನ್ನೂ ಹೊಂದಿಲ್ಲ ಎಂದು ಟೀಕಿಸಿದರು.
ಬಿಜೆಪಿ ಏನೇನು ಪರಿವರ್ತನೆ ತರುತ್ತದೆಯೋ ಅದೆಲ್ಲವನ್ನೂ ವಿರೋಧಿಸಬೇಕು ಎಂಬ ಕೆಟ್ಟ ಚಾಳಿ ದೇಶದ ಅತ್ಯಂತ ಹಿರಿಯ ಅನುಭವಿ ರಾಜಕೀಯ ಪಕ್ಷ ಅಂದುಕೊಂಡಿರುವ ಕಾಂಗ್ರೆಸ್ಗೆ ಬಂದಿರುವುದು ದುರದೃಷ್ಟಕರ ಎಂದರು.
ಇಂದಿನದು ಮಹಾತ್ಮ ಗಾಂಧಿ ಕಾಂಗ್ರೆಸ್ ಅಲ್ಲ. ಇದು ಸೋನಿಯಾ ಗಾಂಧಿ ಕಾಂಗ್ರೆಸ್ ಎಂದು ಟೀಕಿಸಿದ ರವಿ, 2014, 2018, 2019ರ ಚುನಾವಣೆ ಫಲಿತಾಂಶ ನೋಡಿ. ಆಗಲೂ ಬುದ್ಧಿ ಬರದಿದ್ದರೆ ಜನ ನಿಮಗೆ ಮುಂದೆ ಬುದ್ಧಿ ಕಲಿಸುತ್ತಾರೆ. ಕಾಂಗ್ರೆಸ್ನ ಭ್ರಷ್ಟ ಮತ್ತು ಒಡೆದು ಆಳುವ ನೀತಿಯನ್ನು ಜನರು ಬೆಂಬಲಿಸುವುದಿಲ್ಲ. ಕಾಂಗ್ರೆಸ್ನ ಮನಸ್ಥಿತಿಗೆ ಜನರೇ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್ಸನ್ನು ಹಿಂದೂಗಳು ನಂಬುವ ಸ್ಥಿತಿಯಲ್ಲಿಲ್ಲ ಎಂದರು.
ನಮ್ಮ ಪಕ್ಷದಲ್ಲಿ ಪಕ್ಷದ ಅಧ್ಯಕ್ಷರೇ ಸುಪ್ರೀಂ. ಆದರೆ, ಬೆಳಗಾವಿಯಲ್ಲಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಿಗೆ ನನ್ನ ಬಿಟ್ಟು ಸಭೆ ಮಾಡಬೇಡ ಅಂದದ್ದು ನೋಡಿದರೆ, ಇಲ್ಲಿ ಕೆಪಿಸಿಸಿ ಅಧ್ಯಕ್ಷರೇ ಸುಪ್ರೀಂ ಅಥವಾ ವಿಪಕ್ಷ ನಾಯಕರು ಸುಪ್ರೀಂ ಸ್ಥಾನ ಪಡೆದಿದ್ದಾರಾ ಎಂಬ ಸಂದೇಹ ಮೂಡುತ್ತದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಕಾಲದಲ್ಲಿ ಜಾರಿಗೊಂಡ ಗೋಹತ್ಯಾ ನಿಷೇಧ ಕಾಯ್ದೆಯನ್ನು ಮತ್ತೆ ಅನುಷ್ಠಾನಕ್ಕೆ ತರುವುದನ್ನು ಅದೇ ಪಕ್ಷದವರು ವಿರೋಧಿಸುತ್ತಿದ್ದಾರೆ. ಬಲವಂತ, ಪ್ರಲೋಭನೆಯ ಮತಾಂತರ ನಿಯಂತ್ರಿಸುವ ಧಾರ್ಮಿಕ ಹಕ್ಕು ಸಂರಕ್ಷಣಾ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಯಾವುದೇ ಒಂದು ಸಮುದಾಯವನ್ನು ಹೊರಗಿಟ್ಟು ಅಥವಾ ಒಂದು ಸಮುದಾಯವನ್ನು ಒಳಗಿಟ್ಟು ಈ ಕಾಯ್ದೆ ತಂದಿಲ್ಲ. ಮತಾಂತರಕ್ಕೆ ಮಾತ್ರ ನಿಯಂತ್ರಣ ಹೇರಿದೆ. ಮತಾಂತರ ಆಗುವುದಕ್ಕೆ ಕೆಲವು ನಿಯಮಾವಳಿ ರೂಪಿಸಿದೆ. ದೇವಸ್ಥಾನಕ್ಕೆ ಸ್ವಾತಂತ್ರ್ಯ ಕೊಡುವುದಕ್ಕೂ ವಿರೋಧ, ಲವ್ ಜಿಹಾದ್ ಕಾಯ್ದೆಗೂ ವಿರೋಧ, ಯುವತಿಯ ಮದುವೆ ವಯಸ್ಸನ್ನು ಹೆಚ್ಚಿಸಿದ್ದನ್ನೂ ಕಾಂಗ್ರೆಸ್ನವರು ಆಕ್ಷೇಪಿಸುತ್ತಾರೆ ಎಂದು ಖಂಡಿಸಿದರು.
ಮೊದಲು ಪೌರತ್ವ ಕೊಡುವ ವಿಧೇಯಕ ಸಿಎಎ ತಂದಾಗ ಕಾಂಗ್ರೆಸ್ ವಿರೋಧಿಸಿತು. ಜವಾಹರಲಾಲ್ ನೆಹರೂ ಅವರು ಪ್ರಧಾನಿ ಆಗಿದ್ದಾಗ ಅದನ್ನು ತಂದಿದ್ದರು. ಇಂದಿರಾ ಗಾಂಧಿ ಪ್ರಧಾನಿಯಾದಾಗಲೂ ಅದನ್ನೇ ಮಾಡಿದ್ದರು. ಆದರೆ, ಅದನ್ನು ಬಿಜೆಪಿ ತಂದಾಗ ವಿರೋಧಿಸುತ್ತಿದ್ದಾರೆ ಎಂದು ಟೀಕಿಸಿದರು.
ಮೇಕೆದಾಟು ಸಂಬಂಧ ಕೆಪಿಸಿಸಿ ಅಧ್ಯಕ್ಷರು ಆರೋಗ್ಯ ಸುಧಾರಣೆಗಾಗಿ ಪಾದಯಾತ್ರೆ ಮಾಡಲಿ ಎಂದ ಸಿ.ಟಿ.ರವಿ, ಆಂತರಿಕ ಗದ್ದುಗೆಯ ಗುದ್ದಾಟಕ್ಕಾಗಿ ಮೇಲುಗೈ ಸಾಧನೆಗೆ ಈ ಪಾದಯಾತ್ರೆ ಮಾಡಲಾಗುತ್ತಿದೆಯೇ ಎಂದು ಪ್ರಶ್ನಿಸಿದರು.
ಮೇಕೆದಾಟು ಯೋಜನೆ ಸಂಬಂಧ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ಕೊಟ್ಟಿದೆ. ಪರಿಸರ ಇಲಾಖೆ ಅನುಮೋದನೆ ಸಿಗಬೇಕಾಗಿದೆ. ಯೋಜನೆಗೆ ರಾಜ್ಯ ಸರಕಾರ ಬದ್ಧತೆಯನ್ನೂ ವ್ಯಕ್ತಪಡಿಸಿದೆ. ಹೀಗಿರುವಾಗ ತಮ್ಮ ಪಾದಯಾತ್ರೆ ಯಾವ ಉದ್ದೇಶಕ್ಕೆ ಎಂದು ಸ್ಪಷ್ಟಪಡಿಸಿ ಎಂದು ಆಗ್ರಹಿಸಿದರು.







