ಡಿಕೆಶಿ ಎದುರೇ 'ಸಿದ್ದರಾಮಯ್ಯ ಮುಂದಿನ ಸಿಎಂ' ಎಂದು ಘೋಷಣೆ ಕೂಗಿದ ಬೆಂಬಲಿಗರು

ಚಾಮರಾಜನಗರ: ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಯಾರೆಂಬ ಕಿತ್ತಾಟ ಬಗೆಹರಿಯುವುದಿಲ್ಲ ಎಂಬಂತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಬೆಂಬಲಿಗರ 'ಮುಖ್ಯಮಂತ್ರಿ ಘೋಷಣೆ' ಸದ್ಯಕ್ಕೆ ನಿಲ್ಲುವಂತೆ ಕಾಣುತ್ತಿಲ್ಲ.
ರವಿವಾರ ಚಾಮರಾಜನಗರದಲ್ಲಿ ಮೇಕೆದಾಟು ಪಾದಯಾತ್ರೆ ಕುರಿತ ಪೂರ್ವಭಾವಿ ಸಭೆಗೆ ಚಾಲನೆ ನೀಡಲು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶ್ರೀ ಚಾಮರಾಜೇಶ್ವರ ದೇವಸ್ಥಾನಕ್ಕೆ ಆಗಮಿಸಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬೆಂಬಲಿಗರು ''ಬಾಸ್ ಬಾಸ್ ಸಿದ್ದು ಬಾಸ್.. ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ, ಹುಲಿಯಾ ಸಿದ್ದರಾಮಯ್ಯ ಎಂದು ಅವರ ಅಭಿಮಾನಿಗಳು ಜೈಕಾರ ಹಾಕಿದ್ದಾರೆ.ದೇವಾಲಯ ಹೊರಗೆ ಮತ್ತು ಒಳಗೆ ಸಿದ್ದರಾಮಯ್ಯ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿ ದೇವಾಲಯ ಪ್ರಾಂಗಣದಲ್ಲೇ ಬಾಸ್ ಬಾಸ್ ಸಿದ್ದು ಬಾಸ್, ಮುಂದಿನ ಸಿಎಂ ಸಿದ್ದರಾಮಯ್ಯ ಅವರಿಗೆ ಜೈ, ಹುಲಿಯಾ ಸಿದ್ದರಾಮಯ್ಯ'' ಎಂದು ಘೋಷಣೆಗಳನ್ನು ಕೂಗಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆಶಿವಕುಮಾರ್ ಎದುರೇ ಸಿದ್ದರಾಮಯ್ಯ ಪರ ಬೆಂಬಲಿಗರ ಘೋಷಣೆ ಡಿಕೆಶಿ ದೇವಾಲಯ ಪ್ರದಕ್ಷಿಣೆ ಮಾಡುವಾಗಲೂ ಸಿದ್ದರಾಮಯ್ಯ ಅವರ ಅಭಿಮಾನಿಗಳು ನೃತ್ಯ ಮಾಡಿ ಸಿದ್ದರಾಮಯ್ಯಗೆ ಜೈಕಾರ ಹಾಕಿದ್ದಲ್ಲದೇ, ಮುಂದಿನ ಸಿಎಂ ಎಂದು ಕೂಗಿದರು.
ಸಿದ್ದರಾಮಯ್ಯ ಅವರು ಸಿಎಂ ಆಗಬೇಕೆಂದೇ ಪೂಜೆ ಸಲ್ಲಿಸಬೇಕೆಂದು ಅಭಿಮಾನಿಗಳು ಒತ್ತಾಯಿಸಿದ ಘಟನೆಯೂ ನಡೆಯಿತು.








