ಮಂಗಳೂರು: ಪವಿತ್ರ ಪರಮ ಪ್ರಸಾದ ಮೆರವಣಿಗೆ
ಮಂಗಳೂರು: ಮಂಗಳೂರು ಕ್ರೈಸ್ತ ಧರ್ಮಪ್ರಾಂತದ ವಾರ್ಷಿಕ ಪವಿತ್ರ ಪರಮ ಪ್ರಸಾದದೊಂದಿಗೆ ರವಿವಾರ ನಗರದಲ್ಲಿ ಮೆರವಣಿಗೆ ನಡೆಯಿತು.
ಹಂಪನಕಟ್ಟೆಯ ಮಿಲಾಗ್ರಿಸ್ ಚರ್ಚಿನಲ್ಲಿ ನಡೆದ ವಿಶೇಷ ಬಲಿಪೂಜೆಯ ನೇತೃತ್ವವನ್ನು ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನಾ ವಹಿಸಿದ್ದರು. ಮಂಗಳೂರಿನ ಪ್ರಮುಖ ಚರ್ಚಿನ ಧರ್ಮಗುರುಗಳು ಜೊತೆಗೂಡಿದರು.
ಬಳಿಕ ಪವಿತ್ರ ಪರಮ ಪ್ರಸಾದದ ಮೆರವಣಿಗೆಯು ಮಿಲಾಗ್ರಿಸ್ ಚರ್ಚಿನಿಂದ ಹಂಪನಕಟ್ಟೆ ಸರ್ಕಲ್, ಎ.ಬಿ. ಶೆಟ್ಟಿ ಸರ್ಕಲ್ ಮೂಲಕ ರೊಸಾರಿಯೋ ಕೆಥೆಡ್ರಲ್ ಕಡೆಗೆ ಸಾಗಿತು.
ಕೋವಿಡ್ನಿಂದಾಗಿ ಸತತ ಎರಡು ವರ್ಷ ವಾರ್ಷಿಕ ಮೆರವಣಿಗೆ ನಡೆದಿರಲಿಲ್ಲ. ಈ ಬಾರಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಾ ಸಾವಿರಾರು ಸಂಖ್ಯೆಯ ಕ್ರೈಸ್ತರ ಸಹಿತ ಧರ್ಮಗುರುಗಳು, ಭಗಿನಿಯರು ಮೆರವಣಿಗೆಯಲ್ಲಿ ಸಾಗಿದರು.
ವಿಶೇಷ ಅಲಂಕೃತ ವಾಹನದಲ್ಲಿ ಪವಿತ್ರ ಪರಮ ಪ್ರಸಾದವನ್ನು ಹಿಡಿದುಕೊಂಡು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ ಮೆರವಣಿಗೆಗೆ ನೇತೃತ್ವ ನೀಡಿದ್ದರು.
ಪವಿತ್ರ ಪರಮ ಪ್ರಸಾದ ಮೆರವಣಿಗೆಯು ರೊಸಾರಿಯೋ ಕೆಥೆಡ್ರಲ್ ತಲುಪಿದ ಬಳಿಕ ವಿಶೇಷ ಆರಾಧನೆ ನಡೆಯಿತು. ನಂತರ ಧರ್ಮಪ್ರಾಂತದ ಬೈಬಲ್ ಆಯೋಗದ ನಿರ್ದೇಶಕ ಮತ್ತು ಮಂಗಳ ಜ್ಯೋತಿಯ ಸಹಾಯಕ ನಿರ್ದೇಶಕ ಡಾ.ವಿನ್ಸೆಂಟ್ ಸಿಕ್ವೇರಾ ಪ್ರವಚನ ನೀಡಿದರು. ಮಂಗಳ ಜ್ಯೋತಿಯ ಸಂಚಾಲಕ ಫಾ. ವಿಜಯ್ ಮಾಚದೊ ಕಾರ್ಯಕ್ರಮ ನಡೆಸಿಕೊಟ್ಟರು.