ನಾಡಿನ ಐತಿಹಾಸಿಕ ಸ್ಥಳಗಳ ಮಹತ್ವ ಸಾರುವ ಗ್ರಂಥ ಸರಣಿ ಪ್ರಕಟನೆಗೆ ಯೋಜನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಧಾರವಾಡ, ಜ. 2: ಚಾರಿತ್ರಿಕ ಹಾಗೂ ಸಾಂಸ್ಕೃತಿಕವಾಗಿ ಮಹತ್ವ ಪಡೆದಿರುವ ಧಾರವಾಡ ಸೇರಿದಂತೆ ನಾಡಿನ ಪ್ರಮುಖ ಸ್ಥಳಗಳ ಕುರಿತು ಗ್ರಂಥಗಳ ಸರಣಿ ಪ್ರಕಟಿಸುವ ಯೋಜನೆಯನ್ನು ರೂಪಿಸಿ ಮುಂಬರುವ ಆಯವ್ಯಯದಲ್ಲಿ ಹಣ ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರವಿವಾರ ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ನಾಡೋಜ ಪಾಟೀಲ ಪುಟ್ಟಪ್ಪ ಸಭಾಂಗಣದಲ್ಲಿ ಚನ್ನವೀರಗೌಡ ಅಣ್ಣಾ ಪಾಟೀಲ ಸಂಸ್ಮರಣಾ ದತ್ತಿ ಹಾಗೂ ಟ್ರಸ್ಟ್ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಇತಿಹಾಸವನ್ನು ಅರಿಯದವರು ಇತಿಹಾಸ ಸೃಷ್ಟಿಸಲಾರರು. ಸರಕಾರದ ವತಿಯಿಂದಲೇ ನಾಡಿನ ಐತಿಹಾಸಿಕ ಸ್ಥಳಗಳ ಗ್ರಂಥಗಳನ್ನು ಪ್ರಕಟಿಸುವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗುವುದು.ಧಾರವಾಡದ ಚರಿತ್ರೆ ದಾಖಲಿಸುವ ಕಾರ್ಯದ ಜವಾಬ್ದಾರಿಯನ್ನು ವಿದ್ಯಾವರ್ಧಕ ಸಂಘಕ್ಕೆ ವಹಿಸಲಾಗುವುದು. ಕಸಾಪ ಸೇರಿದಂತೆ ಕನ್ನಡದ ಹಲವು ಸಂಸ್ಥೆಗಳ ಸ್ಥಾಪನೆ, ಕರ್ನಾಟಕ ರಾಜ್ಯ ರಚನೆಗೆ ಕಾರಣವಾದ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಮಹತ್ವದ ಸ್ಥಾನವಿದೆ. ವಿಶಿಷ್ಠ ಅಂತರ್ಗತ ಶಕ್ತಿ ಇದೆ. ಸಂಘಕ್ಕೆ ಅಗತ್ಯವಿರುವ ಅನುದಾನ, ನಿವೇಶನ ಮತ್ತಿತರ ಬೇಡಿಕೆಗಳಿಗೆ ಸರಕಾರ ಸಕಾರಾತ್ಮವಾಗಿ ಬೆಂಬಲಿಸಲಿದೆ ಎಂದರು.
ನಾಡೋಜ ಪಾಟೀಲ ಪುಟ್ಟಪ್ಪನವರು ಸುಮಾರು 52 ವರ್ಷಗಳ ಕಾಲ ಸುದೀರ್ಘ ಅವಧಿಗೆ ಅಧ್ಯಕ್ಷರಾಗಿ ಹೋರಾಟ ಮಾಡಿದ್ದಾರೆ. ಅವರ ಸಾಧನೆಯನ್ನು ಗೌರವಿಸಲು ಸರಕಾರ ರಾಣೆಬೆನ್ನೂರು ತಾಲೂಕಿನ ಹಲಗೇರಿಯಲ್ಲಿ ಸ್ಮಾರಕ ನಿರ್ಮಿಸಲಿದೆ. ಹಿರಿಯರನ್ನು ಸ್ಮರಿಸುವುದು ಸ್ಫೂರ್ತಿದಾಯಕವಾಗಿರುತ್ತದೆ. ಬ್ರಿಟಿಷರ ಆಳ್ವಿಕೆಯ ಕಾಲದಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಚನ್ನವೀರಗೌಡ ಅಣ್ಣಾ ಪಾಟೀಲ ಅವರು ಧಾರವಾಡಕ್ಕೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಲಿಂಗಾಯತ ಟೌನ್ಹಾಲ್, ವೀರಶೈವ ಮಹಾಸಭೆ, ಕೆಸಿಸಿ ಬ್ಯಾಂಕ್ ಸ್ಥಾಪನೆ, ಎನ್ಎಚ್-4 ನಿರ್ಮಾಣ ಸೇರಿದಂತೆ ಹಲವು ಮಹತ್ವದ ಚಾರಿತ್ರಿಕ ಕಾರ್ಯಗಳನ್ನು ಅವರು ನಿರ್ವಹಿಸಿದ್ದಾರೆ. ಇತಿಹಾಸವನ್ನು ತಿರುಚುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗುತ್ತಿದೆ ಇದು ಸರಿಯಲ್ಲ. ಸತ್ಯವನ್ನು ವಸ್ತುನಿಷ್ಠವಾಗಿ ದಾಖಲಿಸಬೇಕು ಎಂದರು.
ಹುಬ್ಬಳ್ಳಿ-ಧಾರವಾಡ ಸಮಗ್ರ ಅಭಿವೃದ್ಧಿಗೆ ಸರಕಾರ ವಿಶೇಷ ಗಮನ ನೀಡಲಿದೆ. ಚೆನ್ನೈ, ಮುಂಬೈ ಕೈಗಾರಿಕಾ ಕಾರಿಡಾರಿನಲ್ಲಿ ಧಾರವಾಡ ಪ್ರಮುಖ ಕೈಗಾರಿಕಾ ಪ್ರದೇಶವಾಗಿ ಅಭಿವೃದ್ಧಿ ಹೊಂದುತ್ತಿದೆ. ಹುಬ್ಬಳ್ಳಿ ಧಾರವಾಡ ಬೆಳಗಾವಿ ನೇರ ರೈಲು ಮಾರ್ಗ ನಿರ್ಮಾಣಕ್ಕೆ 849 ಕೋಟಿ ರೂ.ನೀಡಲು ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ವಿಧಾನ ಮಂಡಲ ಅಧಿವೇಶನ ಸಂದರ್ಭದಲ್ಲಿ ಅನುಮೋದನೆ ನೀಡಲಾಗಿದೆ. ಧಾರವಾಡದ ಮನೆ ಮಗನಾದ ನಾನು ತವರಿಗೆ ಹೂವು ತರುತ್ತೇನೆ, ಹೊರತು ಹುಲ್ಲನ್ನಲ್ಲ ಎಂದು ಮಾರ್ಮಿಕವಾಗಿ ಹೇಳಿದ ಮುಖ್ಯಮಂತ್ರಿ, ಇಲ್ಲಿನ ಜನರ ಪ್ರೀತಿ, ವಿಶ್ವಾಸಕ್ಕೆ ತಕ್ಕಂತೆ ನಡೆದುಕೊಳ್ಳುವೆ ಎಂದರು.
ಗ್ರಂಥ ಬಿಡುಗಡೆ ಮಾಡಿದ ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, ಸರಳವಾಗಿ ಎಲ್ಲರೊಂದಿಗೆ ಬೆರೆಯುವ ಮುಖ್ಯಮಂತ್ರಿ ಬಬಸವರಾಜ ಬೊಮ್ಮಾಯಿ ನಾಡಿಗೆ ಮಾದರಿಯಾಗುವ ನಡೆ ಅನುಸರಿಸುತ್ತಿದ್ದಾರೆ. ಅವರ ತೀರ್ಮಾನಗಳು ಜನಮಾನಸದಲ್ಲಿ ಉಳಿಯುವ ರೀತಿಯಲ್ಲಿವೆ. ಧಾರವಾಡ ಬೈಪಾಸ್ನಿಂದ ಗಬ್ಬೂರ ರಸ್ತೆ ಅಗಲೀಕರಣಕ್ಕೆ ಸಿಎಂ ಅನುಮೋದನೆ ನೀಡಿದ್ದಾರೆ. ದತ್ತಿದಾನಿಗಳ ಪರವಾಗಿ ಮಹಾ ನಗರ ಪಾಲಿಕೆ ಮಾಜಿ ಸದಸ್ಯ ಸಿ.ಎಸ್.ಪಾಟೀಲ್ ಮಾತನಾಡಿ, ಬ್ರಿಟಿμï ಸರಕಾರದಲ್ಲಿ ಇಂಜಿನಿಯರ್ ಆಗಿದ್ದ ಚನ್ನವೀರಗೌಡ ಅಣ್ಣಾ ಪಾಟೀಲ ಸಾಧನೆ ಹಿರಿಯದಾಗಿದ್ದರೂ ಇನ್ನೂ ಸಾಕಷ್ಟು ಬೆಳಕಿಗೆ ಬರಬೇಕಾಗಿದೆ ಎಂದರು.
ಗ್ರಂಥ ಪರಿಚಯಿಸಿದ ಶಶಿಧರ ತೋಡಕರ್, ಧಾರವಾಡದ ಚಾರಿತ್ರಿಕ ವ್ಯಕ್ತಿ ಚನ್ನವೀರಗೌಡ ಅಣ್ಣಾ ಪಾಟೀಲರು ಸರ್ಕಾರಿ ಇಂಜಿನಿಯರ್ ವೃತ್ತಿಯ ಜೊತೆಗೆ ಸಮಾಜಕ್ಕಾಗಿ ಮಹತ್ವದ ಕಾರ್ಯಗಳನ್ನು ಮಾಡಿದ್ದಾರೆ.ಪಿಬಿ ರಸ್ತೆ ನಿರ್ಮಾಣ,ಕೆಸಿಸಿ ಬ್ಯಾಂಕ್, ಎಲ್ಇಎ ಸ್ಥಾಪನೆಯಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದರು. ಕೃಷಿ ವಿವಿ ಸ್ಥಾಪನೆಗೆ ಜಮೀನು ನೀಡಿದ ಕೊಡುಗೆಯೂ ಅಮೂಲ್ಯ ಎಂದರು. ದೇವರ ಹುಬ್ಬಳ್ಳಿ ಸಿದ್ಧಾರೂಢಮಠದ ಶಿವಸಿದ್ಧ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು.
ಕವಿವ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಾಜಿ ಸಚಿವ ಶಶಿಕಾಂತ ನಾಯ್ಕ, ಮಾಜಿ ಶಾಸಕ ಎ.ಬಿ. ದೇಸಾಯಿ, ಗ್ರಂಥಕರ್ತೃ ಮಲ್ಲಿಕಾರ್ಜುನ ಪಾಟೀಲ್, ಶಶಿಧರ ತೋಡಕರ್, ರೇಖಾ ಶೆಟ್ಟರ್, ಬಿ.ವೈ. ಬಂಡಿವಡ್ಡರ, ಚಂದ್ರಗೌಡ ಎಸ್.ಪಾಟೀಲ್ ಡಾ.ಅರವಿಂದ ಯಾಳಗಿ, ರಾಜು ಪಾಟೀಲ್ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.






.jpeg)


