ದನ ಕಳ್ಳತನದ ಸುಳ್ಳು ಆರೋಪದಲ್ಲಿ ನಕಲಿ ಎನ್ಕೌಂಟರ್ಗೆ ಯತ್ನ: ಗಂಗೊಳ್ಳಿ ಪೊಲೀಸರ ವಿರುದ್ಧ ಮುಹಮ್ಮದ್ ಇಬ್ರಾಹಿಂ ಆರೋಪ
![ದನ ಕಳ್ಳತನದ ಸುಳ್ಳು ಆರೋಪದಲ್ಲಿ ನಕಲಿ ಎನ್ಕೌಂಟರ್ಗೆ ಯತ್ನ: ಗಂಗೊಳ್ಳಿ ಪೊಲೀಸರ ವಿರುದ್ಧ ಮುಹಮ್ಮದ್ ಇಬ್ರಾಹಿಂ ಆರೋಪ ದನ ಕಳ್ಳತನದ ಸುಳ್ಳು ಆರೋಪದಲ್ಲಿ ನಕಲಿ ಎನ್ಕೌಂಟರ್ಗೆ ಯತ್ನ: ಗಂಗೊಳ್ಳಿ ಪೊಲೀಸರ ವಿರುದ್ಧ ಮುಹಮ್ಮದ್ ಇಬ್ರಾಹಿಂ ಆರೋಪ](https://www.varthabharati.in/sites/default/files/images/articles/2022/01/2/319951-1641138595.jpg)
ಕುಂದಾಪುರ, ಜ.2: ದನ ಕಳ್ಳನತ ಸುಳ್ಳು ಆರೋಪ ಹೊರಿಸಿ ನನ್ನ ವಿರುದ್ಧ ಪ್ರಕರಣ ದಾಖಲಿಸಿರುವ ಮತ್ತು ನನ್ನನ್ನು ನಕಲಿ ಎನ್ಕೌಂಟರ್ ಮಾಡಿ ಕೊಲೆ ನಡೆಸಲು ಪ್ರಯತ್ನಿಸಿದ ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್ಸೈ ನಂಜ ನಾಯ್ಕ ಹಾಗೂ ಸಿಬ್ಬಂದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗಂಗೊಳ್ಳಿ ನಿವಾಸಿ ಮುಹಮ್ಮದ್ ಇಬ್ರಾಹಿಂ ಆಗ್ರಹಿಸಿದ್ದಾರೆ.
ಕುಂದಾಪುರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 26ರಂದು ಸಂಜೆ 6 ಗಂಟೆ ಸುಮಾರಿಗೆ ನನ್ನ ಮನೆಯ ಬಳಿ ಎಸ್ಸೈ ನಂಜನಾಯ್ಕ ಹಾಗೂ ನಾಲ್ಕೈದು ಸಿಬ್ಬಂದಿ ಬಂದಿದ್ದು, ಮನೆಯಂಗಳದಲ್ಲಿ ಕಟ್ಟಿದ್ದ ದನದ ಕರು ಬಗ್ಗೆ ಪ್ರಶ್ನಿಸಿದರು. ನನ್ನ ಗೆಳೆಯ ಫ್ರಾನ್ಸಿಸ್ ನನಗೆ ನೀಡಿರುವ ಈ ಕರುವನ್ನು ಸಾಕಲು ತಂದಿದ್ದೇನೆ ಎಂದು ಪೊಲೀಸರಿಗೆ ತಿಳಿಸಿದೆ. ಬಳಿಕ ಆ ಕರುವಿನ ಜೊತೆ ನನ್ನ ಫೋಟೋವನ್ನು ತೆಗೆದು ಅವರು ಮರಳಿದರು ಎಂದು ತಿಳಿಸಿದರು.
ಬಳಿಕ ಏಳು ಗಂಟೆ ಸುಮಾರಿಗೆ ನನ್ನನ್ನು ಠಾಣೆಗೆ ಕರೆಸಿ, ಧರ್ಮ ನಿಂಧನೆ ಮಾಡಿ, ಅವಾಚ್ಯ ಶಬ್ದಗಳಿಂದ ಬೈದರು. ನನಗೆ ಕರು ನೀಡಿದ ಫ್ರಾನ್ಸಿಸ್ನನ್ನು ಕೂಡ ಠಾಣೆಗೆ ಕರೆಸಿದರು. ಈ ಕರು ಸಾಕಲು ಕಷ್ಟವಾಗುವ ಕಾರಣ ಇಬ್ರಾಹಿಂಗೆ ನಾನೇ ಉಚಿತವಾಗಿ ನೀಡಿದ್ದೇನೆ ಎಂದು ಫ್ರಾನ್ಸಿಸ್ ಹೇಳಿದರೂ ಅವರ ಮಾತನ್ನು ಕೇಳಲು ಸಿದ್ದರಿಲ್ಲದ ಪೊಲೀಸರು, ನಮ್ಮಿಬ್ಬರನ್ನು ಠಾಣೆಯಲ್ಲಿ ಕೂರಿಸಿದರು ಎಂದು ಅವರು ಹೇಳಿದರು.
ರಾತ್ರಿ 11 ಗಂಟೆ ವೇಳೆ ನನ್ನ ಮನೆಗೆ ಪೊಲೀಸರು ಹೋಗಿ ಬಾಗಿಲು ಬಡಿದು ಹೆದರಿಸಿ ಅಲ್ಲಿದ್ದ ಕರುವನ್ನು ಗಾಡಿಯಲ್ಲಿ ಹಾಕಿ ಠಾಣೆಗೆ ತಂದರು ಮತ್ತು ಫ್ರಾನ್ಸಿಸ್ ಅವರನ್ನು ಮನೆಗೆ ಕಳುಹಿಸಿ ನನ್ನನ್ನು ರಾತ್ರಿ ಇಡೀ ಠಾಣೆಯಲ್ಲೇ ಕೂರಿಸಿದರು. ಮರುದಿನ ಅಂದರೆ ಡಿ.27ರಂದು ಬೆಳಗ್ಗೆ 7.45ರ ಸುಮಾರಿಗೆ ನನ್ನನ್ನು ಜೀಪಿನಲ್ಲಿ ಕುಳ್ಳಿರಿಸಿ ಮಂಕಿ ಕ್ರಾಸ್ ಬಳಿ ಕರೆದುಕೊಂಡು ಹೋದರು. ಅಲ್ಲಿ ನನಗೆ ಜೀಪಿನಿಂದ ಇಳಿದು ಓಡಲು ಸೂಚಿಸಿದರು. ಅವಾಚ್ಯವಾಗಿ ಬೈದು ರಿವಾಲ್ವರನ್ನು ನನ್ನ ತಲೆಗೆ ಇಟ್ಟು ಓಡುವಂತೆ ಗದರಿಸಿದರು. ಆದರೆ ನಾನು ಓಡಿಲ್ಲ ಎಂದು ಅವರು ಆರೋಪಿಸಿದರು.
ಅಲ್ಲಿಂದ ಮುಂದೆ ಕರೆದುಕೊಂಡು ಹೋಗಿ ಅಲ್ಲಿಗೆ ಫ್ರಾನ್ಸಿಸ್ನನ್ನು ಠಾಣೆಯಲ್ಲಿದ್ದ ಕರುವನ್ನು ಹಿಡಿದುಕೊಂಡು ಬರುವಂತೆ ಪೊಲೀಸರು ತಿಳಿಸಿದರು. ಫ್ರಾನ್ಸಿಸ್ ಕರುವಿನೊಂದಿಗೆ ಅಲ್ಲಿಗೆ ಬಂದಂತಹ ಸಂದರ್ಭದಲ್ಲಿ ಪೊಲೀಸರು ಇಬ್ಬರು ಬಜರಂಗದಳದ ಕಾರ್ಯಕರ್ತರನ್ನು ಕೂಡ ಅಲ್ಲಿಗೆ ಕರೆಸಿದರು. ಅವರು ಚೀಲದಲ್ಲಿ ತಂದಿದ್ದ ಮಚ್ಚು ತಲವಾರು ಹಾಗೂ ಇನ್ನಿತರ ಆಯುಧಗಳನ್ನು ಅಲ್ಲಿ ಹಾಕಿ ಫೋಟೋವನ್ನು ಕ್ಲಿಕ್ಕಿಸಿ ನಾನು ಆ ಕರುವನ್ನು ಕದ್ದು ತಂದಿದ್ದೇನೆ ಎಂಬ ರೀತಿಯಲ್ಲಿ ಬಿಂಬಿಸಲಾಯಿತು. ಬಳಿಕ ಸ್ಥಳ ಮಹಜರು ಮಾಡಿ ನನ್ನನ್ನು ಠಾಣೆಗೆ ಕರೆದುಕೊಂಡು ಹೋಗಿ, ಸಂಜೆ ನ್ಯಾಯಾಧೀಶರ ಮುಂದೆ ಹಾಜರು ಪಡೆಸಿದರು. ಇದೀಗ ನಾನು ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಿಡುಗಡೆ ಹೊಂದಿದ್ದೇನೆ ಎಂದು ಅವರು ವಿವರಿಸಿದರು.