‘ಉದ್ಯಮಿಯಾಗು ಉದ್ಯೋಗ ನೀಡು' ಜ.3ರಂದು ಕೈಗಾರಿಕಾ ಅದಾಲತ್: ಸಚಿವ ಮುರುಗೇಶ್ ನಿರಾಣಿ ಚಾಲನೆ

ಬೆಂಗಳೂರು, ಜ. 2: ವಿದ್ಯಾವಂತ ಯುವಕರಿಗೆ ಸ್ಥಳದಲ್ಲೇ ಉದ್ಯೋಗ ಹಾಗೂ ಉದ್ಯಮ ಆರಂಭಿಸುವವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಬಹುನಿರೀಕ್ಷಿತ ‘ಉದ್ಯಮಿಯಾಗು ಉದ್ಯೋಗ ನೀಡು' ಹಾಗೂ ಕೈಗಾರಿಕಾ ಅದಾಲತ್ ಕಾರ್ಯಕ್ರಮಕ್ಕೆ ನಾಳೆ(ಜ.3) ಕಲಬುರಗಿಯ ಗುಲ್ಬರ್ಗ ವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮ ನಡೆಯುವ ವೇದಿಕೆಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಪುನೀತ್ ಕೇವಲ ಚಿತ್ರನಟರಂಗಕ್ಕೆ ತಮ್ಮನ್ನು ಗುರುತಿಸಿಕೊಳ್ಳದೆ ಅವರೊಬ್ಬ ಯಶಸ್ವಿ ಉದ್ಯಮಿಯೂ ಹೌದು. ತಮ್ಮ ಸಂಸ್ಥೆಗಳಲ್ಲಿ ನೂರಾರು ಜನರಿಗೆ ಉದ್ಯೋಗ ನೀಡುವ ಮೂಲಕ ಉದ್ಯೋಗದಾತರೂ ಆಗಿದ್ದರು. ಈಗಾಗಲೇ ಕರ್ನಾಟಕ ಸರಕಾರ ಪುನೀತ್ ಸ್ಮರಣಾರ್ಥವಾಗಿ ಅವರಿಗೆ ಪ್ರತಿಶಿಷ್ಟ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೋಷಿಸಿದೆ ಎಂದು ನಿರಾಣಿ ತಿಳಿಸಿದ್ದಾರೆ.
ಯುವಕರನ್ನು ಉದ್ಯಮದತ್ತ ಆಕರ್ಷಿಸಲು ಮುಂದಾಗಿರುವ ಸಚಿವ ಮುರುಗೇಶ್ ನಿರಾಣಿ ಮುಂದೆ ನಡೆಯಲಿರುವ ಉದ್ಯಮಿಯಾಗು ಉದ್ಯೋಗ ನೀಡು ಕಾರ್ಯಕ್ರಮದ ವೇದಿಕೆಗೆ ಅವರ ಹೆಸರನ್ನು ನಾಮಕರಣ ಮಾಡಲು ತೀರ್ಮಾನಿಸಿದ್ದಾರೆ. ಕಲಬುರಗಿ ಜನತೆಯ ಜೊತೆ ಪುನೀತ್ ಅವಿನಾಭಾವ ಸಂಬಂಧ ಹೊಂದಿದ್ದರು. ಅನೇಕ ಸಂದರ್ಭಗಳಲ್ಲಿ ಇಲ್ಲಿಗೆ ಬಂದಾಗ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುತ್ತಿದ್ದರು. ಅವರ ಹೆಸರನ್ನು ಅಜಾರಾಮರಗೊಳಿಸಲು ಮುಂದಾಗಿದ್ದು, ನಾಳೆ ನಡೆಯುವ ಕಾರ್ಯಕ್ರಮದ ವೇದಿಕೆಗೆ ಅವರ ಹೆಸರನ್ನೇ ನಾಮಕರಣ ಮಾಡಿರುವುದು ವಿಶೇಷವಾಗಿದೆ ಎಂದು ತಿಳಿಸಿದ್ದಾರೆ.
ನಾಳೆ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿರುವ ಈ ವಿಶೇಷ ಕಾರ್ಯಕ್ರಮಕ್ಕೆ ಈಗಾಗಲೇ ಎಲ್ಲ ಸಿದ್ದತೆಗಳನ್ನು ಕೈಗೊಳ್ಳಲಾಗಿದ್ದು, ಕಲ್ಯಾಣ ಕರ್ನಾಟಕದ ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಮತ್ತು ಬೀದರ್ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳು ಭಾಗವಹಿಸಲಿದ್ದಾರೆ. ಹೊರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ
ವಿದ್ಯಾರ್ಥಿಗಳು ಬಂದಲ್ಲಿ ಮುಂಜಾಗ್ರತವಾಗಿ ಭವನದ ಹೊರಗಡೆಯೂ ವೀಕ್ಷಣೆಗೆ ಸ್ಕ್ರೀನ್ ಅಳವಡಿಸಲಾಗುತ್ತಿದೆ ಎಂದು ತಿಳಿಸಲಾಗಿದೆ.
ಎರಡು ದಿನಗಳ ಕಾಲ ಕಲಬುರಗಿ ಪ್ರವಾಸ ನಡೆಸಲಿರುವ ಜಿಲ್ಲಾ ನಿಯೋಜಿತ ಉಸ್ತುವಾರಿ ಸಚಿವರಾಗಿರುವ ಮುರುಗೇಶ್ ನಿರಾಣಿ ಜ.3ರ ಸೋಮವಾರ ಸಂಜೆ 6 ಗಂಟೆಗೆ 36ನೆ ರಾಜ್ಯ ಪತ್ರಕರ್ತರ ಸಮ್ಮೇಳನದ ಅಂಗವಾಗಿ ಏರ್ಪಡಿಸಿರುವ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗುವರು. ಕಾರ್ಯಕ್ರಮ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ನಡೆಯಲಿದೆ.
ಜ.4ರ ಬೆಳಗ್ಗೆ 11ಗಂಟೆಗೆ 36ನೆ ಪತ್ರಕರ್ತರ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದು, ಅಂದು 11.45ಕ್ಕೆ ಕಲಬುರಗಿಯ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿರುವ ಡಿಸಿಸಿ ಬ್ಯಾಂಕ್ ಅಡಿಗಲ್ಲು ಸಮಾರಂಭ, ಎಟಿಎಂ ವ್ಯಾನ್ ಉದ್ಘಾಟನೆ ಮತ್ತು 300 ಸಹಕಾರ ಸಂಘಗಳಿಗೆ ಎಟಿಎಂ ಯಂತ್ರಗಳ ವಿತರಣಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಜೊತೆಗೆ ಅಳಂದ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ತಾಲೂಕು ಆಡಳಿತ ಭವನ ಕಟ್ಟಡ ಉದ್ಘಾಟನೆಯ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಿರಾಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







