ಮೇಕೆದಾಟು ಯೋಜನೆ ಮೈಸೂರು- ಬೆಂಗಳೂರು ಜನತೆಯ ಹಕ್ಕು: ಡಿ.ಕೆ.ಶಿವಕುಮಾರ್

ಮೈಸೂರು, ಜ.3: ರಾಜ್ಯದ ಹಿತ, ಕುಡಿಯುವ ನೀರು, ಕಾವೇರಿ ಜಲಾನಯನ ಪ್ರದೇಶದ ರೈತರಿಗಾಗಿ ನಾವು ಮೇಕೆದಾಟು ಹೋರಾಟ ಮಾಡುತ್ತಿದ್ದೇವೆ. ಈ ಯೋಜನೆ ಮೈಸೂರು ಹಾಗೂ ಬೆಂಗಳೂರು ಜನತೆಯ ಹಕ್ಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಂದು ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.
ಮೇಕೆದಾಟು ಪಾದಯಾತ್ರೆಗೆ ಕೋವಿಡ್ ಮಾರ್ಗಸೂಚಿ ಅಡ್ಡಿಯಾದೀತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಎಲ್.ಕೆ.ಅಡ್ವಾಣಿ ರಥಯಾತ್ರೆ ಮಾಡಿದರು. ಈ ಹಿಂದೆ ದೇವೇಗೌಡರು ಅನೇಕ ಯಾತ್ರೆ ಮಾಡಿದ್ದಾರೆ. ಅದನ್ನೆಲ್ಲ ನೀವು ಏನೆಂದು ಕರೆಯುತ್ತೀರಿ. ಕುಮಾರಸ್ವಾಮಿ ಹೋರಾಟ ಮಾಡುವುದಾಗಿ ಹೇಳಿದ್ದರು. ಅದಕ್ಕೆ ಏನನ್ನುತ್ತೀರಿ? ಯಡಿಯೂರಪ್ಪ ಹೋರಾಟ ಮಾಡಿದ್ದರು, ಮೊನ್ನೆ ನೂತನ ಕೇಂದ್ರ ಸಚಿವರು ಕೋವಿಡ್ ಸಮಯದಲ್ಲೇ ಯಾತ್ರೆ ಮಾಡಿದರು. ಅದಕ್ಕೆ ಅವಕಾಶ ಇತ್ತೇ? ಇದೆಲ್ಲವನ್ನು ನಿಮ್ಮ ವಿವೇಚನೆಗೆ ಬಿಡುತ್ತೇವೆ ಎಂದರು.
ಯಾವುದೇ ಶುಭ ಕಾರ್ಯಕ್ರಮ ಮಾಡುವ ಮುನ್ನ ದೇವಿಯ ಪ್ರಾರ್ಥನೆ ಮಾಡುವುದು ಸಂಪ್ರದಾಯ. ಎಲ್ಲ ಅಡಚಣೆಗಳನ್ನು ಸಂಹಾರ ಮಾಡುವ ಶಕ್ತಿ ಈ ದೇವಿಗೆ ಇದೆ. ತಾಯಿ ಚಾಮುಂಡೇಶ್ವರಿಯನ್ನು ನಂಬಿರುವವರು ನಾವು. ಈ ಹಿನ್ನೆಲೆಯಲ್ಲಿ ಇಂದಿಲ್ಲಿ ಪೂಜೆ ಸಲ್ಲಿಸಿದ್ದೇನೆ ಎಂದರು.
ಚಾಮರಾಜನಗರ ನಗರ ಕೂಡ ಮೈಸೂರು ಜಿಲ್ಲೆ ಭಾಗ. ಮತ್ತೊಂದು ರಾಮನಗರ ಬೆಂಗಳೂರಿನ ಒಂದು ಭಾಗ. ಮೇಕೆದಾಟು ಒಂದು ದಡ ಮೈಸೂರು ಜಿಲ್ಲೆಯಾದರೆ, ಮತ್ತೊಂದು ದಡ ಬೆಂಗಳೂರಿಗೆ ಸೇರಿದೆ. ಅದರ ಮಧ್ಯೆ ಕಾವೇರಿ ತಾಯಿ ಹರಿಯುತ್ತಿದ್ದಾಳೆ. ಈ ಯೋಜನೆ ಮೈಸೂರು ಹಾಗೂ ಬೆಂಗಳೂರು ಜನತೆಯ ಹಕ್ಕು. ಮೈಸೂರು ಬೆಂಗಳೂರು ಸೇರಿಸುವ ಸ್ಥಳವೇ ಸಂಗಮ ಹಾಗೂ ಮೇಕೆದಾಟು ಎಂದರು.









