ಶೀಘ್ರದಲ್ಲೇ ಕಲುಬರುಗಿಯಲ್ಲಿ ‘ಟೆಕ್ಸ್ ಟೈಲ್ ಪಾರ್ಕ್' ಪ್ರಾರಂಭ: ಸಚಿವ ಮುರುಗೇಶ್ ನಿರಾಣಿ

ಕಲಬುರಗಿ, ಜ. 3: ‘ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರ ಕಲಬುರಗಿಯಲ್ಲಿ ಕೈಗಾರಿಕೆಗಳನ್ನು ಉತ್ತೇಜಿಸುವ ಕಾರಣಕ್ಕಾಗಿ ಶೀಘ್ರದಲ್ಲೇ ಈ ಭಾಗದಲ್ಲಿ ಜವಳಿ ಪಾರ್ಕ್(ಟೆಕ್ಸ್ಟೈಲ್) ಪ್ರಾರಂಭಿಸಲಾಗುವುದು' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಅವರು ಇಂದಿಲ್ಲಿ ಘೋಷಣೆ ಮಾಡಿದ್ದಾರೆ.
ಸೋಮವಾರ ಇಲ್ಲಿನ ಗುಲ್ಬರ್ಗಾ ವಿಶ್ವ ವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ನಡೆದ ‘ಉದ್ಯಮಿಯಾಗು, ಉದ್ಯೋಗ ನೀಡು' ಹಾಗೂ ಕೈಗಾರಿಕಾ ಆದಾಲತ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಈ ಸಂಬಂಧ ಕೇಂದ್ರ ಸರಕಾರದ ಜೊತೆಗೆ ಮಾತುಕತೆಯನ್ನು ನಡೆಸಲಾಗಿದ್ದು, ಕೇಂದ್ರದಿಂದ ನಮಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ, ಬೀದರ್, ಯಾದಗಿರಿ ಸೇರಿದಂತೆ ಈ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹತ್ತಿ ಬೆಳೆಯನ್ನು ಯಥೇಚ್ಚವಾಗಿ ಬೆಳೆಯುತ್ತಾರೆ. ಇಲ್ಲಿ ಜವಳಿ ಪಾರ್ಕ್ ಪ್ರಾರಂಭವಾದರೆ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಜವಳಿ ಪಾರ್ಕ್ನಲ್ಲಿ ಕೈಗಾರಿಕೆ ಪ್ರಾರಂಭಿಸಲು ಬರುವ ಉದ್ಯಮಿಗಳಿಗೆ ಸರಕಾರ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲಿದೆ ಎಂದು ಅವರು ಭರವಸೆ ನೀಡಿದರು.
ಕೈಗಾರಿಕೋದ್ಯಮಿಗಳಿಗೆ ಪವನ ಹಾಗೂ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವವರಿಂದ ರಿಯಾಯ್ತಿ ದರದಲ್ಲಿ ವಿದ್ಯುತ್ ಕೊಡಿಸಲಾಗುವುದು, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದಲೇ ತರಬೇತಿ ನೀಡಿ ನುರಿತ ಕೌಶಲ್ಯ ಕಾರ್ಮಿಕರನ್ನು ಒದಗಿಸಲಿದ್ದೇವೆ.ಜವಳಿ ಪಾರ್ಕ್ ಆರಂಭವಾದರೆ ಹತ್ತಿ ನೂಲುವುದು, ಬೀಜ ತೆಗೆಯುವುದು ಹಾಗೂ ಸ್ಥಳೀಯರಿಗೆ ಉದ್ಯೋಗ ನೀಡಲು ಸಹಾಯವಾಗುತ್ತದೆ. ಟೆಕ್ಸ್ಟೈಲ್ ಪಾರ್ಕ್ ಆರಂಭಿಸಲು ಮುಂದೆ ಬರುವ ಉದ್ಯಮಿಗಳಿಗೆ ಸರಕಾರ ಅನೇಕ ರೀತಿಯ ನೆರವುಗಳನ್ನು ನೀಡಲಿದೆ ಎಂದು ಆಶ್ವಾಸನೆ ನೀಡಿದರು.
ಈ ಭಾಗವನ್ನು ಟೆಕ್ಸ್ಟೈಲ್ ಹಬ್ ಮಾಡುವುದು ನಮ್ಮ ಸರಕಾರದ ಗುರಿಯಾಗಿದೆ. ಕೈಗಾರಿಕೆಗಳನ್ನು ಪ್ರಾರಂಭಿಸಲು ಬರುವ ಉದ್ಯಮಿಗಳಿಗೆ ಅಗತ್ಯವಾದ ನೀರು, ರಸ್ತೆ, ವಿದ್ಯುತ್, ಭೂಮಿ ಎಲ್ಲವನ್ನು ಕಾಲಮಿತಿಯೊಳಗೆ ನೀಡಲಿದೆ. ಉದ್ಯಮಿಗಳು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಸಚಿವ ನಿರಾಣಿ ಇದೇ ವೇಳೆ ಮನವಿ ಮಾಡಿದರು.
ಕಲಬರುಗಿಯಲ್ಲಿ ಒಟ್ಟು 1,600 ಎಕರೆ ಜಮೀನನ್ನು ಕೈಗಾರಿಕಾ ಉದ್ದೇಶಗಳಿಗೆ ಗುರುತಿಸಲಾಗಿದೆ. ಶೀಘ್ರದಲ್ಲೇ ಇದರ ಭೂ ಸ್ವಾಧೀನ ಪ್ರಕ್ರಿಯೆಯು ಆರಂಭವಾಗಲಿದೆ. ಇದರಿಂದ ಮುಂಬರುವ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದೆ ಬರುವವರ ಸಂಖ್ಯೆ ಅಧಿಕವಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ಬಂಡವಾಳ ಹೂಡಲು ದೇಶ-ವಿದೇಶಗಳಿಂದ ದೊಡ್ಡ ಮಟ್ಟದಲ್ಲಿ ಉದ್ಯಮಿಗಳು ಆಗಮಿಸುತ್ತಾರೆ. ಆದರೆ, ನಮ್ಮವರೇ ಬಂಡವಾಳ ಹೂಡಲು ಮುಂದೆ ಬರುವುದಿಲ್ಲ ಎಂದರೆ ತುಂಬ ಬೇಸರವಾಗುತ್ತದೆ. ಈ ಭಾಗದಲ್ಲಿ ಅನೇಕರು ಆರ್ಥಿಕವಾಗಿ ಸಾಕಷ್ಟು ಪ್ರಬಲರಾಗಿದ್ದಾರೆ. ನೀವು ಉದ್ಯಮ ಆರಂಭಿಸಲು ಮುಂದೆ ಬಂದರೆ ಸರಕಾರ ನಿಮಗೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಅವರು ಅಭಯ ನೀಡಿದರು.
ರಾಜ್ಯ ಸರಕಾರ ಜಾರಿಗೆ ತಂದಿರುವ ಕೈಗಾರಿಕಾ ನೀತಿಯು ಇಡೀ ದೇಶಕ್ಕೆ ಮಾದರಿಯಾಗಿದೆ. ಇದು ಉದ್ಯಮಿಗಳಿಗೆ ಮತ್ತು ಹೊಸದಾಗಿ ಆರಂಭಿಸುವವರಿಗೆ ಎಲ್ಲ ರೀತಿಯ ಸಹಾಯ ಒದಗಿಸಲಿದೆ. ಇದಕ್ಕೂ ಮುನ್ನ ಕೆಲವು ಯಶಸ್ವಿ ಉದ್ಯಮಿಗಳು, ಪರಿಣತರು ಸೇರಿದಂತೆ ಮತ್ತಿತರರು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ಯುವ ಸಮೂಹವನ್ನು ಉದ್ಯಮದತ್ತ ಆಕರ್ಷಿಸುವುದು, ಉದ್ಯಮ ಆರಂಭಿಸುವವರಿಗೆ ಇರುವ ವಲಯಗಳು, ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೆ ತಂದಿರುವ ಯೋಜನೆಗಳು, ಬಂಡವಾಳ ಹೂಡಿಕೆ, ಬ್ಯಾಂಕ್ನಿಂದ ಸಾಲ ಸೌಲಭ್ಯ ಯಶಸ್ವಿ ಉದ್ಯಮಿಗಳ ಯಶೋಗಾಥೆ ಸೇರಿದಂತೆ ಹಲವು ಮಹತ್ವದ ವಿಷಯಗಳನ್ನು ಉದ್ಯಮಿದಾರರು ಪರಸ್ಪರ ವಿನಿಮಯ ಮಾಡಿಕೊಂಡರು.
ಇನ್ಫೋಸಿಸ್ನ ಸುಧಾ ನಾರಾಯಣಮೂರ್ತಿ, ವಿಆರ್ಎಲ್ ಸಮೂಹ ಸಂಸ್ಥೆಯ ವಿಜಯ ಸಂಕೇಶ್ವರ ಹಾಗೂ ಹಲವು ಯುವ ಉದ್ಯಮಿಗಳು ಯಶಸ್ವಿಯಾಗಿರುವುದನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಂಸದ ಡಾ.ಉಮೇಶ್ ಜಾಧವ್, ಶಾಸಕರಾದ ಬಸವರಾಜ್ ಮತ್ತಿಮೊಡ, ರಾಜಕುಮಾರ್ ಪಾಟೀಲ್ ತೇಲ್ಕೂರ್, ಅಪ್ಪುಗೌಡ ಪಾಟೀಲ್ ರೇವೂರ, ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಜಿ.ಟಿ.ಪಾಟೀಲ, ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣರೆಡ್ಡಿ, ಆಯುಕ್ತೆ, ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಶಿವಶಂಕರ್ ಉಪಸ್ಥಿತರಿದ್ದರು.







