ಹಬ್ಬಗಳು, ಶುಭಾಶಯಗಳು ಮತ್ತು ‘ಹರಾಮ್ ಹರಾಮ್’ಗಳು
ಈಬಾರಿ ಕೂಡಾ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಕ್ಕಿಂತ ಕೆಲವು ದಿನಗಳ ಮೊದಲೇ ಕೆಲವರು ‘ಹರಾಮ್, ಹರಾಮ್’ ಆರ್ಭಟ ಆರಂಭಿಸಿದ್ದರು. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಇವರು ಝಾಕಿರ್ ನಾಯಕ್ ಎಂಬ ಭಾಷಣಕಾರರ ಒಂದು ಉರ್ದು ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲು ಆರಂಭಿಸಿದ್ದರು. ಅದರಲ್ಲಿ ನಾಯಕ್ ‘‘ನೀವು ಯಾರಿಗಾದರೂ ಮೆರಿ ಕ್ರಿಸ್ಮಸ್ ಎಂದು ಶುಭಾಶಯ ಕೋರಿದರೆ ಆ ಮೂಲಕ ನೀವು ‘ಅಲ್ಲಾಹ್ನೇ 25 ಡಿಸೆಂಬರ್ ಕೋ ಬೇಟಾ ಜನಾ’ (ಡಿಸೆಂಬರ್ 25 ರಂದು ಅಲ್ಲಾಹನು ಒಬ್ಬ ಪುತ್ರನನ್ನು ಹೆತ್ತಿದ್ದಾನೆ) ಎಂದು ಸಾಕ್ಷ ನುಡಿದಂತಾಗುತ್ತದೆ’’ ಎಂದು ವಾದಿಸುತ್ತಾರೆ. ಎಷ್ಟೊಂದು ಉತ್ಪ್ರೆೀಕ್ಷಿತ ಹಾಗೂ ಪೊಳ್ಳು ಹೇಳಿಕೆ ಇದು!
‘‘ಯಾರಾದರೂ ನಿಮಗೆ ಶುಭಕೋರಿದರೆ ನೀವು ಅದಕ್ಕಿಂತ ಉತ್ತಮ ಮಾತುಗಳಲ್ಲಿ ಆತನಿಗೆ ಶುಭ ಕೋರಿರಿ ಅಥವಾ ಅಷ್ಟೇ ಮಾತುಗಳನ್ನು ಮರಳಿಸಿರಿ........’’ (ಕುರ್ಆನ್ - 4:86)
ವಿವಿಧ ಸಮಾಜಗಳ ಹಬ್ಬಗಳ ಕುರಿತು ನಮ್ಮ ನಿಲುವು ಏನಿರಬೇಕು? ಈ ಕುರಿತು ಪ್ರವಾದಿಯ (ಸ) ನಿಲುವು ಏನಿತ್ತು? ಇವು ಸದ್ಯ ಮುಸ್ಲಿಮ್ ಸಮಾಜದಲ್ಲಿ ಚರ್ಚೆಯಲ್ಲಿರುವ ಸಹಜ ಪ್ರಶ್ನೆಗಳು.
ನಿಜವಾಗಿ ಯಾವುದೇ ಧರ್ಮದವರ ಯಾವುದೇ ಹಬ್ಬದ ವೇಳೆ, ಅವರಿಗೆ ಶುಭಾಶಯ ಕೋರುವುದು ಸಾಮಾನ್ಯ ಸೌಜನ್ಯ. ಹಾಗೆ ಮಾಡಬಾರದು ಎಂಬ ಯಾವುದೇ ಆದೇಶವನ್ನು ಪ್ರವಾದಿ (ಸ) ನೀಡಿದ್ದಿಲ್ಲ. ಅಂತಹ ಯಾವುದೇ ನಿಷೇಧಾಜ್ಞೆ ಕುರ್ಆನ್ನಲ್ಲೂ ಕಂಡು ಬರುವುದಿಲ್ಲ. ಆದ್ದರಿಂದಲೇ ಈ ಕುರಿತು ಎಲ್ಲ ವಿದ್ವಾಂಸರ ಒಮ್ಮತವೂ ಇಲ್ಲ. ಅದು ಸಮ್ಮತವೋ ನಿಷಿದ್ಧವೋ ಎಂಬ ಕುರಿತು ಸಂವಾದ ಜಾರಿಯಲ್ಲಿದೆ.
ನಮ್ಮ ಕಾಲದ ಜಗದ್ವಿಖ್ಯಾತ ವಿದ್ವಾಂಸ ಶೇಖ್ ಯೂಸುಫ್ ಅಲ್ ಖರ್ದಾವಿಯವರು ಬಹಳ ಸ್ಪಷ್ಟವಾಗಿ ಅದನ್ನು ಸಮ್ಮತ ಎಂದು ಸಾರಿದ್ದಾರೆ. ಅಷ್ಟೇ ಅಲ್ಲ, ತಮ್ಮ ಅಭಿಮತವನ್ನು ಸಮರ್ಥಿಸುವುದಕ್ಕೆ ಮತ್ತು ಈ ಕುರಿತು ವಿರೋಧಾಭಿಪ್ರಾಯ ತಾಳಿರುವ ವಿದ್ವಾಂಸರ ವಾದಗಳನ್ನು ತಳ್ಳಿ ಹಾಕುವುದಕ್ಕೆ ಬೇಕಾದ ಧಾರಾಳ ಪುರಾವೆ ಮತ್ತು ತರ್ಕಗಳನ್ನೂ ಅವರು ಮಂಡಿಸಿದ್ದಾರೆ. ಧರ್ಮಗಳಾಗಲಿ ಹಬ್ಬಗಳಾಗಲಿ ಮಾನವ ಸಮಾಜಕ್ಕೆ ಹೊಸದಲ್ಲ. ಪ್ರವಾದಿ ಮುಹಮ್ಮದ್ (ಸ) ಸತ್ಯಪ್ರಸಾರ ನಡೆಸುತ್ತಿದ್ದ ಸಮಾಜದಲ್ಲಿ ಮತ್ತು ಪವಿತ್ರ ಕುರ್ಆನ್ನ ಸಂದೇಶಗಳು ಅನಾವರಣಗೊಳ್ಳುತ್ತಿದ್ದ ದಿನಗಳಲ್ಲೂ ಅನೇಕ ಧರ್ಮಗಳು ಇದ್ದವು. ಪ್ರತಿಯೊಂದು ಧರ್ಮದವರು ಅವರವರ ಹಬ್ಬಗಳನ್ನು ಆಚರಿಸುತ್ತಿದ್ದರು. ಎಲ್ಲರಿಗೂ ಅವರವರ ಧರ್ಮವನ್ನು ಪಾಲಿಸುವ ಅಧಿಕಾರ ಇದೆ, ಯಾರೂ ಬಲವಂತವಾಗಿ ಇನ್ನೊಬ್ಬರ ಮೇಲೆ ತಮ್ಮ ಧರ್ಮವನ್ನು ಹೇರಬಾರದು ಎಂದು ಪ್ರವಾದಿ (ಸ) ಉಪದೇಶಿಸಿದರು. ತೀರಾ ವಿಭಿನ್ನ ಮಾತ್ರವಲ್ಲ ಕೆಲವೊಮ್ಮೆ ಕೆಲವು ವಿಷಯಗಳಲ್ಲಿ ಪರಸ್ಪರ ತದ್ವಿರುದ್ಧ ತತ್ವಾದರ್ಶಗಳನ್ನು ಮುಂದಿಡುವ ಎಲ್ಲ ಧರ್ಮಗಳೂ ಒಂದೇ ಎಂದಾಗಲಿ, ಅವು ಪ್ರತಿಪಾದಿಸುವ ನಂಬಿಕೆ ಮತ್ತು ಆಚರಣೆಗಳೆಲ್ಲಾ ಸರಿ ಎಂದಾಗಲಿ ಪ್ರವಾದಿ (ಸ) ಹೇಳಲಿಲ್ಲ. ಕ್ರೈಸ್ತ, ಯಹೂದಿ ಮತ್ತು ಇಸ್ಲಾಮ್ ಧರ್ಮಗಳ ನಡುವೆ ಇರುವ ಸಮಾನ ಅಂಶಗಳನ್ನು ಗುರುತಿಸಿ ಪ್ರೋತ್ಸಾಹಿಸಿದ ಪ್ರವಾದಿ, ಅದೇ ಕ್ರೈಸ್ತ, ಯಹೂದಿ ಮತ್ತು ಇತರ ಧರ್ಮಗಳಲ್ಲಿರುವ ತಪ್ಪು ನಂಬಿಕೆಗಳನ್ನು ಮತ್ತು ತಪ್ಪು ಆಚರಣೆಗಳನ್ನು ಸ್ಪಷ್ಟವಾಗಿ ಗುರುತಿಸಿ ಅವುಗಳನ್ನು ವಿರೋಧಿಸಿದರು. ವಿವಿಧ ಧರ್ಮಗಳ ಹಿಂಬಾಲಕರ ಜೊತೆ ಸೌಜನ್ಯಪೂರ್ಣ ಸಂವಾದವನ್ನು ಪ್ರೋತ್ಸಾಹಿಸಿದ ಪ್ರವಾದಿ (ಸ) ಇಂತಿಂತಹ ವಿಷಯಗಳಲ್ಲಿ ನಿಮ್ಮ ನಿಲುವು ತಪ್ಪೆಂದು ಆಯಾ ಧರ್ಮದವರೊಡನೆ ಬಹಳ ಮುಕ್ತವಾಗಿ ಹೇಳುತ್ತಿದ್ದರು. ಪ್ರವಾದಿ (ಸ) ಸಾಮಾಜಿಕ ಸಾಮರಸ್ಯದ ಪ್ರಬಲ ಪ್ರತಿಪಾದಕರಾಗಿದ್ದರು. ಜಗತ್ತಿನ ಎಲ್ಲ ಮಾನವರೂ ಅನನ್ಯ ಹಾಗೂ ಅನುಪಮನಾದ ಒಬ್ಬ ದೇವರ ಸೃಷ್ಟಿಗಳು, ಮಾನವರೆಂಬ ನೆಲೆಯಲ್ಲಿ ಎಲ್ಲರೂ ಸಂಪೂರ್ಣ ಸಮಾನರು ಮತ್ತು ಗೌರವಾರ್ಹರು, ಎಲ್ಲರೂ ಆ ಒಬ್ಬ ದೇವರ ಬಳಿಗೆ ಮರಳಿ ಹೋಗಬೇಕಾದವರು ಎಂಬುದು ಅವರ ಉಪದೇಶವಾಗಿತ್ತು. ಆದರೆ ‘‘ಅದೂ ಸರಿ, ಇದೂ ಸರಿ ಮತ್ತು ಎಲ್ಲವೂ ಸರಿ’’ ಎಂಬ ಆತ್ಮ ವಂಚನೆಯ ನಿಲುವನ್ನು ಅವರು ಒಪ್ಪಲಿಲ್ಲ. ಸರಿಯಾದುದನ್ನು ಸರಿ ಎಂದು ಅಂಗೀಕರಿಸಿದರು. ಇತರರ ವಾದಗಳನ್ನು ಆಲಿಸಿದರು. ತಪ್ಪೆಂದು ಕಂಡದ್ದನ್ನು ತಪ್ಪೆಂದು ಕರೆದರು. ಮಾತ್ರವಲ್ಲ, ಅದು ಯಾಕೆ ತಪ್ಪೆಂದು ಆ ಕುರಿತು ತಮ್ಮ ವಾದ ಮತ್ತು ತರ್ಕಗಳನ್ನು ಮಂಡಿಸಿದರು. ಭಿನ್ನಾಭಿಪ್ರಾಯಗಳ ಹೊರತಾಗಿಯೂ ಎಲ್ಲ ಜನಾಂಗ ಮತ್ತು ಸಮುದಾಯಗಳ ನಡುವೆ ಮಾನವೀಯ ಭ್ರಾತೃತ್ವದ ಸಂಬಂಧವನ್ನು ಬಲಪಡಿಸಬೇಕು ಮತ್ತು ಸತ್ಕಾರ್ಯಗಳಲ್ಲಿ ಎಲ್ಲರೂ ಪರಸ್ಪರ ಸಹಕರಿಸಬೇಕು, ದುಷ್ಟ ಕೃತ್ಯಗಳಲ್ಲಿ ಯಾರಿಗೂ ಸಹಕಾರ ನೀಡಬಾರದು ಎಂಬುದು ಅವರ ಧೋರಣೆಯಾಗಿತ್ತು.
ಸಮಾಜವೆಂದ ಮೇಲೆ, ವಿವಿಧ ವಿಷಯಗಳಲ್ಲಿ ಇದು ಬೇಕೋ ಬೇಡವೋ ಎಂಬ ಚರ್ಚೆ ಇದ್ದೇ ಇರುತ್ತದೆ. ಸಂಗತಿಯು ಮಹಾಪಾಪಗಳಿಗೆ ಸಂಬಂಧಿಸಿಲ್ಲವಾದರೆ ಅದನ್ನು ಅವರವರ ಆಯ್ಕೆಗೆ ಬಿಟ್ಟು ಬಿಡುವುದೇ ಜಾಣತನ. ಅದು ಬಿಟ್ಟು ಇನ್ನೊಬ್ಬರ ಮೇಲೆ ತಮ್ಮ ನಿಲುವನ್ನು ಹೇರಲು ಯತ್ನಿಸುವುದಾಗಲಿ, ಭಿನ್ನ ಅಭಿಪ್ರಾಯ ಉಳ್ಳವರನ್ನು ಅನಗತ್ಯ ಪಾಪ ಪ್ರಜ್ಞೆಗೆ ತಳ್ಳುವುದಾಗಲಿ, ಅವರ ಮೇಲೆ ಮಹಾಪಾಪದ ಆರೋಪ ಹೊರಿಸುವುದಾಗಲಿ ನೀಚಮಟ್ಟದ ಉದ್ಧಟತನವೆನಿಸುತ್ತದೆ.
ಹೊಸದಾಗಿ ವಿಪರೀತ ಧರ್ಮಾವೇಶ ಬೆಳೆಸಿಕೊಂಡ ಕೆಲವು ಮಂದಿ ಇಸ್ಲಾಮ್ ಧರ್ಮವು ಕೆಲವು ವಿಷಯಗಳ ಹೊರತು ಬೇರೆಲ್ಲವನ್ನೂ ನಿಷೇಧಿಸುತ್ತದೆ ಎಂಬಂತೆ ಮಾತನಾಡುತ್ತಾರೆ. ಅವರು ಕಂಡ ಕಂಡದ್ದನ್ನೆಲ್ಲ ‘ಹರಾಮ್’ ಎಂದು ಘೋಷಿಸಿ, ಅದು ಹರಾಮ್ ಅಲ್ಲ ಎನ್ನುವವರ ಬಳಿ ಪುರಾವೆ ಕೇಳುತ್ತಾರೆ. ಅವರ ಪ್ರಕಾರ ಯಾವುದಾದರೂ ವಸ್ತು ಅಥವಾ ಚಟುವಟಿಕೆ ನಿಷಿದ್ಧ ಎಂದು ಘೋಷಿಸುವುದಕ್ಕೆ ಕೇವಲ ಹುಚ್ಚು ತರ್ಕ ಸಾಕು, ಅದು ನಿಷಿದ್ಧ ಅಲ್ಲವೆಂದು ಒಪ್ಪಬೇಕಿದ್ದರೆ ಮಾತ್ರ ಅದಕ್ಕೆ ಒಂದಷ್ಟು ಸಾಕ್ಷಿ ಪುರಾವೆಗಳೆಲ್ಲಾ ಬೇಕು. ಆದರೆ ಇದು ಇಸ್ಲಾಮ್ ಧರ್ಮದ ಸಹಜ ಸ್ವರೂಪ ಅಲ್ಲ. ಈ ಧರ್ಮದಲ್ಲಿ ಕೇವಲ ಕೆಲವು ವಸ್ತು ಹಾಗೂ ಚಟುವಟಿಕೆಗಳನ್ನು ಮಾತ್ರ ನಿಷಿದ್ಧವೆಂದು ಘೋಷಿಸಲಾಗಿದ್ದು ಉಳಿದೆಲ್ಲವೂ ಸಮ್ಮತವಾಗಿದೆ. ಆದ್ದರಿಂದಲೇ ಇಲ್ಲಿ ಜನರಿಗೆ ಸಮ್ಮತ ಚಟುವಟಿಕೆಗಳ ಪಟ್ಟಿಯನ್ನು ಕೊಡುವ ಬದಲು ಕೆಲವು ನಿಷಿದ್ಧ ವಸ್ತು ಹಾಗೂ ಚಟುವಟಿಕೆಗಳ ಪಟ್ಟಿಯನ್ನು ಮಾತ್ರ ಕೊಟ್ಟು, ಸಾಮಾನ್ಯವಾಗಿ ಉಳಿದೆಲ್ಲವೂ ಸಮ್ಮತ ಎಂಬ ಸಂದೇಶವನ್ನು ನೀಡಲಾಗಿದೆ. ನಿಷಿದ್ಧವೆಂದು ಘೋಷಿಸಲಾಗಿರುವ ಕೆಲವು ವಸ್ತು ಮತ್ತು ಚಟುವಟಿಕೆಗಳು ಕೂಡಾ ತೀರಾ ಅನಿವಾರ್ಯ ಹಾಗೂ ತುರ್ತು ಸನ್ನಿವೇಶಗಳಲ್ಲಿ ಸಮ್ಮತವಾಗಿ ಬಿಡುತ್ತವೆ. ಜೊತೆಗೆ ಇಲ್ಲಿ, ಸ್ಪಷ್ಟ ಆದೇಶಗಳು ಲಭ್ಯವಿಲ್ಲದ, ಗೊಂದಲದ ವಿಷಯಗಳಲ್ಲಿ ಹಲಾಲ್ - ಹರಾಮ್ಗಳನ್ನು ನಿರ್ಧರಿಸುವುದಕ್ಕೆ ಕೆಲವು ತಾತ್ವಿಕ ನೆಲೆಗಳನ್ನು ಒದಗಿಸಲಾಗಿದೆ. ಈ ಧರ್ಮವನ್ನು ತುಸು ಸೂಕ್ಷ್ಮವಾಗಿ, ಸಂವೇದನಾ ಶೀಲ ಬುದ್ಧಿ ಮತ್ತು ಮನಸ್ಸಿನೊಂದಿಗೆ ಅಧ್ಯಯನ ಮಾಡುವವರೆಲ್ಲಾ ಅದರ ಈ ವಿಶಾಲ ಸ್ಫೂರ್ತಿ, ಸ್ವರೂಪ ಮತ್ತು ಸ್ವಭಾವವನ್ನು ಗುರುತಿಸಿರುತ್ತಾರೆ.
ಈಬಾರಿ ಕೂಡಾ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷಕ್ಕಿಂತ ಕೆಲವು ದಿನಗಳ ಮೊದಲೇ ಕೆಲವರು ‘ಹರಾಮ್, ಹರಾಮ್’ ಆರ್ಭಟ ಆರಂಭಿಸಿದ್ದರು. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಇವರು ಝಾಕಿರ್ ನಾಯಕ್ ಎಂಬ ಭಾಷಣಕಾರರ ಒಂದು ಉರ್ದು ಭಾಷಣದ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲು ಆರಂಭಿಸಿದ್ದರು. ಅದರಲ್ಲಿ ನಾಯಕ್ ‘‘ನೀವು ಯಾರಿಗಾದರೂ ಮೆರಿ ಕ್ರಿಸ್ಮಸ್ ಎಂದು ಶುಭಾಶಯ ಕೋರಿದರೆ ಆ ಮೂಲಕ ನೀವು ‘ಅಲ್ಲಾಹ್ನೇ 25 ಡಿಸೆಂಬರ್ ಕೋ ಬೇಟಾ ಜನಾ’ (ಡಿಸೆಂಬರ್ 25 ರಂದು ಅಲ್ಲಾಹನು ಒಬ್ಬ ಪುತ್ರನನ್ನು ಹೆತ್ತಿದ್ದಾನೆ) ಎಂದು ಸಾಕ್ಷ ನುಡಿದಂತಾಗುತ್ತದೆ’’ ಎಂದು ವಾದಿಸುತ್ತಾರೆ. ಎಷ್ಟೊಂದು ಉತ್ಪ್ರೇಕ್ಷಿತ ಹಾಗೂ ಪೊಳ್ಳು ಹೇಳಿಕೆ ಇದು! ನಿಜವಾಗಿ ಡಿಸೆಂಬರ್ 25ರಂದು ಅಥವಾ ಬೇರಾವುದೇ ದಿನ ‘ದೇವರು ಹೆತ್ತಿದ್ದಾನೆ’ ಎಂದು ಕ್ರೈಸ್ತರು ಕೂಡ ಹೇಳುವುದಿಲ್ಲ. ಈಸಾ (ಅ) ಅವರು ಮರ್ಯಮ್ (ಅ) ಎಂಬ ಮಹಾನ್ ಮಹಿಳೆಯ ಉದರದಿಂದ ಜನಿಸಿದ್ದರು ಎಂದು ಮುಸ್ಲಿಮರು ನಂಬುವಂತೆಯೇ ಕ್ರೈಸ್ತರು ಕೂಡಾ ನಂಬುತ್ತಾರೆ. ಕ್ರೈಸ್ತರು ಪ್ರವಾದಿ ಈಸಾ (ಅ)ರನ್ನು ಅಥವಾ ಏಸುವನ್ನು ದೇವಪುತ್ರನೆಂದು ಕರೆಯುತ್ತಾರೆ ಎಂಬುದು ನಿಜ. ಆದರೆ ಅವರನ್ನು ಹೆತ್ತದ್ದು ದೇವರೆಂದು ಈವರೆಗೆ ಯಾವ ಕ್ರೈಸ್ತನೂ ಹೇಳಿದ್ದಿಲ್ಲ. ಯಾರನ್ನೇ ಆಗಲಿ ದೇವಪುತ್ರನೆಂದು ಕರೆಯುವುದನ್ನು ಇಸ್ಲಾಮ್ ಧರ್ಮವು ಅನುಮತಿಸುವುದಿಲ್ಲ. ‘‘ಅವನಿಗೆ ಯಾರೂ ಜನಿಸಿಲ್ಲ ಮತ್ತು ಅವನು ಯಾರಿಗೂ ಜನಿಸಿದವನಲ್ಲ’’ ಎಂದು ದೇವರ ಕುರಿತು ಕುರ್ಆನ್ ಸ್ಪಷ್ಟ ಪಡಿಸುತ್ತದೆ (112:3). ಮರ್ಯಮರ ಪುತ್ರ ಈಸಾ ಅವರ ಕುರಿತು ಕ್ರೈಸ್ತರ ಹಲವು ಹೇಳಿಕೆಗಳನ್ನು ಕುರ್ಆನ್ನಲ್ಲಿ ಖಂಡಿಸಲಾಗಿದೆ. ಝಾಕಿರ್ ನಾಯಕ್ ಅವರಿಗೂ ಆ ಕುರಿತು ಮಾತನಾಡುವ ಮತ್ತು ಈಸಾ ದೇವಪುತ್ರರಲ್ಲ ಎಂದು ವಾದಿಸುವ ಸಂಪೂರ್ಣ ಹಕ್ಕಿದೆ. ಆದರೆ ಅದಕ್ಕಾಗಿ ಸುಳ್ಳನ್ನು ಆಶ್ರಯಿಸುವುದು ಖಂಡಿತ ತಪ್ಪು. ಏಸುವನ್ನು ದೇವರು ಹೆತ್ತಿದ್ದಾನೆ ಎಂಬುದು ಕ್ರೈಸ್ತರ ನಂಬಿಕೆಯಲ್ಲ. ಯಾವುದೇ ಸಮುದಾಯದ ಮೇಲೆ ಅವರದಲ್ಲದ ನಂಬಿಕೆಯನ್ನು ಆರೋಪಿಸುವುದು ಖಂಡಿತ ವಂಚನೆ ಮತ್ತು ಪಾಪ ಕೃತ್ಯವಾಗಿದೆ.
ಝಾಕಿರ್ ನಾಯಕ್ ಅವರ ವಿಚಿತ್ರ ತರ್ಕವು ಹಲವು ಪ್ರಶ್ನೆಗಳನ್ನು ಹೆರುತ್ತದೆ. ಅವರ ತರ್ಕದ ಪ್ರಕಾರ ‘ಮೆರಿ ಕ್ರಿಸ್ಮಸ್’ ಎಂದು ಶುಭಕೋರುವವರೆಲ್ಲಾ ಕ್ರೈಸ್ತರಾಗಿ ಬಿಡುತ್ತಾರೆ ಎಂದಾದರೆ, ಬಕ್ರೀದ್ ಸಂದರ್ಭದಲ್ಲಿ ಮುಸ್ಲಿಮರಲ್ಲದ ಎಷ್ಟೋ ಮಂದಿ ‘ಹ್ಯಾಪ್ಪಿ ಬಕ್ರೀದ್’ ಎಂದು ಮುಸ್ಲಿಮರಿಗೆ ಶುಭ ಕೋರುತ್ತಾರಲ್ಲ? ಅವರೆಲ್ಲ ಅಷ್ಟು ಮಾತ್ರಕ್ಕೆ ಮುಸ್ಲಿಮರಾಗಿ ಬಿಡುತ್ತಾರೆಯೇ? ‘ಹ್ಯಾಪ್ಪಿ ಬಕ್ರೀದ್’ ಎಂದು ಹೇಳಿದವರೆಲ್ಲಾ ‘‘ಅಲ್ಲಾಹನ ಹೊರತು ಬೇರಾರೂ ಆರಾಧನೆಗೆ ಯೋಗ್ಯರಲ್ಲ, ಮುಹಮ್ಮದರು ಅಲ್ಲಾಹನ ದೂತರು’’ ಎಂದು ಸಾಕ್ಷ ಹೇಳಿದಂತಾಗಿ ಬಿಟ್ಟಿತೇ? ಕೇವಲ ಶುಭ ಹಾರೈಸಿದೊಡನೆ ಧರ್ಮವೇ ಬದಲಾಗಿ ಬಿಡುವುದಾದರೆ ಎಷ್ಟೊಂದು ದುರ್ಬಲ ಬುನಾದಿಯ ಧರ್ಮ ಅದು!
‘‘ಕರ್ಮಗಳು ಸಂಕಲ್ಪಗಳನ್ನು ಅವಲಂಬಿಸಿರುತ್ತವೆ’’ ಎಂಬುದು ಒಂದು ಪ್ರಖ್ಯಾತ ಪ್ರವಾದಿವಚನ. ಮಾತ್ರವಲ್ಲ, ಇಸ್ಲಾಮಿನ ನಿಯಮಾವಳಿಯಲ್ಲಿರುವ ಮೂಲಭೂತ ತತ್ವಗಳ ಸಾಲಲ್ಲಿರುವ ಒಂದು ತತ್ವವಾಗಿದೆ. ಸಂಕಲ್ಪಗಳು ಮನಸ್ಸಿಗೆ ಸಂಬಂಧಿಸಿವೆ. ಹೀಗಿರುವಾಗ, ಕೇವಲ ಮೇಲ್ನೋಟಕ್ಕೆ ಕಾಣಿಸುವ ಒಬ್ಬ ವ್ಯಕ್ತಿಯ ಒಂದು ಕೃತ್ಯವನ್ನು ತೋರಿಸಿ ಅದರ ಹಿಂದೆ ನಿರ್ದಿಷ್ಟವಾಗಿ ಇಂತಹದೇ ಸಂಕಲ್ಪ ಇದೆ ಎಂದು ನಿರ್ಧರಿಸುವ ಸಾಮರ್ಥ್ಯವಾಗಲಿ ಅಧಿಕಾರವಾಗಲಿ ಯಾರಿಗೂ ಇಲ್ಲ. ಕ್ರಿಸ್ಮಸ್ ಅಥವಾ ಹೊಸವರ್ಷದ ಶುಭಾಶಯ ಕೋರುವವರಿಗೂ ಈ ಮಾತು ಅನ್ವಯಿಸುತ್ತದೆ. ಅವರ ಈ ಕೃತ್ಯದ ಫಲಿತಾಂಶ, ಪರಿಣಾಮಗಳೇನಿದ್ದರೂ ಅವೆಲ್ಲಾ ಅವರ ಸಂಕಲ್ಪವನ್ನು ಅವಲಂಬಿಸಿವೆ. ಇತರ ಸಮುದಾಯಗಳ ಧಾರ್ಮಿಕ ಹಬ್ಬಗಳ ವೇಳೆ ಶುಭ ಹಾರೈಸುವುದು ತಪ್ಪುಎಂಬ ಅಭಿಪ್ರಾಯವಿರುವ ಮತ್ತು ಹಾಗೆಂದು ‘ಫತ್ವಾ’ (ಧಾರ್ಮಿಕ ತೀರ್ಪು) ಹೊರಡಿಸಿರುವ ವಿದ್ವಾಂಸರು ಧಾರಾಳ ಸಂಖ್ಯೆಯಲ್ಲಿ ಸಿಗುತ್ತಾರೆ. ಆದರೆ ಅದೇವೇಳೆ ಜಗತ್ತಿನ ಎಷ್ಟೋ ಪ್ರಖ್ಯಾತ ಮುಸ್ಲಿಮ್ ವಿದ್ವಾಂಸರು, ಅನ್ಯ ಧರ್ಮೀಯರ ಹಬ್ಬಗಳ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸುವುದು ತಪ್ಪಲ್ಲ ಎಂದು ಅಧಿಕೃತ ‘ಫತ್ವಾ’ ನೀಡಿದ್ದಾರೆ.
ಒಂದು ವೇಳೆ, ಶುಭ ಹಾರೈಸುವುದು ನಿಷಿದ್ಧ ಎಂದು ವಾದಿಸುವವರ ಬಳಿ ತಮ್ಮ ವಾದವನ್ನು ಸಮರ್ಥಿಸುವುದಕ್ಕೆ ನೇರ ಹಾಗೂ ನಿರ್ದಿಷ್ಟವಾದ ಪುರಾವೆಯೇನಾದರೂ ಇದ್ದಿದ್ದರೆ ಧಾರ್ಮಿಕ ವಿದ್ವಾಂಸರ ನಡುವೆ ಇದೊಂದು ವಿವಾದಾತ್ಮಕ ವಿಷಯವಾಗಿ ಉಳಿಯುತ್ತಿರಲಿಲ್ಲ. ವಿವಾದವು ಎಂದೋ ಬಗೆಹರಿದು ಬಿಡುತ್ತಿತ್ತು. ಶುಭಕೋರುವುದು ನಿಷಿದ್ಧ ಎಂದು ವಾದಿಸುವವರು, ಕೇವಲ ತರ್ಕಗಳನ್ನು ಅವಲಂಬಿಸುವ ಮೂಲಕ ತಮ್ಮ ಬಳಿ ಪುರಾವೆಗಳಿಲ್ಲ ಎಂಬುದನ್ನು ಒಪ್ಪಿಕೊಂಡಂತಾಗಿದೆ. ಸರಿ, ಅವರು ಅವಲಂಬಿಸುವ ತರ್ಕಗಳಾದರೂ ಬಲಿಷ್ಠವಾಗಿವೆಯೇ ಎಂದು ನೋಡಿದರೆ ಅದೂ ಇಲ್ಲ. ‘‘ಇತರ ಧರ್ಮಗಳ ಧಾರ್ಮಿಕ ಆಚರಣೆಗಳನ್ನು ಅನುಕರಿಸಬಾರದು’’ ಎಂಬ ಆಶಯದ ಹಲವು ಆದೇಶಗಳು ಪ್ರವಾದಿ ವಚನಗಳಲ್ಲಿ ಸಿಗುತ್ತವೆ. ಅದನ್ನೇ ಅವರು ತಮ್ಮ ವಾದವನ್ನು ಸಮರ್ಥಿಸುವುದಕ್ಕೆ ಬಳಸಿಕೊಳ್ಳುತ್ತಾರೆ. ಆದರೆ ಕೇವಲ ಯಾರಾದರೂ ಅವರ ಹಬ್ಬದ ಸಂಭ್ರಮದಲ್ಲಿರುವಾಗ ಅವರಿಗೆ ಶುಭಕೋರಿದರೆ ಅದು ಅವರ ಧರ್ಮದ ಅನುಕರಣೆಯೆಂದು ಕರೆಯಲು ಸಾಧ್ಯವೇ?
ಧರ್ಮದ ಆಶಯಗಳನ್ನು ಅಧಿಕೃತ ಧಾರ್ಮಿಕ ಮೂಲಗಳನ್ನು ಆಧರಿಸಿದ ಪುರಾವೆಗಳ ಬದಲು ಕೇವಲ ತರ್ಕದ ಆಧಾರದಲ್ಲಿ ನಿರ್ಧರಿಸಲು ಹೊರಟರೆ ಹಲವಾರು ಭೀಕರ ಅನಾಹುತಗಳು ಸಂಭವಿಸುವ ಸಾಧ್ಯತೆ ಇದೆ. ಉದಾ: ಕೆಲವು ಮತಾಂಧ ವಿವೇಕಹೀನ ತರ್ಕಪ್ರವೀಣರು, ಸೂಟು, ಬೂಟುಗಳನ್ನು ಕ್ರೈಸ್ತರ ಉಡುಗೆ ಎಂದು ಕರೆದು ಅದನ್ನು ಧರಿಸುವುದು ಕ್ರೈಸ್ತರ ಅನುಕರಣೆಯಾದ್ದರಿಂದ ಮುಸ್ಲಿಮರ ಪಾಲಿಗೆ ಆ ಉಡುಗೆ ನಿಷಿದ್ಧ ಎಂದು ತರ್ಕಿಸಿದ್ದುಂಟು. ಗಮ್ಮತ್ತೇನೆಂದರೆ, ಯಾವುದೇ ವಿಷಯದಲ್ಲಿ ಅನ್ಯ ಧರ್ಮೀಯರ ಅನುಕರಣೆ ಮುಸ್ಲಿಮರ ಪಾಲಿಗೆ ನಿಷಿದ್ಧ ಎಂದು ವಾದಿಸುವ ಉಪನ್ಯಾಸಕ ಮಹಾಶಯ ಝಾಕಿರ್ ನಾಯಕ್ ಅವರು ಯಾವಾಗಲೂ, ಇಸ್ಲಾಮ್ ಧರ್ಮದೊಂದಿಗಾಗಲಿ ಮುಸ್ಲಿಮ್ ಬಾಹುಳ್ಯವಿರುವ ಸಮಾಜಗಳ ಸಂಸ್ಕೃತಿಯೊಂದಿಗಾಗಲಿ ಯಾವುದೇ ಸಂಬಂಧ ಇಲ್ಲದ ಶುದ್ಧ ಪಾಶ್ಚಿಮಾತ್ಯ ಸೂಟು, ಬೂಟು, ಕೋಟು ಮತ್ತು ಟೈಗಳನ್ನು ಧರಿಸಿಕೊಂಡಿರುತ್ತಾರೆ! ವೇದಿಕೆಗಳಲ್ಲಂತೂ ಅವರು ಈ ಉಡುಗೆಯನ್ನು ತಮ್ಮ ಮೇಲೆ ಕಡ್ಡಾಯವಾಗಿಸಿಕೊಂಡಿದ್ದಾರೆ. ಮೆರಿ ಕ್ರಿಸ್ಮಸ್ ವಿಷಯದಲ್ಲಿ ‘ಅನ್ಯಾನುಕರಣೆ’ಯ ತರ್ಕ ಮಂಡಿಸುತ್ತಿದ್ದಾಗಲೂ ಅವರು ಅದೇ ವೇಷ ಧರಿಸಿದ್ದರು. ಝಾಕಿರ್ ನಾಯಕ್ರ ತರ್ಕಶೈಲಿಯನ್ನು ಅನುಸರಿಸುವವರು ಅದೇ ತರ್ಕದ ಆಧಾರದಲ್ಲಿ ಸೂಟು ಬೂಟುಗಳನ್ನು ಹರಾಮ್ ಎನ್ನುತ್ತಾರೆ. ವಿಶೇಷವಾಗಿ, ನಾಯಕ್ ಸಾಹೇಬರು ತಪ್ಪದೆ ಧರಿಸುವ ಕಂಠ ಕೌಪೀನದ (ಜಿಛಿ) ಬಗ್ಗೆಯಂತೂ ಬಹುಕಾಲದಿಂದ ಮುಸ್ಲಿಮ್ ವಿದ್ವಾಂಸರ ಒಂದು ವಲಯದಲ್ಲಿ ತುಂಬಾ ಅಸಮಾಧಾನವಿದೆ.
ಭಾರತದ ಪ್ರಖ್ಯಾತ ಧಾರ್ಮಿಕ ಕೇಂದ್ರ ‘ದಾರುಲ್ ಉಲೂಮ್, ದೇವ್ ಬಂದ್’ನವರ ‘ದಾರುಲ್ ಇಫ್ತಾ’ ಎಂಬ ಫತ್ವಾ ವಿಭಾಗದವರೊಡನೆ ‘‘ಸೂಟು ಮತ್ತು ಟೈ ಧರಿಸುವುದು ಇಸ್ಲಾಮ್ ಧರ್ಮದ ಪ್ರಕಾರ ನಿಷಿದ್ಧವೇ?’’ ಎಂಬ ಪ್ರಶ್ನೆ ಕೇಳಲಾಯಿತು. ಅದಕ್ಕೆ ಆ ಸಂಸ್ಥೆಯವರು ನೀಡಿದ ಉತ್ತರ ಗಮನಿಸಿ:
‘‘ಫತ್ವಾ ನೀಡುವ ಅನೇಕ ವಿದ್ವಾಂಸರು, ಟೈಯನ್ನು ಕ್ರೈಸ್ತರ ಧಾರ್ಮಿಕ ಸಂಕೇತವಾಗಿ ಕಾಣುತ್ತಾರೆ. ಅವರ ಪ್ರಕಾರ ಅದನ್ನು ಧರಿಸುವುದು ಹರಾಮ್ (ನಿಷಿದ್ಧ) ಆಗಿದೆ. ಈ ಕುರಿತು ಭಿನ್ನ ಅಭಿಮತ ಉಳ್ಳವರು, ಅದನ್ನು ಧರಿಸುವುದು ‘ಮಕ್ರೂಹ್’ (ಅಪ್ರಿಯ, ಅನಪೇಕ್ಷಿತ) ಎಂಬ ನಿಲುವು ತಾಳಿದ್ದಾರೆ. ಏನಿದ್ದರೂ ಅದನ್ನು ಧರಿಸದೇ ಇರುವುದೇ ಉತ್ತಮ.’’ (ಪ್ರಶ್ನೋತ್ತರ ಕ್ರಮ ಸಂಖ್ಯೆ - 36,524/ಫತ್ವಾ ನಂಬ್ರ - 210/114/ ಏ=1433)
ಹೇಗಿದೆ ತರ್ಕ?
ಕುರ್ಆನ್ನಲ್ಲಿರುವ ಒಂದು ವಚನವನ್ನು ಗಮನಿಸಿ:
‘‘ಇಂದು ನಿಮ್ಮ ಪಾಲಿಗೆ ಎಲ್ಲ ಶುದ್ಧ ವಸ್ತುಗಳನ್ನು ಸಮ್ಮತಗೊಳಿಸಲಾಗಿದೆ. ಇನ್ನು, ಗ್ರಂಥದವರ (ಯಹೂದಿಗಳು ಮತ್ತು ಕ್ರೈಸ್ತರ) ಆಹಾರವು ನಿಮ್ಮ ಪಾಲಿಗೆ ಸಮ್ಮತವಾಗಿದೆ ಮತ್ತು ನಿಮ್ಮ ಆಹಾರವು ಅವರ ಪಾಲಿಗೆ ಸಮ್ಮತವಾಗಿದೆ. ಹಾಗೆಯೇ, ವಿಶ್ವಾಸಿಗಳಲ್ಲಿನ ಸುಶೀಲ ಸ್ತ್ರೀಯರು ಮತ್ತು ನಿಮಗಿಂತ ಮುಂಚೆ ಧರ್ಮಗ್ರಂಥ ನೀಡಲಾಗಿದ್ದವರಲ್ಲಿನ ಸುಶೀಲ ಸ್ತ್ರೀಯರು ನಿಮ್ಮ ಪಾಲಿಗೆ ಸಮ್ಮತರಾಗಿದ್ದಾರೆ.....’’(5:5)
ಯಹೂದಿಗಳು ಮತ್ತು ಕ್ರೈಸ್ತರ ಆಹಾರ ಮತ್ತು ವಿವಾಹದ ವಿಷಯದಲ್ಲಿ ಇಷ್ಟೊಂದು ಉದಾರ ನೀತಿ ತಾಳಿದ ಒಂದು ಧರ್ಮದ ಅನುಯಾಯಿಗಳನ್ನು, ಸಂಕುಚಿತತೆ ಹಾಗೂ ಅಸಹಿಷ್ಣುತೆಯ ಕಮರಿಗೆ ತಳ್ಳುವವರು ಖಂಡಿತ ಆ ಧರ್ಮದ ಅಥವಾ ಅದರ ಅನುಯಾಯಿಗಳ ಅಥವಾ ಮಾನವ ಸಮಾಜದ ಹಿತೈಷಿಗಳಂತೂ ಖಂಡಿತ ಅಲ್ಲ. ಮೆರಿ ಕ್ರಿಸ್ಮಸ್ ಎಂದು ಕ್ರೈಸ್ತರಿಗೆ ಶುಭಕೋರುವ ಕುರಿತು ಈಜಿಪ್ಟ್ನ ಪ್ರಸಿದ್ಧ ಧಾರ್ಮಿಕ ಮಾರ್ಗದರ್ಶಿ ಸಂಸ್ಥೆ ದಾರುಲ್ ಇಫ್ತಾ ಅಲ್ ಮಿಸ್ರಿಯ್ಯಿ ಹೊರಡಿಸಿದ್ದ ಒಂದು ತೀರ್ಪಿನ ಸಾರಾಂಶವು ಹೀಗಿದೆ:
‘‘ಮುಸ್ಲಿಮರು ಮೆರಿ ಕ್ರಿಸ್ಮಸ್ ಎನ್ನುವ ಮೂಲಕ ಶುಭಕೋರುವುದನ್ನು, ಮುಸ್ಲಿಮೇತರರ ಅನುಕರಣೆ ಎಂದು ಪರಿಗಣಿಸುವಂತಿಲ್ಲ. ನಿಷೇಧವಿರುವುದು, ಇಸ್ಲಾಮ್ ಧರ್ಮದ ಸ್ಥಾಪಿತ ತತ್ವಗಳಿಗೆ ವಿರುದ್ಧವಾದ ನಂಬಿಕೆ ಮತ್ತು ಕರ್ಮಗಳನ್ನು ಒಳಗೊಂಡ ಅನುಕರಣೆಗೆ ಮಾತ್ರ.’’ ಇಂತಹ ವಿಷಯಗಳಲ್ಲಿ, ಮುಸ್ಲಿಮ್ ಏಕಸ್ವಾಮ್ಯವಿರುವ ಸಮಾಜಗಳಲ್ಲಿನ ವಿದ್ವಾಂಸರಿಗೆ ಹೋಲಿಸಿದರೆ ಮಿಶ್ರ ಸಮಾಜಗಳಲ್ಲಿನ ವಿದ್ವಾಂಸರ ನಿಲುವು ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಉದಾ: ಜಗತ್ತಿನ ವಿವಿಧ ಭಾಗಗಳ 20 ಮಂದಿ ವಿದ್ವಾಂಸರು ಮತ್ತು ಇಸ್ಲಾಮೀ ಕಾನೂನು ತಜ್ಞರನ್ನೊಳಗೊಂಡ ‘ಯುರೋಪಿಯನ್ ಫತ್ವಾ ಕಾನ್ಸಿಲ್’ ಸಂಸ್ಥೆಯು, ಮುಸ್ಲಿಮ್ ವ್ಯಕ್ತಿಗಳಾಗಲಿ ಸಂಘಟನೆಗಳಾಗಲಿ ಅನ್ಯ ಧರ್ಮೀಯರಿಗೆ ಅವರ ಸಂಭ್ರಮದ ಸಂದರ್ಭಗಳಲ್ಲಿ ಶುಭಕೋರುವುದು ನಿಷಿದ್ಧವೆಂಬ ನಿಲುವನ್ನು ತಳ್ಳಿ ಹಾಕಿದೆ. 2007ರಲ್ಲಿ ಮಲೇಷ್ಯಾದ ಇಸ್ಲಾಮಿಕ್ ಧಾರ್ಮಿಕ ವ್ಯವಹಾರಗಳ ಫತ್ವಾ ಮಂಡಳಿಯು ಹೊರಡಿಸಿದ ಒಂದು ತೀರ್ಪು ಹೀಗಿದೆ:
‘‘ಮುಸ್ಲಿಮರಲ್ಲದವರ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ಅವರಿಗೆ ಕಾರ್ಡ್, ಈಮೇಲ್, ಎಸ್ಸೆಮ್ಮೆಸ್ ಇತ್ಯಾದಿ ವಿವಿಧ ವಿಧಾನಗಳ ಮೂಲಕ ಅಭಿನಂದನೆ ಅಥವಾ ಶುಭಾಶಯದ ಸಂದೇಶ ನೀಡುವುದು ಧರ್ಮ ಸಮ್ಮತವಾಗಿದೆ. ಆದರೆ, ಪ್ರಸ್ತುತ ಸಂದೇಶಗಳಲ್ಲಿ ಮುಸ್ಲಿಮರಲ್ಲದವರ ಧರ್ಮಗಳನ್ನು ವೈಭವೀಕರಿಸಬಾರದು ಮತ್ತು ಅವರ ಧಾರ್ಮಿಕ ಸಂಕೇತಗಳನ್ನು ಬಳಸಬಾರದು.’’
ತರ್ಕ ಪ್ರವೀಣರ ಎಡವಟ್ಟು
ಒಂದು ಹಂತದಲ್ಲಿ ನಮ್ಮದೇ ದೇಶದಲ್ಲಿ ಕೆಲವು ತರ್ಕಪ್ರವೀಣರು ‘ವಂದೇ ಮಾತರಂ’ ವಿಷಯದಲ್ಲಿ ಭಾರೀ ತಕರಾರು ಎಬ್ಬಿಸಿದ್ದರು. ವಂದೇ ಮಾತರಂನಲ್ಲಿ ‘‘ಭಾರತವನ್ನು ನಾನು ಪೂಜಿಸುತ್ತೇನೆ’’ ಎಂಬ ಅರ್ಥ ಮಾತ್ರ ಇದೆ, ಇದು ಏಕದೇವ ವಿಶ್ವಾಸಕ್ಕೆ ವಿರುದ್ಧ ಆದ್ದರಿಂದ ಅದನ್ನು ಹಾಡುವುದು ‘ಹರಾಮ್’ ಎಂಬ ವಾದ ಮಂಡಿಸತೊಡಗಿದ್ದರು. ಇದರಿಂದ ಹಲವರು ಗೊಂದಲಕ್ಕೆ ಮತ್ತು ಅನಗತ್ಯ ಪಾಪಪ್ರಜ್ಞೆಗೂ ಒಳಗಾಗಿ ನರಳಿದರು. ‘ವಂದೇ’ ಎಂಬ ಪದವನ್ನು, ಗೌರವಿಸುತ್ತೇನೆ, ಆದರಿಸುತ್ತೇನೆ ಎಂದಿತ್ಯಾದಿಯಾಗಿ ಹಲವು ವಿಧಗಳಲ್ಲಿ ವ್ಯಾಖ್ಯಾನಿಸುವುದಕ್ಕೆ ಅವಕಾಶವಿರುವುದರಿಂದ, ಆ ಅರ್ಥಗಳಲ್ಲಿ ಅದನ್ನು ಹಾಡಬಹುದು ಎಂದು ಹಲವು ವಿದ್ವಾಂಸರು ಆಗಲೇ ಸ್ಪಷ್ಟೀಕರಣವನ್ನೂ ನೀಡಿದ್ದರು. ಆದರೆ ‘ಹರಾಮ್ ಹರಾಮ್’ ಅಭಿಯಾನ ಸಂಪೂರ್ಣ ತಣಿದಿರಲಿಲ್ಲ. 1997ರಲ್ಲಿ ಸೋನಿ ಮ್ಯೂಸಿಕ್ನವರು ಒಂದು ಹಾಡನ್ನು ಬಿಡುಗಡೆಗೊಳಿಸಿದರು. ಮೆಹಬೂಬ್ ರಚಿಸಿದ ಮತ್ತು ಎ.ಆರ್. ರೆಹ್ಮಾನ್ ಹಾಡಿದ ‘‘ಮಾ, ತುಝೇ ಸಲಾಮ್’’ ಎಂಬ ಹಾಡು ಭಾರತದಲ್ಲಿ ಮನೆ ಮನೆಗೆ ತಲುಪಿ ಎಲ್ಲೆಂದರಲ್ಲಿ ಕೇಳಿಸತೊಡಗಿತು. ವಂದೇ ಮಾತರಂ ಎಂಬ ಪದಕ್ಕೆ ಇಷ�