ಶ್ರೀವಿಶ್ವೇಶತೀರ್ಥರ ದ್ವಿತೀಯ ಆರಾಧನೋತ್ಸವ ಆರಂಭ

ಉಡುಪಿ, ಜ.4: ಪೇಜಾವರ ಮಠದ ಪದ್ಮವಿಭೂಷಣ ಪುರಸ್ಕೃತ, ಕೀರ್ತಿಶೇ ಶ್ರೀ ವಿಶ್ವೇಶತೀರ್ಥರ ದ್ವಿತೀಯ ಆರಾಧನೋತ್ಸವವು ಬೆಂಗಳೂರಿನ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠದ ಆವರಣದಲ್ಲಿರುವ ಅವರ ಮೂಲ ವೃಂದಾವನ ಸನ್ನಿಧಿಯಲ್ಲಿ ಮಂಗಳವಾರ ಆರಂಭಗೊಂಡಿತು.
ಶ್ರೀವಿಶ್ವಪ್ರಸನ್ನ ತೀರ್ಥರ ನೇತೃತ್ವದಲ್ಲಿ ಈ ಮಹೋತ್ಸವವನ್ನು ಕೋವಿಡ್ ಹಿನ್ನೆಲೆಯಲ್ಲಿ ಸರಕಾರದ ನಿಯಮಾವಳಿಗಳ ಅನುಸಾರ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಳಿಸಿ ಸರಳವಾಗಿ ನಡೆಸಲಾಗುತ್ತಿದೆ.
ಮಂಗಳವಾರ ಪೂರ್ವಾರಾಧನೆಯ ಅಂಗವಾಗಿ ವಿದ್ಯಾಪೀಠದ ಋತ್ವಿಜರಿಂದ ಶ್ರೀರಾಮ-ಕೃಷ್ಣ -ವೇದವ್ಯಾಸ - ನರಸಿಂಹ ಮಂತ್ರ ಹೋಮಗಳು ನೆರವೇರಿದವು. ಸಂಜೆ ವಿದ್ವತ್ಗೋಷ್ಠಿ ನಡೆಯಿತು. ಬುಧವಾರ ಮಧ್ಯಾರಾಧನೆ ನಡೆಯಲಿದೆ.
ಉಡುಪಿ ಹಾಗೂ ಮಂಗಳೂರು ಸಮೀಪದ ಪೇಜಾವರದ ಮಠಗಳು ಮತ್ತು ಶ್ರೀವಿಶ್ವೇಶತೀರ್ಥರು ಉತ್ತರದ ಬದರಿಯಿಂದ ದಕ್ಷಿಣದ ರಾಮೇಶ್ವರದವರೆಗೆ ಸಂಸ್ಥಾಪಿಸಿದ ಎಲ್ಲ ಸಂಘ ಸಂಸ್ಥೆಗಳು ಹಾಗೂ ಶ್ರೀಮಠದ ಶಾಖೆಗಳಲ್ಲೂ ಆರಾಧನೆಯ ನಿಮಿತ್ತ ಧಾರ್ಮಿಕ ವಿಧಿಗಳಿಗೆ ಸೀಮಿತಗೊಳಿಸಿ ಗುರು ಸ್ಮರಣೆ ನಡೆಯಲಿದೆ ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.





