ಉದ್ಯೋಗ ಕಲ್ಪಿಸದ ಕ್ರಮ ಪ್ರಶ್ನಿಸಿ ಪೊಲೀಸ್ ಪೇದೆ ಮಗನಿಂದ ಅರ್ಜಿ: ಸರಕಾರಕ್ಕೆ ಹೈಕೋರ್ಟ್ ನೋಟಿಸ್
ವೀರಪ್ಪನ್ನಿಂದ ಹತ್ಯೆಯಾಗಿದ್ದ ಪೊಲೀಸ್ ಪ್ರಕರಣ
ಬೆಂಗಳೂರು, ಜ.4: ಮೂರು ದಶಕಗಳ ಹಿಂದೆ ನರಹಂತಕ ವೀರಪ್ಪನ್ ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಕಾನ್ಸ್ಟೇಬಲ್ವೊಬ್ಬರ ಮಗನಿಗೆ ಅನುಕಂಪದ ನೌಕರಿ ಕಲ್ಪಿಸದ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಗುಂಡಿನ ದಾಳಿಯಿಂದ ಮೃತಪಟ್ಟ ಕಾನ್ ಸ್ಟೆಬಲ್ ರಾಚಪ್ಪ ಅವರ ಪುತ್ರ ನಂದೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ಸರಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರು, ಮೈಸೂರು ನಗರ ಪೊಲೀಸ್ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿಲು ಆದೇಶಿಸಿದೆ.
ಅರ್ಜಿದಾರರ ಪರ ವಾದಿಸಿದ ವಕೀಲರು, ವೀರಪ್ಪನ್ ವಿರುದ್ಧದ ಗುಂಡಿನ ಚಕಮಕಿಯಲ್ಲಿ ಮೃತಪಟ್ಟ ರಾಚಪ್ಪ ಅವರ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಬೇಕು. ಅಲ್ಲದೇ ಅವರ ಪುತ್ರ ನಂದೀಶ್ಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಮಂಜೂರು ಮಾಡುವಂತೆ ಕೋರಿ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಿಂದಲೇ 2020ರ ಜೂ.25ರಂದು ಪತ್ರ ಬರೆಯಲಾಗಿದೆ. ಆದರೂ ಸರಕಾರ ಅದನ್ನು ಈವರೆಗೂ ಪರಿಗಣಿಸಿ ನಂದೀಶ್ಗೆ ಉದ್ಯೋಗ ಕಲ್ಪಿಸಿಲ್ಲ ಎಂಬುದನ್ನು ಹೈಕೋರ್ಟ್ ಗಮನಕ್ಕೆ ತಂದರು.