ಮಂಡ್ಯ: ಟ್ರ್ಯಾಕ್ಟರ್ನಿಂದ ಬಿದ್ದು ಚಾಲಕ ಮೃತ್ಯು
ಮಂಡ್ಯ, ಜ.5: ಟ್ರ್ಯಾಕ್ಟರ್ನಿಂದ ಬಿದ್ದು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲೂಕಿನ ಮಳವಳ್ಳಿ-ಮದ್ದೂರು ಹೆದ್ದಾರಿಯ ನೆಲಮಾಕನಹಳ್ಳೀ ಗೇಟ್ ಬಳಿ ಬುಧವಾರ ಮುಂಜಾನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬಸರಕೋಡ ತಾಂಡದ ಚಂದ್ರನಾಯ್ಕ ಅವರ ಪುತ್ರ ಕೃಷ್ಣನಾಯ್ಕ(32) ಸಾವನ್ನಪ್ಪಿದವರೆಂದು ಪೊಲೀಸರು ತಿಳಿಸಿದ್ದಾರೆ.
ಕೃಷ್ಣನಾಯ್ಕ ಗ್ರಾಮದ ಇತರೆ ಜನರೊಂದಿಗೆ ಕಬ್ಬು ಕಟಾವು ಮಾಡಿ ಕೆ.ಎಂ.ದೊಡ್ಡಿಯ ಚಾಂಷುಗರ್ ಕಾರ್ಖಾನೆಗೆ ಸಾಗಿಸಲು ಬಂದಿದ್ದು, ಎಲ್ಲರೂ ತಾಲೂಕಿನ ರಾಗಿಬೊಮ್ಮನಹಳ್ಳಿ ಬಳಿ ಕ್ಯಾಂಪ್ ಮಾಡಿದ್ದರು ಎನ್ನಲಾಗಿದೆ.
ಬುಧವಾರ ಮುಂಜಾನೆ ಮಳವಳ್ಳಿಯಿಂದ ಕೆ.ಎಂ.ದೊಡ್ಡಿ ಕಡೆಗೆ ಖಾಲಿ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಅಯತಪ್ಪಿ ಕೆಳಗೆ ಬಿದ್ದ ಕೃಷ್ಣನಾಯ್ಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story