ಬೆಂಗಳೂರು: ರೆವೆನ್ಯೂ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ
ಬೆಂಗಳೂರು, ಜ.5: ಫ್ಲಾಟ್ವೊಂದಕ್ಕೆ ಖಾತೆ ಮಾಡುವ ಸಲುವಾಗಿ 4 ಸಾವಿರ ರೂ. ಲಂಚ ಕೇಳಿದ ಆರೋಪದ ಮೇಲೆ ಬಿಬಿಎಂಪಿ ರೆವೆನ್ಯೂ ಇನ್ಸ್ಪೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಬಿಬಿಎಂಪಿ 191ನೆ ವಾರ್ಡಿನ ರೆವೆನ್ಯೂ ಇನ್ಸ್ಪೆಕ್ಟರ್ ಗಿರೀಶ್ ವಿರುದ್ಧ ಎಸಿಬಿ ಮೊಕದ್ದಮೆ ದಾಖಲಿಸಿದೆ.
ಇಲ್ಲಿನ ಪರಪ್ಪನ ಅಗ್ರಹಾರ ನಿವಾಸಿಯೊಬ್ಬರು ತಾನು ಖರೀದಿಸಿದ್ದ ಫ್ಲಾಟ್ಗೆ ಖಾತೆ ಮಾಡಿಸಲು ಬಿಬಿಎಂಪಿಯ ಕೂಡ್ಲು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಫ್ಲಾಟ್ನ ಖಾತೆ ಮಾಡಿಕೊಡುವ ಸಲುವಾಗಿ ರೆವೆನ್ಯೂ ಇನ್ಸ್ಪೆಕ್ಟರ್ ಗಿರೀಶ್, 4 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.
ಈ ಸಂಬಂಧ ಎಸಿಬಿಗೆ ದಾಖಲಾಗಿದ್ದ ದೂರಿನನ್ವಯ ಬುಧವಾರ ಎಸಿಬಿ ಅಧಿಕಾರಿಗಳು, ಟ್ರ್ಯಾಪ್ ಕಾರ್ಯಾಚರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಬೆಂಗಳೂರು ನಗರ ಎಸಿಬಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.
Next Story





