ಭ್ರಷ್ಟಾಚಾರ ಕಡಿವಾಣಕ್ಕೆ ಯಾವ ಸರಕಾರ ಮುಂದಾಗಿದೆ: ಸಚಿವ ಕಾರಜೋಳರನ್ನು ಪ್ರಶ್ನಿಸಿದ ಗುತ್ತಿಗೆದಾರರ ಸಂಘ
ಶೇ. 40 ಕಮಿಷನ್ ಪ್ರಕರಣ

ಸಚಿವ ಗೋವಿಂದ ಕಾರಜೋಳ
ಬೆಂಗಳೂರು, ಜ.6: ಟೆಂಡರ್ನಲ್ಲಿ ಶೇ.40ರಷ್ಟು ಹಣವನ್ನು ಕಮಿಷನ್ ರೂಪದಲ್ಲಿ ನೀಡುವ ವಿಚಾರವಾಗಿ ರಾಜಕೀಯ ಪ್ರೇರಿತ ಆರೋಪ ಎಂದು ಹೇಳಿಕೆ ನೀಡಿರುವ ಸಚಿವ ಗೋವಿಂದ ಕಾರಜೋಳ ಅವರು, ಯಾವ ಸರಕಾರ ಭ್ರಷ್ಟಾಚಾರ ಕಡಿವಾಣಕ್ಕೆ ಮುಂದಾಗಿತ್ತು ಎಂಬ ಮಾಹಿತಿಯನ್ನು ನೀಡಿ, ಸಚಿವರು ಅಭಿನಂದನೆಗೆ ಅರ್ಹರಾಗಬೇಕೆಂದು ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್(ಕೆಎಸ್ಸಿಎ) ಆಗ್ರಹಿಸಿದೆ.
ಸಚಿವ ಕಾರಜೋಳ ಅವರು ಕೆಎಸ್ಸಿಎ ಸದಸ್ಯರು ಬರೀ 800 ಎಂದು ಹೇಳಿದ್ದಾರೆ. ಆದರೆ, ಅಸೋಸಿಯೇಷನ್ಗೆ ಸುಮಾರು 1 ಲಕ್ಷ ಗುತ್ತಿಗೆದಾರರು ಇದ್ದಾರೆ. ಅಲ್ಲದೆ, ಈ ಅಸೋಷಿಯೇಷನ್ಗೆ ಏಳು ದಶಕಗಳ ಸುದೀರ್ಘ ಇತಿಹಾಸವಿದೆ ಎಂದು ಕೆಎಸ್ಸಿಎ ಸ್ಪಷ್ಟನೆ ನೀಡಿದೆ.
ಹಿರಿಯ ಸ್ವಾತಂತ್ರ್ಯ ಹೋರಾಟಗಾರದಾದ ಅರಕಲಗೂಡು ವೆಂಕಟರಾಮಯ್ಯ ಅವರು ಈ ಸಂಘದ ಸಂಸ್ಥಾಪಕರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಈ ಸಂಘ ನಡೆಯುತ್ತಿದೆ. ಅಲ್ಲದೆ, ಈ ರಾಜ್ಯದಲ್ಲಿ 1948ರಿಂದ ಇಲ್ಲಿಯವರೆಗೆ ನಿರ್ಮಾಣವಾಗಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಾಣ ಮಾಡಿರುವ ಎಲ್ಲ ಗುತ್ತಿಗೆದಾರರು ಈ ಸಂಘದ ಸದಸ್ಯರೆಂದು ಹೇಳಲು ಹೆಮ್ಮೆ ಆಗುತ್ತದೆ ಎಂದು ಸಂಘ ಹೇಳಿದೆ.
ಸಂಘವು, ಹಲವು ದಶಕಗಳಿಂದ ವ್ಯವಸ್ಥೆ ಹೇಗೆ ಹದಗೆಡುತ್ತಾ ಬಂದಿದೆ ಎನ್ನುವುದನ್ನು ಪ್ರಧಾನಿ ಮೋದಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ರಾಜ್ಯಪಾಲರ ಗಮನಕ್ಕೂ ತಂದಿದ್ದೇವೆ. ಶೀಘ್ರದಲ್ಲೇ ಪ್ರಧಾನಿಗಳನ್ನು ಖುದ್ದು ಭೇಟಿ ಮಾಡಿ ಮತ್ತಷ್ಟು ವಿವರಗಳನ್ನು ನೀಡಲಿದ್ದೇವೆ. ಆಡಳಿತಾರೂಢ ಬಿಜೆಪಿ ಪಕ್ಷದ ವರಿಷ್ಠರನ್ನೂ ಭೇಟಿ ಮಾಡಿ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿಕೊಳ್ಳಲಿದ್ದೇವೆ.
ವ್ಯವಸ್ಥೆ ಭ್ರಷ್ಟವಾಗಲು ಪ್ರಸ್ತುತ ಸರಕಾರ ಮಾತ್ರ ಕಾರಣ ಎಂದು ಎಲ್ಲಿಯೂ ಆರೋಪ ಮಾಡಿಲ್ಲ. ಎಲ್ಲ ಪಕ್ಷಗಳ ಅವಧಿಯಲ್ಲಿಯೂ ಭ್ರಷ್ಟಾಚಾರ ಹೆಚ್ಚುತ್ತಲೇ ಬಂದಿದೆ ಎಂದು ಪ್ರತಿಪಾದಿಸುತ್ತಾ ಬಂದಿದ್ದೇವೆ. ಸಚಿವ ಕಾರಜೋಳ ಅವರು ತಮ್ಮ ಇಲಾಖೆಯ ಜವಾಬ್ದಾರಿ ಹೊತ್ತ ನಂತರ ಭ್ರಷ್ಟಾಚಾರವನ್ನು ಕೊನೆಗಾಣಿಸಲು ಹಾಕಿಕೊಂಡಿರುವ ಕಾರ್ಯ ಯೋಜನೆಗಳು, ತಮಿಳುನಾಡು ಮಾದರಿಯಲ್ಲಿ ಪ್ಯಾಕೇಜ್ ಪದ್ದತಿಗೆ ಅಂತ್ಯ ಹಾಡಿ ಸ್ಥಳೀಯ ಮತ್ತು ರಾಜ್ಯದ ಗುತ್ತಿಗೆದಾರರಿಗೆ ಮಾತ್ರ ಕಾಮಗಾರಿಗಳು ಲಭ್ಯವಾಗುವಂತೆ ರೂಪಿಸಿರುವ ನಿಯಮಾವಳಿಗಳನ್ನು ರಾಜ್ಯದ ಜನತೆಯ ಮುಂದಿಟ್ಟರೆ ಒಳಿತಾಗುತ್ತದೆ. ಒಂದು ವೇಳೆ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದರೆ ಅವರಿಗೆ ಸಹಕಾರ ನೀಡಲು ಸಂಘವು ಸದಾ ಸಿದ್ಧವಾಗಿರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.







